ಕರ್ನಾಟಕ

karnataka

By

Published : Apr 17, 2020, 7:51 PM IST

ETV Bharat / state

ಔಷಧಗಳ ಕೊರತೆಯಿಲ್ಲ, ಸಹಜಸ್ಥಿತಿಯತ್ತ ಜನೌಷಧಿ ಸರಬರಾಜು: ಡಿ.ವಿ ಸದಾನಂದಗೌಡ...!

ಔಷಧಗಳ ಸಾಗಣೆ, ಸರಬರಾಜು ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜೊತೆ ಸೇರಿ ಹಲವು ತುರ್ತು ಕ್ರಮಗಳನ್ನು ಕೈಗೊಂಡಿದೆ. ಜನೌಷಧ ಕೇಂದ್ರಗಳ ಔಷಧ ಸರಬರಾಜು ವ್ಯವಸ್ಥೆ ಕೂಡಾ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಡಿ. ವಿ. ಸದಾನಂದ ಗೌಡ ತಿಳಿಸಿದ್ದಾರೆ.

ಬೆಂಗಳೂರು:ಪ್ಯಾರೆಸಿಟಮಾಲ್​, ಅಜಿತ್ರೋಮೈಸಿನ್‌, ಹೈಡ್ರೋಕ್ಸಿಕ್ಲೋರೋಕ್ವಿನ್‌ ಸೇರಿದಂತೆ ಎಲ್ಲ ಅತ್ಯವಶ್ಯಕ ಔಷಧಗಳು ಹಾಗೂ ಅವನ್ನು ತಯಾರಿಸಲು ಬೇಕಾಗುವ ಮೂಲ ರಾಸಾಯನಿಕಗಳು (ಎಪಿಐ) ಮುಂದಿನ ಹಲವು ತಿಂಗಳ ತನಕ ಸಾಕಾಗುವಷ್ಟು ದಾಸ್ತಾನು ಇದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ. ವಿ. ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.

ಲಾಕ್​ಡೌನ್‌ ಹಿನ್ನೆಲೆಯಲ್ಲಿ ಬಹುತೇಕ ಕೊರಿಯರ್‌ ಸೇವೆಗೆಗಳು ಬಂದಾಗಿದ್ದರಿಂದ ಔಷಧ ಸಾಗಣೆಯಲ್ಲಿ ವ್ಯತ್ಯಾಸವಾಗಿತ್ತು. ವಿಶೇಷವಾಗಿ ಒಳನಾಡಿನಲ್ಲಿರುವ ಜನೌಷಧಿ ಕೇಂದ್ರಗಳಿಗೆ ತೊಂದರೆಯಾಗಿತ್ತು. ಈಗ ಬೇಡಿಕೆಯನ್ನು‌ ಪೂಲಿಂಗ್‌ ವ್ಯವಸ್ಥೆ ಮೂಲಕ ನಿರ್ವಹಿಸಲಾಗುತ್ತಿದೆ. ಸಮೀಪವಿರುವ ನಾಲ್ಕಾರು ಡೀಲರ್​​ಗಳಿಗೆ ಒಟ್ಟಿಗೆ ಒಂದೊಂದೇ ವಾಹನಗಳಲ್ಲಿ ಔಷಧ ಪೂರೈಸಲಾಗುತ್ತಿದೆ. ಚೆನ್ನೈ, ದೆಹಲಿ ಸಮೀಪದ ಗುರುಗ್ರಾಮ ಹಾಗೂ ಗುವಾಹಟಿಗಳಲ್ಲಿರುವ ಗೋದಾಮುಗಳಿಂದ ವಿಶೇಷ ಸರಕು ವಾಹನಗಳಲ್ಲಿ ಸರಬರಾಜು ಚುರುಕುಗೋಳಿಸಲಾಗಿದೆ. ಕೆಲವನ್ನು ನೇರವಾಗಿ ಔಷಧ ಕಾರ್ಖಾನೆಗಳಿಂದಲೇ ಅಗತ್ಯವಿರುವಡೆ ಕಳುಹಿಸಲಾಗುತ್ತಿದೆ. ಸಾಗಣೆ ಹಾಗೂ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಕಚೇರಿಯಲ್ಲಿ ಉನ್ನತಾಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ಹಾಗೆಯೇ ಸಹಾಯವಾಣಿಯಂದನ್ನು 011-23389840 ಸ್ಥಾಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಗತ್ಯ ಔಷಧ ಲಭ್ಯತೆ:ನಮಗೆ ಪ್ರತಿತಿಂಗಳು ಸರಾಸರಿ 95 ಲಕ್ಷ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಬೇಕು. ನಮ್ಮಲ್ಲಿ ಮುಂದಿನ ಮೂರು ತಿಂಗಳಿಗೆ ಸಾಕಾಗುವಷ್ಟು ದಾಸ್ತಾನು ಇದೆ. ಹಾಗೆಯೇ ಇದರ ಉತ್ಪಾದನೆ ನಿರಂತರವಾಗಿದೆ. ಮುಖ್ಯ ಆಂಟಿಬಯೋಟಿಕ್‌ ಔಷಧಗಳಲ್ಲಿ ಒಂದಾದ ಅಜಿತ್ರೋಮೈಸಿನ್‌ ನಮಗೆ ವಾರ್ಷಿಕವಾಗಿ 2.2 ಕೋಟಿ ಮಾತ್ರೆ ಬೇಕು. ನಾವು 9.6 ಕೋಟಿ ಅಜಿತ್ರೋಮೈಸಿನ್‌ ಮಾತ್ರೆಯನ್ನು ಉತ್ಪಾದಿಸುತ್ತಿದ್ದೇವೆ. ಜ್ವರ ಮುಂತಾದ ಸಣ್ಣಪುಟ್ಟ ಕಾಯಿಲೆಗಳಿಗೆ ಬಳಸುವ ಪ್ಯಾರೆಸಿಟಮಾಲ್​​ ಮಾತ್ರೆ 482 ಕೋಟಿಗಿಂತ ಹೆಚ್ಚು ಸಂಗ್ರಹವಿದೆ. ಆಂತರಿಕ ಬೇಡಿಕೆಯನ್ನು ಪೂರೈಸುವುದು ನಮ್ಮ ಮೊದಲ ಆದ್ಯತೆ. ಮಿಕ್ಕಿದ್ದನ್ನು ಮಾತ್ರ ರಫ್ತು ಮಾಡುತ್ತಿದ್ದೇವೆ. ಹಾಗಾಗಿ ಯಾವುದೇ ರೀತಿಯ ಆತಂಕಕ್ಕೆ ಆಸ್ಪದವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಸಗೊಬ್ಬರ:ದೇಶದಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನು ಇದೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಮುಂಗಾರು ಬಿತ್ತನೆಗೆ ಬೇಕಾಗುವಷ್ಟು ರಸಗೊಬ್ಬರವನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ. ಹಾಗಾಗಿ ರೈತರು ಆತಂಕಪಡಬೇಕಿಲ್ಲ. ರಸಗೊಬ್ಬರವನ್ನು ಈಗ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಲಾಗಿದೆ. ಅದನ್ನು ಅಕ್ರಮ ದಾಸ್ತಾನು, ಕಾಳಸಂತೆ ಮಾಡುವುದು ಶಿಕ್ಷಾರ್ಹ ಅಪರಾಧ.

