ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಲಾಕ್​​ಡೌನ್ ಇಲ್ಲ, ವೀಕೆಂಡ್ ಕರ್ಫ್ಯೂ ಸೇರಿ ಕಠಿಣ ನಿಯಮ ಸಡಿಲಿಕೆ ಬಗ್ಗೆ ಶುಕ್ರವಾರ ನಿರ್ಧಾರ - karnataka covid meeting

ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಸಭೆಯಲ್ಲಿ ರಾಜ್ಯವು ತೆಗೆದುಕೊಂಡಿರುವ ಕ್ರಮಗಳು, ಲಸಿಕೆ ಅಭಿಯಾನ, ವಿದ್ಯಾರ್ಥಿಗಳಿಗೆ ಲಸಿಕೆ ನೀಡಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.

cm covid meeting
ಸಿಎಂ ಬಸವರಾಜ ಬೊಮ್ಮಾಯಿ ಸಭೆ

By

Published : Jan 17, 2022, 6:13 PM IST

ಬೆಂಗಳೂರು:ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ರಾತ್ರಿ ನಿಷೇಧಾಜ್ಞೆ, ವಾರಾಂತ್ಯದ ನಿಷೇಧಾಜ್ಞೆಯಲ್ಲಿ ರಿಯಾಯಿತಿ ನೀಡುವ ಕುರಿತು ಶುಕ್ರವಾರ ನಿರ್ಧರಿಸುವ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್, ಒಂದು ಕಾಲು ಗಂಟೆ ಸಭೆ ನಡೆದಿದೆ. ಕರ್ನಾಟಕ ತೆಗೆದುಕೊಂಡಿರುವ ಕ್ರಮಗಳು, ಲಸಿಕೆ ಅಭಿಯಾನ, ವಿದ್ಯಾರ್ಥಿಗಳಿಗೆ ಲಸಿಕೆ ನೀಡಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಕೊರೊನಾ ತಪಾಸಣೆ ಮಾಡುವುದನ್ನು ಹೆಚ್ಚು ಮಾಡುತ್ತಿದ್ದೇವೆ, ಇಡೀ ದೇಶದಲ್ಲಿ ನಾವೇ ಹೆಚ್ಚು ತಪಾಸಣೆ ಮಾಡುತ್ತಿದ್ದೇವೆ, ಅಷ್ಟು ಪ್ರಮಾಣದಲ್ಲಿ ಪರೀಕ್ಷೆ ಮಾಡುವ ಅವಶ್ಯಕತೆ ಇಲ್ಲ ಎಂದು ಸಮಿತಿಯವರು ಹೇಳಿದ್ದಾರೆ. ಹಾಗಾಗಿ ಇನ್ಮುಂದೆ ತಪಾಸಣೆ ಪ್ರಮಾಣ ಕಡಿಮೆ ಮಾಡಲಾಗುತ್ತದೆ ಎಂದರು.

ಕಾದು ನೋಡೋಣ ಎಂದ ಸಿಎಂ:

ಬೇರೆ ಬೇರೆ ರಾಜ್ಯಗಳನ್ನು ಉದಾಹರಣೆಗೆ ತೆಗೆದುಕೊಂಡಾಗ ಜನವರಿ 25ಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಪೀಕ್​ಗೆ ಹೋಗಲಿದೆ, ನಂತರ ಕಡಿಮೆಯಾಗಲಿದೆ ಎಂದು ವರದಿ ಕೊಟ್ಟಿದ್ದಾರೆ. ಹಾಗಾಗಿ ರಾತ್ರಿ ನಿಷೇಧಾಜ್ಞೆ, ವಾರಾಂತ್ಯದ ನಿಷೇಧಾಜ್ಞೆಯಲ್ಲಿ ಬದಲಾವಣೆ ಮಾಡಬೇಕೋ ಬೇಡವೋ ಎನ್ನುವ ಕುರಿತು ನಾನು ಕೂಡ ಚರ್ಚೆ ಮಾಡಿದ್ದೇನೆ. ಸಭೆಯಲ್ಲಿ ಮುಖ್ಯಮಂತ್ರಿಗಳು ಕೂಡ ತಜ್ಞರು ನೀಡಿದ ವರದಿ, ಎಲ್ಲರ ಅಭಿಪ್ರಾಯ ಪಡೆದು ಶುಕ್ರವಾರದವರೆಗೂ ಕಾಯೋಣ, ಬೇರೆ ಬೇರೆ ರಾಜ್ಯದಲ್ಲಿ ಏನೆಲ್ಲಾ ಆಗಲಿದೆ ಎಂದು ಕಾದು ನೋಡೋಣ. ಜನವರಿ 25ರ ನಂತರ ಕೋವಿಡ್ ಇಳಿಮುಖವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸದ್ಯ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಇದೆ. ಇದರಲ್ಲಿ ಬದಲಾವಣೆ ಮಾಡಬೇಕೋ ಮಾಡಬಾರದು ಎನ್ನುವ ಕುರಿತು ಶುಕ್ರವಾರದವರೆಗೂ ಕಾದು ನೋಡಿ ಟಫ್ ಗೈಡ್​​ಲೈನ್ಸ್​ಗೆ ವಿನಾಯಿತಿ ನೀಡುವ ಕುರಿತು ನಿರ್ಧರಿಸೋಣ ಎಂದು ಸಿಎಂ ಹೇಳಿದ್ದಾರೆ. ಹಾಗಾಗಿ ಅಲ್ಲಿಯವರೆಗೂ ಈಗಿರುವ ನಿಯಮ ಮುಂದುವರೆಯಲಿದೆ ಎಂದು ಅಶೋಕ್​ ತಿಳಿಸಿದರು.

