ಬೆಂಗಳೂರು: ಶಾಸಕರಿಗೆ ಜಾರಿಯಾಗಿರುವ ವಿಪ್ ಇತ್ಯರ್ಥವಾಗುವವರೆಗೂ ವಿಶ್ವಾಸ ಮತಯಾಚನೆ ಬೇಡ. ಮೊದಲು ಶಾಸಕರ ವಿಪ್ ಬಗ್ಗೆ ನಿರ್ಧಾರವಾಗಲಿ, ಅಲ್ಲಿಯವರೆಗೆ ವಿಶ್ವಾಸಮತಯಾಚನೆ ಮಾಡಲು ಸಾಧ್ಯವಿಲ್ಲ, ಈ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಪ್ ಸಮಸ್ಯೆ ಇತ್ಯರ್ಥದವರೆಗೂ ವಿಶ್ವಾಸ ಮತಯಾಚನೆ ಬೇಡ: ಮಾಜಿ ಸಿಎಂ ಸಿದ್ದರಾಮಯ್ಯ - confidence vote
ಶಾಸಕರಿಗೆ ಜಾರಿಯಾಗಿರುವ ವಿಪ್ ಇತ್ಯರ್ಥವಾಗುವವರೆಗೂ ವಿಶ್ವಾಸ ಮತಯಾಚನೆ ಬೇಡ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಸದನದ ನಿಯಮಾವಳಿ ಕುರಿತು ಕ್ರಿಯಾಲೋಪ ಎತ್ತಿದ ಅವರು, 15 ಶಾಸಕರು ಸುಪ್ರೀಂ ನಿರ್ದೇಶನದಂತೆ ಸದನಕ್ಕೆ ಬಂದಿಲ್ಲ. ಇವರ ಗೈರು ಹಾಜರಿಯಿಂದ ನಮಗೆ ನಷ್ಟ, ಸರ್ಕಾರಕ್ಕೂ ಸಂಕಷ್ಟ. ಸರ್ಕಾರ ಉಳಿಸಿಕೊಳ್ಳುವುದು ಹೇಗೆ ಎಂದು ನಾವು ಸಂವಿಧಾನ ಬದ್ಧವಾಗಿ ಹೋರಾಟ ಮಾಡುತ್ತೇವೆ. ಇವರ ನಡೆಯಿಂದ ಸರ್ಕಾರಕ್ಕೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ. ಹಾಗಾಗಿ ಶಾಸಕರು ಬರದ ಹೊರತು ವಿಶ್ವಾಸ ಮತಯಾಚನೆ ಬೇಡ ಎಂದು ಸ್ಪೀಕರ್ಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ಸ್ಪೀಕರ್ ಮಧ್ಯೆ ಪ್ರವೇಶಿಸಿ ಸುಪ್ರೀಂ ನನ್ನ ಪೀಠದ ಮೇಲೆ ದೃಷ್ಟಿ ಬೀರಿದೆ. ಕೋರ್ಟ್ ಮುಂದೆ ನಾನು ಪ್ರತಿವಾದಿಯಾಗಿದ್ದೇನೆ. ನಾನು ಶಾಸಕರನ್ನ ಬಲವಂತವಾಗಿ ಕರೆಯುವಂತಿಲ್ಲ. ಸುಪ್ರೀಂ ತೀರ್ಪನ್ನ ಗೌರವಿಸದಿದ್ದರೆ ತಪ್ಪಾಗುತ್ತದೆ. ಗೌರವಿಸಿದರೆ ಮತ್ತೊಂದು ಅಪರಾಧ. ಇದರ ಬಗ್ಗೆ ಸದನ ಮೊದಲು ನಿರ್ಧರಿಸಬೇಕು ಎಂದರು.