ದೇಶದಲ್ಲಿ ಸದ್ಯ 61.05 ಲಕ್ಷ ಮೆಟ್ರಿಕ್‌ ಟನ್ ಯೂರಿಯಾ‌ ಸಂಗ್ರಹವಿದೆ. ಫೊಸ್ಪೇಟ್‌ ಮತ್ತು ಫೊಟಾಷ್‌ ಮತ್ತಿತರ ಮಾದರಿಯ ರಸಗೊಬ್ಬರ 86.24 ಲಕ್ಷ ಟನ್‌ ದಾಸ್ತಾನಿದೆ. ಇದರ ಹೊರತಾಗಿ 7.47 ಲಕ್ಷ ಟನ್‌ ರಸಗೊಬ್ಬರ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ 5.6 ಲಕ್ಷ ಟನ್ ಸರಕು ಈ ತಿಂಗಳ ಕೊನೆ ಹಾಗೂ ಮೇ ಮೊದಲ ವಾರದಲ್ಲಿ ಭಾರತದ ವಿವಿಧ ಬಂದರುಗಳನ್ನು ತಲುಪಲಿವೆ ಎಂದು ಸಚಿವರು ಹೇಳಿದ್ದಾರೆ.

ಲಾಕ್​ಡೌನ್​ ಮಧ್ಯೆಯೂ ಅಗತ್ಯವಿದ್ದಡೆ ಸಾಗಣೆಗೆ ವ್ಯವಸ್ಥೆ ಮಾಡಲಾಗಿದೆ. ಲಾಕ್​ಡೌನ್​ ಆರಂಭದಲ್ಲಿ ವ್ಯಾಗನ್‌ ಹಾಗೂ ಕೆಲಸಗಾರರ ಕೊರತೆ ಉಂಟಾಗಿತ್ತು. ಸತತ ಪ್ರಯತ್ನದ ಮೂಲಕ ಈಗ ಅವನ್ನೆಲ್ಲ ನಿವಾರಿಸಲಾಗಿದೆ. ಲಾಕ್​ಡೌನ್​ ಅವಧಿಯಲ್ಲಿ ಏಪ್ರಿಲ್‌ 14ರವರೆಗೆ 584 ರೇಕುಗಳಷ್ಟು (ಸುಮಾರು 12.8 ಲಕ್ಷ ಟನ್‌) ರಸಗೊಬ್ಬರವನ್ನು ವಿವಿಧ ಕಾರ್ಖಾನೆಗಳು ಹಾಗೂ ಗೋದಾಮುಗಳಿಂದ ದೇಶದ ಬೇರೆ ಬೇರೆ ಭಾಗಗಳಿಗೆ ಸಾಗಾಟ ಮಾಡಲಾಗಿದೆ. ಹಾಗೆಯೇ ಕಾರ್ಖಾನೆಗಳಿಗೆ ಬೇಕಾಗುವ ಕಚ್ಚಾ ಸಾಮಗ್ರಿಗಳ ಸಾಗಣೆ ವ್ಯವಸ್ಥೆಯನ್ನೂ ಸುಗಮಗೊಳಿಸಲಾಗಿದೆ ಎಂದು ಸಚಿವ ಸದಾನಂದ ಗೌಡ ಪತ್ರಿಕಾ ಹೇಳಿಕೆ ಮೂಲಕ ಹೇಳಿದ್ದಾರೆ.

ABOUT THE AUTHOR

...view details