ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಕೊರೊನಾ ಸಂದರ್ಭದಲ್ಲಿ ನಡೆಸುವುದು ಸರಿಯಲ್ಲ. ಇದನ್ನು ಶಿಕ್ಷಣ ಸಚಿವರು ಅರ್ಥ ಮಾಡಿಕೊಂಡು ಪರೀಕ್ಷೆಯನ್ನು ಮುಂದೂಡಬೇಕು
ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್ಯುಐ) ಒತ್ತಾಯಿಸಿದೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಎನ್ಎಸ್ಯುಐ ಬೆಂಗಳೂರು ನಗರ ಘಟಕದ ಉಪಾಧ್ಯಕ್ಷ ದೀಪಕ್ ಗೌಡ ಪಿ. ಮನವಿ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಸುರೇಶ್ ಕುಮಾರ್ ನಿವಾಸದ ಮುಂಭಾಗ ಪ್ರತಿಭಟನೆ ನಡೆಸಿದ ಎನ್ಎಸ್ಯುಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಕೆಲ ಸದಸ್ಯರ ನಿಯೋಗ ದೀಪಕ್ ಗೌಡ ನೇತೃತ್ವದಲ್ಲಿ ತೆರಳಿ, ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.
ಮನವಿ ಪತ್ರದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದು ಸರಿಯಲ್ಲ, ಕೊರೊನಾ ಆತಂಕ ಹೆಚ್ಚಿರುವಾಗ ಮಕ್ಕಳು ಪರೀಕ್ಷೆ ಬರೆಯುವುದಕ್ಕೆ ಬರಲು ಹೆದರುತ್ತಿದ್ದಾರೆ. ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆ ನಡೆಸದಿರುವುದು ಸೂಕ್ತ ಎಂದು ಮನವಿ ಮಾಡಿದ್ದಾರೆ.
ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ನಡೆಸುವುದು ಅಸಾಧ್ಯದ ಸಂಗತಿ. ಅನೇಕ ವಿದ್ಯಾರ್ಥಿಗಳು ಹಾಗೂ ಪಾಲಕರು ತಾವು ಇರುವ ಹಳ್ಳಿಗಳಿಂದ ಪರೀಕ್ಷೆ ನಡೆಯುವ ಸ್ಥಳಕ್ಕೆ ತಲುಪಲು ಸೂಕ್ತ ಸೌಕರ್ಯ ಕೂಡ ಇಲ್ಲ. ಲಾಕ್ ಡೌನ್ ಘೋಷಣೆ ಇರುವ ಹಿನ್ನೆಲೆ ಪಠ್ಯ ಸಲಕರಣೆಯನ್ನು ಕೂಡ ಸರಿಯಾಗಿ ತೆಗೆದುಕೊಂಡು ಬರಲು ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಹಳ್ಳಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಹಿನ್ನೆಲೆ ಪರೀಕ್ಷಾ ಕೇಂದ್ರಗಳಿಗೆ ಮಕ್ಕಳು ಸರಿಯಾದ ಸಮಯಕ್ಕೆ ಬಂದು ತಲುಪಲು ಕೂಡ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಪತ್ರದಲ್ಲಿ ಅವರು, ಪರೀಕ್ಷೆ ವೇಳೆ ಯಾವುದೇ ವಿದ್ಯಾರ್ಥಿ ಕೋವಿಡ್-19 ಗೆ ತುತ್ತಾದರೆ ಅದು ಸಮುದಾಯಕ್ಕೆ ವ್ಯಾಪಿಸುವಲ್ಲಿ ಅನುಮಾನವಿಲ್ಲ. ಹಲವು ಮಾಧ್ಯಮ ಸಮೀಕ್ಷೆಗಳು ಕೂಡ ಕೊರೊನಾ ಹರಡುವ ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆ ಪೋಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ಕೂಡ ಈ ಪರೀಕ್ಷೆ ನಡೆಸುವುದಕ್ಕೆ ವಿರೋಧ ಇದೆ. ಇದರಿಂದ ಈ ಮೇಲಿನ ಎಲ್ಲಾ ಅಂಶವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯನ್ನು ಮುಂದೂಡುವಂತೆ ಹಾಗೂ ತಾತ್ಕಾಲಿಕವಾಗಿ ರದ್ದುಪಡಿಸುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ತಮಿಳುನಾಡು ಹಾಗೂ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಮಾದರಿಯಲ್ಲಿ ಆಗಸ್ಟ್ ವರೆಗೆ ಪರೀಕ್ಷೆ ಮುಂದೂಡಿ, ಕೋವಿಡ್-19 ಕಾಯಿಲೆ ಪ್ರಮಾಣ ಕಡಿಮೆ ಆದ ಮೇಲೆ ಪರೀಕ್ಷೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದರು.