ಬೆಂಗಳೂರು: ನಮ್ಮ ದೇಶದ್ದೇ ಆದ ಭಾರತ್ ಬಯೋಟೆಕ್ ಕಂಪನಿ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದೆ. ಈ ಕುರಿತು ವಿನಾ ಕಾರಣ ಟೀಕೆ ಮಾಡುವ ಮೂಲಕ ವಿಜ್ಞಾನಿಗಳಿಗೆ ಅಗೌರವ ತೋರಬಾರದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಚಿವರು, ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಭಾರತದ ಕಂಪನಿ ಕೋವ್ಯಾಕ್ಸಿನ್ ಅಭಿವೃದ್ಧಿಪಡಿಸಿದೆ. ಭಾರತ್ ಬಯೋಟೆಕ್ ಬಹಳ ಹೆಸರುವಾಸಿ ಹಾಗೂ ನಂಬಿಕೆಗೆ ಅರ್ಹವಾದ ಕಂಪನಿಯಾಗಿದ್ದು, ಎಚ್1ಎನ್1, ರೋಟಾವೈರಸ್, ರೇಬಿಸ್, ಚಿಕೂನ್ ಗುನ್ಯಾ, ಝೀಕಾ ಸೇರಿದಂತೆ 16 ರೋಗಗಳಿಗೆ ಲಸಿಕೆ ಆವಿಷ್ಕರಿಸಿದೆ. ಕಂಪನಿಯ ಸಂಸ್ಥಾಪಕ ಡಾ. ಕೃಷ್ಣ ಎಲ್ಲ ಅವರು ಸಾಧಾರಣ ಕುಟುಂಬದಿಂದ ಬಂದವರಾಗಿದ್ದು, ಯುನಿಸೆಫ್ ಸಹಯೋಗದಲ್ಲಿ 150ಕ್ಕೂ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ 400 ಕೋಟಿ ಡೋಸ್ ಲಸಿಕೆಗಳನ್ನು ವಿತರಣೆ ಮಾಡಿದ್ದಾರೆ. ಕೋವ್ಯಾಕ್ಸಿನ್ನ 3ನೇ ಹಂತದ ಕ್ಲಿನಿಕಲ್ ಟ್ರಯಲ್ನಲ್ಲಿ 24,000 ಮಂದಿ ಭಾಗವಹಿಸಿದ್ದು, ಈ ಬಗ್ಗೆ ಶೀಘ್ರವೇ ದತ್ತಾಂಶ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ನಂತರ ಮಾತ್ರ ಅದನ್ನು ಅಧಿಕೃತ ಎನ್ನಲಾಗುತ್ತದೆ. ಈ ಲಸಿಕೆಯ ಅಡ್ಡ ಪರಿಣಾಮ 15%ಗಿಂತಲೂ ಕಡಿಮೆ ಇದೆ. ಇದು ಬಹಳ ಸುರಕ್ಷಿತ ಲಸಿಕೆ. ಒಬ್ಬ ಆರೋಗ್ಯ ಸಚಿವನಾಗಲ್ಲದೆ, ಸ್ವತಃ ಒಬ್ಬ ವೈದ್ಯಕೀಯ ವೃತ್ತಿಪರನಾಗಿ ನಮ್ಮ ಮನವಿ ಏನೆಂದರೆ, ಯಾರೂ ಕೂಡ ಲಸಿಕೆಯ ಬಗ್ಗೆ ವಿನಾ ಕಾರಣ ಟೀಕಿಸಬಾರದು. ಈ ಮೂಲಕ ವಿಜ್ಞಾನಿಗಳ ಪರಿಶ್ರಮಕ್ಕೆ ಧಕ್ಕೆ ತರಬಾರದು ಎಂದು ಸಚಿವರು ಕೋರಿದ್ದಾರೆ.
ಓದಿ:ಪಕ್ಷದ ಶಿಸ್ತು ಉಲ್ಲಂಘಿಸಿದವರ ಉಚ್ಛಾಟನೆ ಅನಿವಾರ್ಯ: ಸಾ.ರಾ.ಮಹೇಶ್