ಕರ್ನಾಟಕ

karnataka

ETV Bharat / state

ಆಪರೇಷನ್​ ವೀರಪ್ಪನ್, ಮೃತಪಟ್ಟ ಪೊಲೀಸ್ ಪೇದೆ ಮಗನಿಗೆ ನೌಕರಿ ನೀಡದ ಸರ್ಕಾರ: ಹೈಕೋರ್ಟ್​ನಿಂದ ನೋಟಿಸ್ - ವೀರಪ್ಪನ ನಡೆಸಿದ ದಾಳಿಯಲ್ಲಿ ಪೊಲೀಸ್​ ಪೇದೆ ರಾಚಪ್ಪ ಸಾವು

Operation Veerappan case: ಕಾಡುಗಳ್ಳ ವೀರಪ್ಪನ್​ 1992ರ ಮೇ 20ರ ನಡುರಾತ್ರಿ ರಾಮಾಪುರ ಪೊಲೀಸ್ ಠಾಣೆ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಪೊಲೀಸ್​​ ಕಾನ್ಸ್​ಟೇಬಲ್​ ರಾಚಪ್ಪ ಮೃತಪಟ್ಟಿದ್ದರು. ಇವರ ಮಗನಿಗೆ ಅನುಕಂಪದ ನೌಕರಿಯನ್ನು ಸರ್ಕಾರ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಹೈಕೋರ್ಟ್​
ಹೈಕೋರ್ಟ್​

By

Published : Jan 4, 2022, 9:11 PM IST

ಬೆಂಗಳೂರು:ನರಹಂತಕ ವೀರಪ್ಪನ್ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಕಾನ್ಸ್​ಟೇಬಲ್​ವೊಬ್ಬರ ಮಗನಿಗೆ ಅನುಕಂಪದ ನೌಕರಿ ಕಲ್ಪಿಸದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಮೃತ ಕಾನ್ಸ್​ಟೇಬಲ್​ ರಾಚಪ್ಪ ಅವರ ಪುತ್ರ ನಂದೀಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್.ಟಿ ನರೇಂದ್ರ ಪ್ರಸಾದ್ ಅವರಿದ್ದ ಪೀಠ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿಲು ಆದೇಶಿಸಿದೆ.

ಇದನ್ನೂ ಓದಿ:ಮಗುವಿನ ಪಿತೃತ್ವ ಪರೀಕ್ಷೆ: ಅತ್ಯಾಚಾರ ಆರೋಪಿಯ ಡಿಎನ್ಎ ಪರೀಕ್ಷೆ ಆದೇಶ ಎತ್ತಿಹಿಡಿದ ಹೈಕೋರ್ಟ್

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಗಿರಿಕುಮಾರ್ ವಾದ ಮಂಡಿಸಿ, ವೀರಪ್ಪನ್ ವಿರುದ್ಧದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ರಾಚಪ್ಪ ಅವರ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ಅಲ್ಲದೇ ಅವರ ಪುತ್ರ ನಂದೀಶ್‌ಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಮಂಜೂರು ಮಾಡುವಂತೆ ಕೋರಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಿಂದಲೇ 2020ರ ಜೂ.25ರಂದು ಪತ್ರ ಬರೆಯಾಲಾಗಿದೆ. ಆದರೂ ಸರ್ಕಾರ ಅದನ್ನು ಈವರೆಗೂ ಪರಿಗಣಿಸಿ ನಂದೀಶ್‌ಗೆ ಉದ್ಯೋಗ ಕಲ್ಪಿಸಿಲ್ಲ ಎಂಬುದನ್ನು ಹೈಕೋರ್ಟ್ ಗಮನಕ್ಕೆ ತಂದರು.

ಪ್ರಕರಣದ ಹಿನ್ನೆಲೆ:

ಮೃತ ಕಾನ್ಸ್​ಟೇಬಲ್​ 1991ರಲ್ಲಿ ಕೊಳ್ಳೇಗಾಲದ ರಾಮಾಪುರ ಪೊಲೀಸ್ ಠಾಣೆಗೆ ನಿಯೋಜನೆಗೊಂಡಿದ್ದರು. ವೀರಪ್ಪನ್ ಬಂಧನಕ್ಕೆ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ರಚಿಸಿದ್ದ ವಿಶೇಷ ಕಾರ್ಯಪಡೆಯಲ್ಲಿ ರಾಚಪ್ಪ ಅವರನ್ನೂ ಸೇರಿಸಲಾಗಿತ್ತು. 1992ರ ಮೇ 20ರ ನಡುರಾತ್ರಿ 1 ಗಂಟೆ ವೇಳೆ ರಾಮಾಪುರ ಪೊಲೀಸ್ ಠಾಣೆ ಮೇಲೆ ವೀರಪ್ಪನ್ 30 ಮಂದಿ ಸಹಚರರೊಂದಿಗೆ ಗುಂಡಿನ ದಾಳಿ ನಡೆಸಿದ್ದಾಗ ರಾಚಪ್ಪ ಸೇರಿ ಐವರು ಪೊಲೀಸರು ಮೃತಪಟ್ಟಿದ್ದರು.

1993ರಲ್ಲಿ ರಾಚಪ್ಪ ಪತ್ನಿ ಅಂದಿನ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ, ಮಗನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಕೋರಿದ್ದರು. ಆದರೆ, ಮಗ ಅಪ್ರಾಪ್ತನಾಗಿದ್ದ ಕಾರಣ, ಪ್ರೌಢಾವಸ್ಥೆ ತಲುಪಿದ ಐದು ವರ್ಷಗಳ ಒಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿ ವರಿಷ್ಠಾಧಿಕಾರಿ ಹಿಂಬರಹ ನೀಡಿದ್ದರು. ಇದಾದ ನಂತರ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಉದ್ಯೋಗ ಕಲ್ಪಿಸಿರಲಿಲ್ಲ. ಈ ಹಿನ್ನೆಲೆ ಪುತ್ರ ನಂದೀಶ್ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

For All Latest Updates

TAGGED:

ABOUT THE AUTHOR

...view details