'ಶಾಲೆಗಳಲ್ಲಿ ಸದ್ಯದ ನಿಯಮವೇ ಮುಂದುವರಿಕೆ'

ಶಾಲೆಗಳ ವಿಚಾರದಲ್ಲಿಯೂ ಈಗ ಇರುವ ನಿಯಮವನ್ನೇ ಮುಂದುವರಿಕೆ ಮಾಡಲು ನಿರ್ಧರಿಸಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ವೈದ್ಯಕೀಯ ಕೋರ್ಸ್ ಹೊರತುಪಡಿಸಿ ಇತರ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಇತರ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಶಾಲೆಗಳು ನಡೆಯಬೇಕೋ ಬೇಡವೋ ಎನ್ನುವ ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದ್ದು, ಶುಕ್ರವಾರದವರೆಗೂ ಇದೇ ನಿಯಮ ಮುಂದುವರೆಸಲಾಗುತ್ತದೆ ಎಂದರು.

ರಾಜ್ಯದ ಜನರ ಪ್ರಾಣ ರಕ್ಷಣೆ ನಮ್ಮ ಜವಾಬ್ದಾರಿ. ಯಾರಿಗೂ ಅನುಕೂಲ ಮಾಡಿಕೊಡಲು ನಾವು ನಿಯಮದಲ್ಲಿ ಸಡಿಲಿಕೆ ಮಾಡುವುದಿಲ್ಲ. ಕೇಂದ್ರ ಸರ್ಕಾರ, ತಜ್ಞರ ಸಮಿತಿ ಹೇಳಿದಂತೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾರೋ ಏನೋ ಹೇಳಿದರೆಂದು ನಾವು ನಿಯಮ ಸಡಿಲಿಕೆ ಮಾಡಲು ಸಾಧ್ಯವಿಲ್ಲ ಎಂದು ವೀಕೆಂಡ್ ಕರ್ಫ್ಯೂಗೆ ಹೋಟೆಲ್ ಉದ್ಯಮಿಗಳ ವಿರೋಧಕ್ಕೆ ಅಶೋಕ್‌ ತಿರುಗೇಟು ನೀಡಿದರು.

ಶುಕ್ರವಾರ ಕಠಿಣ ನಿಯಮದಲ್ಲಿ ರಿಯಾಯಿತಿ ನೀಡಬೇಕೋ ಬೇಡವೋ ಎನ್ನುವ ನಿರ್ಧಾರ ಕೈಗೊಳ್ಳುತ್ತೇವೆ. ಕೊರೊನಾ ಸೋಂಕು ಕಡಿಮೆಯಾದರೆ ಶುಕ್ರವಾರ ಒಳ್ಳೆಯ ಸುದ್ದಿ ಬರಬಹುದು ಎಂದು ಸಚಿವರು​ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರೊಂದರಲ್ಲೇ 287 ಮಂದಿಗೆ ಒಮಿಕ್ರಾನ್ ದೃಢ: 766ಕ್ಕೆ ಏರಿದ ಸೋಂಕಿತರ ಸಂಖ್ಯೆ!

ABOUT THE AUTHOR

...view details