ಕರ್ನಾಟಕ

karnataka

ಬ್ರ್ಯಾಂಡ್ ಬೆಂಗಳೂರು: ಅಭಿಪ್ರಾಯ - ಅನಿಸಿಕೆ- ಸಲಹೆ ನೀಡುವ ಅವಧಿ ಜುಲೈ 15 ರವರೆಗೆ ವಿಸ್ತರಣೆ

By

Published : Jul 1, 2023, 3:04 PM IST

ಬೆಂಗಳೂರು ನಗರ ಅಭಿವೃದ್ಧಿಗಾಗಿ ನಾಗರಿಕರು ಸಲಹೆಗಳನ್ನು ನೀಡುವ ಅವಧಿಯನ್ನು ಜೂನ್​ 30ರಿಂದ ಜುಲೈ 15ರ ವರೆಗೆ ವಿಸ್ತರಿಸಲಾಗಿದೆ.

opinion-poll-date-extended-till-july-15-for-brand-bengaluru
ಬ್ರ್ಯಾಂಡ್ ಬೆಂಗಳೂರಿಗೆ ಅಭಿಪ್ರಾಯ/ಅನಿಸಿಕೆ/ಸಲಹೆಗಳನ್ನು ನೀಡುವ ಅವಧಿ ಜುಲೈ 15 ರವರೆಗೆ ವಿಸ್ತರಣೆ

ಬೆಂಗಳೂರು : ರಾಜಧಾನಿ ಬೆಂಗಳೂರು ನಗರ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಅಭಿಪ್ರಾಯ, ಅನಿಸಿಕೆ, ಸಲಹೆಗಳನ್ನು ನೀಡುವ ಅವಧಿಯನ್ನು ಜೂನ್ 30 ರಿಂದ ಜುಲೈ 15 ರವರೆಗೆ ವಿಸ್ತರಿಸಲಾಗಿದೆ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ನಗರ ಸಮಗ್ರ ಅಭಿವೃದ್ಧಿ ಹಾಗೂ ಬ್ರ್ಯಾಂಡ್ ಬೆಂಗಳೂರು ಮಾಡುವ ಉದ್ದೇಶದಿಂದ ಈಗಾಗಲೇ ಸರ್ವಪಕ್ಷ ಶಾಸಕರ ಜೊತೆ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರ ಜೊತೆ ಸಭೆ ನಡೆಸಿ ಅಭಿಪ್ರಾಯ- ಸಲಹೆಗಳನ್ನು ಪಡೆದಿದ್ದರು.

ಬೆಂಗಳೂರಿನ ನಾಗರಿಕರು ಹಾಗೂ ಬೇರೆ ರಾಜ್ಯ, ದೇಶ ಮತ್ತು ವಿದೇಶದಲ್ಲಿರುವಂತಹ ಎಲ್ಲ ವರ್ಗದ ನಾಗರಿಕರು ಬೆಂಗಳೂರಿನ ಅಭಿವೃದ್ಧಿಗಾಗಿ ಏಳು ವಿಚಾರಗಳಾದ ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು ಕುರಿತು ತಮ್ಮ ಅಭಿಪ್ರಾಯ, ಅನಿಸಿಕೆ ಮತ್ತು ಸಲಹೆಗಳನ್ನು ನೀಡುವ ಸಲುವಾಗಿ ಜೂನ್ 21 ರಂದು ಪ್ರತ್ಯೇಕ ವೆಬ್ ಪೋರ್ಟಲ್ www.brandbengaluru.karnataka.gov.in ಬಿಡುಗಡೆಗೊಳಿಸಲಾಗಿತ್ತು.

ಇದರಲ್ಲಿ ಜೂನ್ 30ರವರೆಗೆ ಅಭಿಪ್ರಾಯ ಅನಿಸಿಕೆ ಹಾಗೂ ಸಲಹೆಗಳನ್ನು ನೀಡುವಂತೆ ನಾಗರಿಕರಲ್ಲಿ ಕೋರಲಾಗಿತ್ತು. ಅದರಂತೆ, ನಾಗರಿಕರಿಂದ ನಿರೀಕ್ಷೆಗೂ ಮೀರಿ ಅನಿಸಿಕೆ ಹಾಗೂ ಸಲಹೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ನಾಗರಿಕರು ನೀಡುವ ಅಭಿಪ್ರಾಯ, ಸಲಹೆಗಳ ಸಮೀಕ್ಷೆಯ ಅವಧಿಯನ್ನು ಜೂ. 30 ರಿಂದ ಜುಲೈ 15 ರವರೆಗೆ ವಿಸ್ತರಿಸಲಾಗಿದೆ. ಎಲ್ಲ ನಾಗರಿಕರು ಈ ಸದಾವಕಾಶವನ್ನು ಉಪಯೋಗಿಸಿಕೊಂಡು 'ಬ್ರ್ಯಾಂಡ್ ಬೆಂಗಳೂರು, ಬೆಟರ್ ಬೆಂಗಳೂರು ' ಸಮೀಕ್ಷೆಯಲ್ಲಿ ಪಾಲ್ಗೊಂಡು ಇನ್ನೂ ಹೆಚ್ಚು-ಹೆಚ್ಚು ಸಲಹೆಗಳನ್ನು ನೀಡುವ ಮೂಲಕ ಬೆಂಗಳೂರು ನಗರ ಸಮಗ್ರ ಅಭಿವೃದ್ಧಿಗೆ ಕೈ-ಜೋಡಿಸಲು ವಿನಂತಿ ಮಾಡಿಕೊಳ್ಳಲಾಗಿದೆ.

