ಬೆಂಗಳೂರು:ಕೊರೊನಾ ವೈರಸ್ ಹಾವಳಿ ಬಳಿಕ ಶಾಲಾ ಮಕ್ಕಳಿಗೆ ಆನ್ಲೈನ್ ತರಗತಿಗಳನ್ನು ಆರಂಭಿಸಿ, ವಿದ್ಯಾರ್ಥಿಗಳ ಕಲಿಕೆಗೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಆದರೆ ಆನ್ಲೈನ್ ತರಗತಿಗಳು ನಿಜಕ್ಕೂ ವಿದ್ಯಾರ್ಥಿಗಳ ಕಲಿಕೆಗೆ ಉಪಯುಕ್ತವಾಗಿವೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಮಕ್ಕಳ ಬೌದ್ಧಿಕ ಮಟ್ಟ ವೃದ್ಧಿಸಬೇಕಿದ್ದ ಆನ್ಲೈನ್ ಶಿಕ್ಷಣ ವ್ಯವಸ್ಥೆ, ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎನ್ನಲಾಗುತ್ತಿದೆ.
ದೇಶಾದ್ಯಂತ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದು, ಹಂತ ಹಂತವಾಗಿ ಶಾಲಾ-ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. ಕೆಲ ದಿನಗಳಿಂದ ಪದವಿ, ದ್ವಿತೀಯ ಪಿಯು ಹಾಗೂ ಎಸ್ಸೆಸ್ಸೆಲ್ಸಿ ತರಗತಿ ಆರಂಭಿಸಲಾಗಿದೆ. ಉಳಿದಂತೆ ಎಲ್ಲಾ ತರಗತಿಗಳನ್ನು ಆನ್ಲೈನ್ ಮೂಲಕವೇ ನಡೆಸಲಾಗುತ್ತಿದೆ. ಆದರೆ, ಕೊರೊನಾ ಭಯಕ್ಕೆ ಸರ್ಕಾರ ಹಾಗೂ ಪೋಷಕರು, ಆನ್ಲೈನ್ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಆನ್ಲೈನ್ ಶಿಕ್ಷಣ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತಿದೆ.
ಆನ್ಲೈನ್ ಶಿಕ್ಷಣ ತಂದೊಡ್ಡಿದೆ ಮಕ್ಕಳಿಗೆ ಸಂಕಟ ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆನ್ಲೈನ್ ಶಿಕ್ಷಣ ಮೊಬೈಲ್ ಹಾಗೂ ಲ್ಯಾಪ್ಟಾಪ್ ಮೂಲಕ ಪಡೆಯಬೇಕಿರುವ ಕಾರಣ ಪ್ರೌಢ, ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳು ಕಣ್ಣು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ದಿನವಿಡೀ ಆನ್ಲೈನ್ ತರಗತಿ ನಡೆಸುತ್ತಿರುವುದರಿಂದ, ನಗರದಲ್ಲಿರುವ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.
ಓದುವ ವಯಸ್ಸಿನಲ್ಲಿ ಮಕ್ಕಳ ಕೈಗೆ ಮೊಬೈಲ್ ಸಿಕ್ಕಿರುವುದು ಬೌದ್ಧಿಕ ಮಟ್ಟಕ್ಕಿಂತ ಕೆಟ್ಟ ಹವ್ಯಾಸಗಳಿಗೂ ಕಾರಣವಾಗುತ್ತಿದೆ. ತರಗತಿ ಪೂರ್ಣಗೊಳ್ಳುವವರೆಗೆ ಪೋಷಕರು ಮಕ್ಕಳ ಮುಂದೆ ಕೂಡಲು ಆಗುವುದಿಲ್ಲ. ಹೀಗಾಗಿ ಬೇಸರ ತರಿಸುವ ಆನ್ಲೈನ್ ತರಗತಿಗಳನ್ನು ಬಹುತೇಕ ವಿದ್ಯಾರ್ಥಿಗಳು ಸ್ಕಿಪ್ ಮಾಡುತ್ತಿದ್ದು, ಮೊಬೈಲ್ ಗೇಮ್ಗಳ ಗೀಳು ಹಚ್ಚಿಕೊಳ್ಳುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಹೆಚ್ಚು ಮಾಡುತ್ತಿದ್ದು, ಓದಿನ ಕಡೆಗಿಂತ ಇನ್ನಿತರ ಚಟುವಟಿಕೆಗಳಲ್ಲಿ ಮಕ್ಕಳು ಬ್ಯೂಸಿಯಾಗುತ್ತಿದ್ದಾರೆ.
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆನ್ಲೈನ್ ಶಿಕ್ಷಣ ವ್ಯವಸ್ಥೆ ದಶಕಗಳ ಹಿಂದೆಯೇ ಜಾರಿಯಾಗಿದೆ. ಆದರೆ, ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಆನ್ಲೈನ್ ಶಿಕ್ಷಣ ವ್ಯವಸ್ಥೆ ಹೊಸದು. ಪ್ರಾಯೋಗಿಕವಾಗಿ ನಡೆಸದೇ ದೇಶದಲ್ಲಿ ಏಕಾಏಕಿ ಆನ್ಲೈನ್ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದಿದ್ದು, ಮಕ್ಕಳಿಗೆ ಹಾಗೂ ಪೋಷಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆನ್ಲೈನ್ ತರಗತಿಗಳಿಗೆ ಹಾಜರಾದರೂ ಕಷ್ಟ, ಗೈರಾದರೂ ಶಿಕ್ಷಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
ಇನ್ನು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆಯಾಗುತ್ತಿದ್ದು, ಆನ್ಲೈನ್ ಪಾಠ ಕೇಳುವುದು ಕಷ್ಟವಾಗಿದೆ. ಇನ್ನು ಬಡವರ್ಗದ ಮಕ್ಕಳಿಗೆ ಮೊಬೈಲ್, ಲ್ಯಾಪ್ಟಾಪ್ ಖರೀದಿಸುವುದು ಕಷ್ಟವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಳೆದ ವರ್ಷ ಪ್ರವಾಹ ಹಾಗೂ ಈ ವರ್ಷದ ಅತಿವೃಷ್ಟಿಯಿಂದ ಬೆಳೆಗಳೆಲ್ಲವೂ ಹಾನಿಯಾಗಿದ್ದು, ರೈತರಿಗೆ ಒಂದು ಪೈಸೆ ಲಾಭವಾಗಿಲ್ಲ. ಬಡವರ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಗಗನಕುಸುಮವಾಗಿದೆ. ಆನ್ಲೈನ್ ಶಿಕ್ಷಣದ ಪರಿಣಾಮ ಕೆಲವರು ಶಿಕ್ಷಣ ಹಕ್ಕಿನಿಂದಲೂ ವಂಚಿತರಾಗುತ್ತಿದ್ದಾರೆ ಎಂದು ಶಿಕ್ಷಣ ತಜ್ಞರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.