ಬೆಂಗಳೂರು: ಯಾವುದೇ ಧರ್ಮವನ್ನು ಪ್ರತಿಪಾದಿಸುವಾಗ ಮತ್ತೊಂದು ಧರ್ಮವನ್ನು ಕೀಳಾಗಿ ಬಿಂಬಿಸುವ ಮೂಲಭೂತ ಹಕ್ಕನ್ನು ಯಾವ ಧರ್ಮಕ್ಕೂ ಪ್ರದಾನ ಮಾಡಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಪ್ರಕರಣದಲ್ಲಿ ಬಂಟ್ವಾಳ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿರುವ ಕ್ರಮವನ್ನು ರದ್ದುಗೊಳಿಸಬೇಕು ಎಂದು ಕೋರಿ ಬಂಟ್ವಾಳದ ಪ್ರೆಸಿಲ್ಲಾ ಡಿಸೋಜ ಹಾಗೂ ಮಂಗಳೂರಿನ ಸ್ಯಾಮ್ಸನ್ ಜಾನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಎಚ್ ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಆರೋಪಿತರ ವಿರುದ್ಧ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪವಿದೆ. ಭಗವದ್ಗೀತೆ ಹಾಗೂ ಕುರಾನ್ನಲ್ಲಿ ಹೇಳಿರದ ವಿಷಯಗಳನ್ನು ಬೈಬಲ್ನಲ್ಲಿ ಹೇಳಿದ್ದು, ಭೂಮಿಗೆ ಸುನಾಮಿ ಬಂದಾಗ ಏಸು ಮಾತ್ರ ಕಾಪಾಡುತ್ತಾರೆ. ಬೈಬಲ್ ಅಷ್ಟೇ ಶಾಂತಿ ನೀಡುತ್ತದೆ ಎಂದಿದ್ದಾರೆ ಎನ್ನಲಾಗಿದೆ.
ಆರೋಪಿತರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 298ರಡಿ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಅರ್ಜಿದಾರರು ಈ ಕ್ರಮವನ್ನು ಸಾಂವಿಧಾನದ ವಿಧಿ 14, 21 ಹಾಗೂ 25ರ ಉಲ್ಲಂಘನೆ ಎಂದು ಪ್ರತಿಪಾದಿಸಿದ್ದಾರೆ. ಯಾವುದೇ ಧರ್ಮದ ಕುರಿತು ಧಾರ್ಮಿಕ ಮುಖಂಡ ಅಥವಾ ವ್ಯಕ್ತಿ ಪ್ರತಿಪಾದಿಸುವಾಗ ಮತ್ತೊಂದು ಧರ್ಮವನ್ನು ಕೀಳಾಗಿ ಬಿಂಬಿಸುವ ಹಕ್ಕನ್ನು ಮೂಲಭೂತ ಹಕ್ಕುಗಳಲ್ಲಿ ನೀಡಲಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.