ನಾಗರಿಕರು ವೆಬ್ ಪೋರ್ಟಲ್ www.brandbengaluru.karnataka.gov.in ಮೂಲಕ ಮಾತ್ರವಲ್ಲದೇ ವ್ಯಾಟ್ಸ್​ಆ್ಯಪ್​ ಸಂಖ್ಯೆ: 9480685700 ಮೂಲಕವೂ ಅಭಿಪ್ರಾಯ- ಅನಿಸಿಕೆ ಮತ್ತು ಸಲಹೆಗಳನ್ನು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ: 1533 ಗೆ ಕರೆಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರಿನ ಅಭಿವೃದ್ಧಿಗೆ ಆರು ತಿಂಗಳಲ್ಲಿ ನೀಲನಕ್ಷೆ :ಅಧಿಕಾರಿಗಳು ಹಾಗೂ ಬೆಂಗಳೂರಿನ ಪ್ರಮುಖರನ್ನು ಒಳಗೊಂಡ ಸಮಿತಿ ರಚಿಸಿ, ಬೆಂಗಳೂರಿನ ಅಭಿವೃದ್ಧಿಗೆ ಆರು ತಿಂಗಳಲ್ಲಿ ನೀಲನಕ್ಷೆ ಸಿದ್ಧಪಡಿಸಲಾಗುವುದು ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದ್ದರು.

ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕುರಿತು ನಗರದ 42 ಪ್ರಮುಖ ವ್ಯಕ್ತಿಗಳ ಜತೆ ವಿಧಾನಸೌಧದಲ್ಲಿ ಸುದೀರ್ಘ ಸಭೆ ನಡೆಸಿ ಮಾತನಾಡಿದ್ದ ಡಿಸಿಎಂ,''ಈ ಸಭೆಯಲ್ಲಿ ಅನೇಕ ಮೌಲ್ಯಯುತ ಸಲಹೆಗಳು ಬಂದಿವೆ. ಮೊದಲು ಎಲ್ಲ ಪಕ್ಷಗಳ ಶಾಸಕರ ಅಭಿಪ್ರಾಯ ಪಡೆದಿದ್ದೆ. ಈಗ ಕೈಗಾರಿಕೆ, ಬಂಡವಾಳ ಹೂಡಿಕೆದಾರರ ಅಭಿಪ್ರಾಯ ಪಡೆದಿದ್ದೇನೆ ಎಂದು ಹೇಳಿದ್ದರು.

''ನಗರದಲ್ಲಿ ಹೈ ಡೆನ್ಸಿಟಿ ಕಾರಿಡಾರ್, ಕಸ ಹಾಗೂ ಕೊಳಚೆ ನೀರು ನಿರ್ವಹಣೆ, ಕೊಳಚೆ ನೀರು ಪರಿಷ್ಕರಣೆ ಮತ್ತು ಮರುಬಳಕೆ, ಕಾವೇರಿ ನೀರು ಪೂರೈಕೆ, ಮೆಟ್ರೋ ಸಂಪರ್ಕ ವಿಸ್ತರಣೆ, ಮೊನೊ ರೈಲು, ಉಪನಗರ ರೈಲು, ಉತ್ತಮ ಗುಣಮಟ್ಟದ ಶಿಕ್ಷಣ, ಕೊಳಗೇರಿ ಪ್ರದೇಶ ಅಭಿವೃದ್ಧಿ, ರಸ್ತೆ ಅಗಲೀಕರಣ, ಎಲಿವೇಟೆಡ್ ರಸ್ತೆ, ನಗರದಲ್ಲಿ ಸುರಂಗ ರಸ್ತೆಗಳ ನಿರ್ಮಾಣ, ವಾಹನ ನಿಲುಗಡೆ, ಭ್ರಷ್ಟಾಚಾರ ನಿಯಂತ್ರಣ ಸೇರಿದಂತೆ ಅನೇಕ ಸಲಹೆ ನೀಡಿದ್ದಾರೆ‌'' ಎಂದು ತಿಳಿಸಿದ್ದರು.

ಇದನ್ನೂ ಓದಿ :Brand Bengaluru: ಬ್ರ್ಯಾಂಡ್ ಬೆಂಗಳೂರು ಅಭಿವೃದ್ಧಿಗೆ ಪ್ರಮುಖರ ಸಮಿತಿ ರಚಿಸಿ, ಆರು ತಿಂಗಳಲ್ಲಿ ಮಾಸ್ಟರ್ ಪ್ಲಾನ್ ಸಿದ್ಧ: ಡಿಸಿಎಂ ಡಿಕೆಶಿ

ABOUT THE AUTHOR

...view details