ಕರ್ನಾಟಕ

karnataka

By

Published : Jan 8, 2021, 6:48 AM IST

ETV Bharat / state

ಕೋವಿಡ್‌ ಸಂಕಷ್ಟದಲ್ಲಿ ಅನಿವಾಸಿ ಕನ್ನಡಿಗರ ನೆರವಿಗೆ ಬರಬೇಕಾಗಿದ್ದ ರಾಜ್ಯ ಎನ್‌ಆರ್‌ಐ ಸಮಿತಿ ಅನಾಥ !

ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಾರ್ಥ್ ಅಮೆರಿಕ ಕನ್ನಡಿಗರ ಸಂಘ 5ನೇ ವಿಶ್ವ ಕನ್ನಡ ಸಮಾವೇಶ ಒಹಾಯೋ ನಗರದಲ್ಲಿ ಆಚರಿಸಲು ಸಮಿತಿಯ ನಿಧಿಯಿಂದ 5 ಲಕ್ಷ ರೂ. ನೀಡಲಾಗಿದೆ. ಸಿಂಗಪುರ, ಆಸ್ಟ್ರೇಲಿಯಾ, ಕೀನ್ಯಾ, ಸೌದಿ ಅರೇಬಿಯಾ, ಯುಎಇ, ಬೆಹ್ರರಿನ್‌, ಯುಎಸ್‌ಎ, ತಾಂಝೇನಿಯಾ, ಬ್ರಿಟನ್‌ನಲ್ಲಿರುವ ಕನ್ನಡ ಸಂಘಗಳಿಗೆ ಸಮಿತಿಯ ಮಾನ್ಯತೆ ನೀಡಲಾಗಿದೆ.

ಕೋವಿಡ್‌ ಸಂಕಷ್ಟದಲ್ಲಿ ಅನಿವಾಸಿ ಕ್ನಡಿಗರ ನೆರವಿಗೆ ಬರಬೇಕಾಗಿದ್ದ ರಾಜ್ಯ ಎನ್‌ಆರ್‌ಐ ಸಮಿತಿ ಅನಾಥ
Non-Resident Indian Committee

ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಹಿತ ಕಾಯುವ ದೃಷ್ಟಿಯಿಂದ ಸರ್ಕಾರ ರಾಜ್ಯದಲ್ಲಿ ಅನಿವಾಸಿ ಭಾರತೀಯ (ಎನ್‌ಆರ್‌ಐ) ಸಮಿತಿ ಸ್ಥಾಪಿಸಲಾಗಿತ್ತು. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರಿಗೆ ಸಹಾಯಹಸ್ತ ಚಾಚ ಬೇಕಾಗಿದ್ದ ಎನ್ಆರ್ ಐ ಸಮಿತಿ ಇದೀಗ ಅನಾಥವಾಗಿದೆ.

ಈ ಹಿಂದೆ 2008 - 09ರಲ್ಲಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ, 2008ರ ಆ. 5ರಂದು ಸಮಿತಿಯನ್ನು ಸ್ಥಾಪಿಸಿ ಆದೇಶ ಹೊರಡಿಸಲಾಗಿತ್ತು. ಇದರ‌ ಪ್ರಮುಖ ಉದ್ದೇಶ ವಿದೇಶಗಳಲ್ಲಿ ನೆಲೆಸಿರುವ ನಮ್ಮ ಕನ್ನಡಿಗರ ಆಸೆ, ಆಕಾಂಕ್ಷೆಗಳು, ಸಮಸ್ಯೆಗಳಿಗೆ ಸ್ಪಂದಿಸುವುದಾಗಿತ್ತು. ಸ್ವಾಯತ್ತ ಸಂಸ್ಥೆಯಾಗಿರುವ ಈ ಸಮಿತಿಗೆ ಸಿಎಂ ಅಧ್ಯಕ್ಷರಾಗಿದ್ದು, ಸಮಿತಿಯ ಕಾರ್ಯಗಳನ್ನು ನೋಡಿಕೊಳ್ಳಲು ಉಪಾಧ್ಯಕ್ಷರೊಬ್ಬರನ್ನು ಸರ್ಕಾರ ನಾಮ ನಿರ್ದೇಶನ ಮಾಡುತ್ತದೆ. ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನವನ್ನೂ ನೀಡಲಾಗುತ್ತದೆ.

