ಬೆಂಗಳೂರು:ಜೆಡಿಎಸ್,ಕಾಂಗ್ರೆಸ್ ಪಕ್ಷ ತೊರೆದು ಅನರ್ಹರಾಗಿರುವ 17 ಮಂದಿ ಶಾಸಕರ ವಿರುದ್ಧ ದೇಶದ್ರೋಹ ಆರೋಪದಡಿ ದಾಖಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಎನ್ಐಎ(ರಾಷ್ಟ್ರೀಯ ತನಿಖಾ ದಳ) ವಿಶೇಷ ಕೋರ್ಟ್ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದೆ.
ತೀರ್ಪು ಕಾಯ್ದಿರಿಸಿದ ಎನ್ಐಎ ಕೋರ್ಟ್.. ನ.30ಕ್ಕೆ ಅನರ್ಹ ಶಾಸಕರ ರಾಜಕೀಯ ಭವಿಷ್ಯ ನಿರ್ಧಾರ - NIA court post poned disqualified mlas case judgment
ಅನರ್ಹಗೊಂಡಿದ್ದ 17ಮಂದಿ ಶಾಸಕರ ವಿರುದ್ಧ ದೇಶದ್ರೋಹ ಆರೋಪದಡಿ ದಾಖಲಾಗಿರುವ ಅರ್ಜಿ ಸಂಬಂಧ ತೀರ್ಪನ್ನು ಎನ್ಐಎ ಕೋರ್ಟ್ ನ. 30ಕ್ಕೆ ಕಾಯ್ದಿರಿಸಿದೆ.
ದೂರುದಾರರಾದ ಹಿರಿಯ ವಕೀಲ ಬಾಲನ್ ನ್ಯಾಯಾಲಯದಲ್ಲಿ ವಾದ ಮಾಡಿ, ಸಿಎಂ ಯಡಿಯೂರಪ್ಪ ಸರ್ಕಾರ 17 ಶಾಸಕರ ಖರೀದಿಗೆ ಸಾವಿರ ಕೋಟಿ ಖರ್ಚು ಮಾಡಿ ಒಳಸಂಚಿನಿಂದ ಅಸ್ತಿತ್ವದಲ್ಲಿದ್ದ ಸರ್ಕಾರವನ್ನು ಬೀಳಿಸಿದ್ದಾರೆ. ಆಪರೇಷನ್ ಕಮಲಕ್ಕೆ ಬಿಜೆಪಿ ಅಕ್ರಮ ಹಣ ಬಳಸಿದೆ. ಈ ದುಡ್ಡಿನ ಮೂಲ ಯಾವುದು ಎಂದು ತಿಳಿಯಬೇಕಿದೆ. ಸಿಎಂ ಯಡಿಯೂರಪ್ಪ ಕೂಡ ಅನರ್ಹರಿಂದಾಗಿಯೇ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವಾಗಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಅನರ್ಹ ಶಾಸಕರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ ಎಂದರು.
ಅಲ್ಲದೆ ಆಪರೇಷನ್ ಕಮಲಕ್ಕೆ ಸಾವಿರ ಕೋಟಿ ರೂ. ಅಕ್ರಮ ಹಣ ಬಳಕೆಯಾಗಿದೆ. ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಶಕ್ತಿಗಳಿಂದ ಹಣ ಬರುತ್ತಿದೆ ಎಂಬ ಆರೋಪವಿದೆ. ಈ ಹಣದ ಮೂಲದ ಬಗ್ಗೆ ತನಿಖೆ ನಡೆಯಬೇಕೆಂದು ವಕೀಲ ಬಾಲನ್ ನ್ಯಾಯಾಲಯದ ಗಮನಕ್ಕೆ ತಂದರು. ವಕೀಲರ ವಾದ ಆಲಿಸಿದ ನ್ಯಾಯಾಲಯ ನವೆಂಬರ್ 30ಕ್ಕೆ ತೀರ್ಪನ್ನು ಕಾಯ್ದಿರಿಸಿದೆ.