ಆದರೆ, ಕಳೆದ ಎರಡೂವರೆ ವರ್ಷದಿಂದ ಉಪಾಧ್ಯಕ್ಷ ಹುದ್ದೆ ಖಾಲಿ ಇದ್ದು, ಅನಾಥವಾಗಿದೆ. ಯಾವ ಉದ್ದೇಶಕ್ಕೆ ಸಮಿತಿಯನ್ನು ಸ್ಥಾಪಿಸಲಾಗಿತ್ತೋ ಆ ಉದ್ದೇಶ ಈಡೇರಿಕೆ ಸಾಧ್ಯವಾಗುತ್ತಿಲ್ಲ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವಿದೇಶಿ ಕನ್ನಡಿಗರ ಹಿತರಕ್ಷಣೆಗೆ ಮುಂದಾಗಬೇಕಿದ್ದ ಈ ಸಮಿತಿ, ಇದೀಗ ಇದ್ದೂ ಇಲ್ಲದಂತಾಗಿದೆ. ಬರೇ ನಾಮಕೇವಾಸ್ತೆ ಎನ್ಆರ್ ಐ ಸಮಿತಿ ಇದ್ದು, ಯಾವುದೇ ಕಾರ್ಯಚಟುವಟಿಕೆ ಇಲ್ಲದೆ ಅಕ್ಷರಶಃ ಸ್ತಬ್ಧವಾಗಿದೆ. ಸಮಿತಿಯ ಜವಾಬ್ದಾರಿ ವಹಿಸಲು ಉಪಾಧ್ಯಕ್ಷರೇ ಇಲ್ಲದ ಕಾರಣ ಯಾವುದೇ ಕಾರ್ಯಚಟುವಟಿಕೆ ಇಲ್ಲದೇ ಅನಾಥವಾಗಿದೆ. ಅನಿವಾಸಿ ಕನ್ನಡಿಗರ ಸಂಪರ್ಕ ಸಾಧಿಸಿ, ಹಿತರಕ್ಷಣೆ ಮತ್ತು ರಾಜ್ಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ವ್ಯವಸ್ಥೆ ರಚಿಸುವುದು, ಹೊರ ದೇಶಗಳಲ್ಲಿರುವ ಕನ್ನಡಿಗರ ಸಂಘಟನೆಗಳ ಜೊತೆ ಸಂಪರ್ಕ, ಸಮನ್ವಯ ಸಾಧಿಸುವ ಜೊತೆಗೆ, ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಪ್ರಚೋದಿಸುವುದು, ಸಮಸ್ಯೆಗಳಿದ್ದರೆ ಪರಿಹರಿಸುವುದು ಈ ಸಮಿತಿಯ ಹೊಣೆಗಾರಿಕೆಯಾಗಿದೆ.

ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಾರ್ಥ್ ಅಮೆರಿಕ ಕನ್ನಡಿಗರ ಸಂಘ 5ನೇ ವಿಶ್ವ ಕನ್ನಡ ಸಮಾವೇಶ ಒಹಾಯೋ ನಗರದಲ್ಲಿ ಆಚರಿಸಲು ಸಮಿತಿಯ ನಿಧಿಯಿಂದ 5 ಲಕ್ಷ ರೂ. ನೀಡಲಾಗಿದೆ. ಸಿಂಗಪುರ, ಆಸ್ಟ್ರೇಲಿಯಾ, ಕೀನ್ಯಾ, ಸೌದಿ ಅರೇಬಿಯಾ, ಯುಎಇ, ಬೆಹ್ರರಿನ್‌, ಯುಎಸ್‌ಎ, ತಾಂಝೇನಿಯಾ, ಬ್ರಿಟನ್‌ನಲ್ಲಿರುವ ಕನ್ನಡ ಸಂಘಗಳಿಗೆ ಸಮಿತಿಯ ಮಾನ್ಯತೆ ನೀಡಲಾಗಿದೆ.

ಎನ್ಆರ್ ಐ ಸಮಿತಿಗೆ ಕ್ಯಾಪ್ಟನ್ ಗಣೇಶ್‌ ಕಾರ್ಣಿಕ್‌ (2009 ಮೇ 1ರಿಂದ 2012ರ ಡಿ. 26) ಮೊದಲ ಉಪಾಧ್ಯಕ್ಷರಾಗಿದ್ದರು. ಬಳಿಕ ವಿ.ಸಿ ಪ್ರಕಾಶ (2013ರ ಆ. 20ರಿಂದ 2016 ನ. 18) ಮತ್ತು ಆರತಿ ಕೃಷ್ಣ (2016ರ ನ. 18ರಿಂದ 2018 ಮೇ 31) ಉಪಾಧ್ಯಕ್ಷರಾಗಿದ್ದರು.

ಓದಿ : ಬಸ್​ ದರ ಇಳಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಕರಾರಸಾ ನಿಗಮ!

ಎನ್‌ಆರ್​​​ಐ ಸಮಿತಿಯ ಸದ್ಯದ ಸ್ಥಿತಿಗತಿ ಹೇಗಿದೆ?: ಬಜೆಟ್​​​ನಲ್ಲಿ ಎನ್‌ಆರ್ ಐ ಸಮಿತಿಗೆ ಪ್ರತಿ ವರ್ಷ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಆದರೆ, ಸಮಿತಿಗೆ ಮಂಜೂರಾದ ಅನುದಾನ ಬೆರಳೆಣಿಕೆಯಷ್ಟು ಸಿಬ್ಬಂದಿಯ ಸಂಬಳಕ್ಕೆ ಬಳಕೆಯಾಗುತ್ತಿದ್ದು, ಉಳಿದ ಹಣ ಲ್ಯಾಪ್ಸ್‌ ಆಗುತ್ತಿದೆ. ವಿಕಾಸಸೌಧದಲ್ಲಿ ನೆಲಮಹಡಿಯಲ್ಲಿ ಕಚೇರಿ ಹೊಂದಿರುವ ಈ ಸಮಿತಿಗೆ 13 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಉಪಾಧ್ಯಕ್ಷರ ಆಪ್ತ ಶಾಖೆಗೆ ಮಂಜೂರಾದ ಎಲ್ಲ 6 ಹುದ್ದೆಗಳು ಉಪಾಧ್ಯಕ್ಷರಿಲ್ಲದೇ ಖಾಲಿ ಇವೆ. ಸಮಿತಿ ಶಾಖೆಯ ಏಳು ಹುದ್ದೆಗಳ ಪೈಕಿ, ಸದಸ್ಯ ಕಾರ್ಯದರ್ಶಿಯನ್ನು ನಿಯೋಜನೆ ಮೇಲೆ ನೇಮಿಸಲಾಗಿದೆ. ಅಧೀನ ಕಾರ್ಯದರ್ಶಿ ಮತ್ತು ಹಿರಿಯ ಸಹಾಯಕ ಹುದ್ದೆ ಖಾಲಿ ಇದೆ. ಡಾಟಾ ಎಂಟ್ರಿ, ಕಿರಿಯ ಸಹಾಯಕ, ವಾಹನ ಚಾಲಕ, ಗ್ರೂಪ್‌ ‘ಡಿ’ ತಲಾ ಒಂದು ಹುದ್ದೆಗೆ ಹೊರಗುತ್ತಿಗೆ ನೇಮಕ ಮಾಡಿಕೊಳ್ಳಲಾಗಿದೆ.

2016ರಲ್ಲಿ ‘ಅನಿವಾಸಿ ಭಾರತೀಯ ನೀತಿ’ ಕೂಡಾ ರೂಪಿಸಲಾಗಿದೆ. ಈ ನೀತಿಯ ಭಾಗವಾಗಿ, ಮೊದಲ ಹಂತದಲ್ಲಿ 500 ಅನಿವಾಸಿ ಕನ್ನಡಿಗರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಕಾರ್ಡ್‌ (ಎನ್‌ಆರ್‌ಕೆ ಕಾರ್ಡ್‌) ವಿತರಿಸಲಾಗಿದೆ. ಎರಡನೇ ಹಂತದಲ್ಲಿ 500 ಅನಿವಾಸಿ ಭಾರತೀಯರಿಗೆ ಕಾರ್ಡ್ ಮುದ್ರಿಸಿ ಕೊಡುವ ಕೆಲಸ ಸ್ಥಗಿತಗೊಂಡಿದೆ.

ಸಮಿತಿಯ ಅನುದಾನ, ವೆಚ್ಚ, ಲ್ಯಾಪ್ಸ್ ಎಷ್ಟು?:

2018-19ರಲ್ಲಿ ಸಮಿತಿಗೆ ಬಜೆಟ್ ನಲ್ಲಿ 2.54 ಕೋಟಿ ಮೀಸಲಿಡಲಾಗಿತ್ತು. ಆದರೆ, ವೆಚ್ಚವಾಗಿದ್ದು ಕೇವಲ 29‌ ಲಕ್ಷ ರೂ. 2.25 ಕೋಟಿ ರೂ. ಬಳಕೆಯಾಗದೇ ಉಳಿಕೆಯಾಗಿದೆ. ಇನ್ನು 2019-20ರಲ್ಲಿ ಎನ್ಆರ್ ಐ ಸಮಿತಿಗೆ 1.63 ಕೋಟಿ ರೂ. ಮೀಸಲಿರಿಸಲಾಗಿತ್ತು. ಆದರೆ, ಖರ್ಚಾಗಿದ್ದು 33 ಲಕ್ಷ ರೂ. ಉಳಿದ 1.30 ಕೋಟಿ ರೂ. ಮೊತ್ತ ಖರ್ಚಾಗದೆ ಲ್ಯಾಪ್ಸ್ ಆಗಿದೆ. ಇನ್ನು 2020-21ರಲ್ಲಿ 80 ಲಕ್ಷ ರೂ. ಅನುದಾನ ನೀಡಲಾಗಿತ್ತು. ಈ ಪೈಕಿ ನವೆಂಬರ್ ವರೆಗೆ 13 ಲಕ್ಷ ರೂ. ಮಾತ್ರ ವೆಚ್ಚವಾಗಿದೆ. ಉಳಿದ 67 ಲಕ್ಷ ರೂ. ಖರ್ಚಾಗದೇ ಉಳಿಕೆಯಾಗಿದೆ.

ABOUT THE AUTHOR

...view details