ಕರ್ನಾಟಕ

karnataka

By ETV Bharat Karnataka Team

Published : Oct 31, 2023, 2:30 PM IST

ETV Bharat / state

ದೇಶಕ್ಕಾಗಿ ಬಲಿದಾನ ಮಾಡಿದವರು ನೆಹರು ಕುಟುಂಬದವರು, ಬಿಜೆಪಿ ದೇಶಕ್ಕಾಗಿ ಏನೂ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

''ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕಳೆದುಕೊಂಡರು. ಬಿಜೆಪಿಯವರು ರಾಷ್ಟ್ರ ಪ್ರೇಮದ ಬಗ್ಗೆ ಮಾತನಾಡುತ್ತಾರೆ. ಆದರೆ, ದೇಶಕ್ಕಾಗಿ ಬಿಜೆಪಿಯವರು ಯಾರೂ ಬಲಿದಾನ ಮಾಡಿಲ್ಲ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

CM Siddaramaiah
ದೇಶಕ್ಕಾಗಿ ಬಲಿದಾನ ಮಾಡಿದವರು ನೆಹರು ಕುಟುಂಬದವರು, ಬಿಜೆಪಿ ದೇಶಕ್ಕಾಗಿ ಏನು ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ''ದೇಶಕ್ಕಾಗಿ ನೆಹರು ಕುಟುಂಬದವರು ಬಲಿದಾನ ಮಾಡಿದ್ದಾರೆ. ಆದ್ರೆ, ಬಿಜೆಪಿಯವರು ದೇಶಕ್ಕಾಗಿ ಏನೂ ಮಾಡಿಲ್ಲ'' ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕೆಪಿಸಿಸಿ ಕಚೇರಿ ಬಳಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಇಂದಿರಾ ಗಾಂಧಿ 39ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

''ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕಳೆದುಕೊಂಡರು. ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿಯನ್ನು ದುರ್ಗೆ ಎಂದು ಕರೆದಿದ್ದರು. ಬಿಜೆಪಿಗರು ರಾಷ್ಟ್ರ ಪ್ರೇಮದ ಬಗ್ಗೆ ಮಾತನಾಡುತ್ತಾರೆ. ಆದರೆ, ದೇಶಕ್ಕಾಗಿ ಅವರ್ಯಾರು ಬಲಿದಾನ ಮಾಡಿಲ್ಲ. ದೇಶಕ್ಕಾಗಿ ಬಲಿದಾನ ಮಾಡಿದವರು ನೆಹರು ಕುಟುಂಬದವರು'' ಎಂದು ಪ್ರತಿಪಾದಿಸಿದರು.

''ಅವರು ದೇಶ ಕಂಡ ಜನಪ್ರಿಯ ರಾಜಕಾರಣಿ. ಬಹಳ ಧೈರ್ಯ ಇದ್ದ ಮಹಿಳೆಯಾಗಿದ್ದರು. ನಾನು ಹಾರೋಹಳ್ಳಿಯಲ್ಲಿ ರಾಜಶೇಖರ್ ಮೂರ್ತಿ ಜೊತೆ ವೋಟ್ ಕೇಳಲು ಹೋಗಿದ್ದೆ. ನಾವು ಆವಾಗ ಜನತಾ ಪಾರ್ಟಿಯಲ್ಲಿದ್ದೆವು‌. ಆವಾಗ ಅಲ್ಲಿನ ಮನೆಗಳಲ್ಲಿ ಇಂದಿರಾ ಗಾಂಧಿ ಭಾವಚಿತ್ರ ಇತ್ತು. ನಾನು ಅವರನ್ನು ಕೇಳಲು ಹೋದಾಗ ರಾಜಶೇಖರ್ ಮೂರ್ತಿ ನೀವು ಏನೇ ಹೇಳಿ ನಾವು ಇಂಧಿರಾ ಗಾಂಧಿಗೇ ವೋಟ್ ಹಾಕುತ್ತೇವೆ ಎಂದಿದ್ದರು. ಅವರು ನಮಗೆ ಅಷ್ಟು ಕೆಲಸ ಮಾಡಿದ್ದಾರೆ ಎಂದಿದ್ದರು. ಅಷ್ಟರ ಮಟ್ಟಿಗೆ ಇಂದಿರಾ ಗಾಂಧಿ ಬಡವರ ಮನಸ್ಸಿನಲ್ಲಿ ನೆಲೆ ಊರಿದ್ದರು. ಬಡವರು ಅವರನ್ನು ಆರಾಧ್ಯ ದೈವವಾಗಿ ಪೂಜಿಸುತ್ತಿದ್ದರು. ಅಂಥ ಜನಪ್ರಿಯ ನಾಯಕರನ್ನು ಬೇರೆ ಯಾರನ್ನೂ ಕಾಣಲು ಆಗಲ್ಲ'' ಎಂದರು.

ವಲ್ಲಭಬಾಯ್ ಪಟೇಲ್ ಫೋಟೋ ಹಾಕಬೇಕಿತ್ತು:ಕಾರ್ಯಕ್ರಮದಲ್ಲಿ ವಲ್ಲಭ ಬಾಯ್ ಪಟೇಲ್ ಅವರ ಫೋಟೋ ಹಾಕದ್ದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಇಂದು ವಲ್ಲಭಬಾಯ್ ಪಟೇಲ್ ಅವರ ಜನ್ಮದಿನದ ಹಿನ್ನೆಲೆ ತಮ್ಮ ಭಾಷಣದ ವೇಳೆ ವಲ್ಲಭಬಾಯ್ ಪಾಟೇಲ್​ರ ಫೋಟೋವನ್ನೂ ಇಡಬೇಕಾಗಿತ್ತು ಎಂದು ಸಲಹೆ ನೀಡಿದರು. ದೇಶವನ್ನು ಒಗ್ಗೂಡಿಸಿ, ಏಕೀಕರಣ ಕೊಟ್ಟವರು ಸರ್ದಾರ್ ವಲ್ಲಭಬಾಯ್ ಪಟೇಲ್ ಎಂದು ಸ್ಮರಿಸಿದರು.

ದೇಶಕ್ಕಾಗಿ ಎಲ್ಲಾ ಆಸ್ತಿ ಬಿಟ್ಟುಕೊಟ್ಟಿದ್ದಾರೆ:ಇದೇ ವೇಳೆ ಮಾತನಾಡಿದ ಡಿಸಿಎಂ ಡಿ ಕೆ ಶಿವಕುನಾರ್, ''ದೇಶ ಕಂಡ ಮಹಾನ್ ಶಕ್ತಿಗಳನ್ನು ನಾವು ನೆನಪು ಮಾಡಿಕೊಳ್ಳುತ್ತಿದ್ದೇವೆ. ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಅವರ ಕೊಡುಗೆ ಅಪಾರ. ಆರ್ಥಿಕ ಶಕ್ತಿ ತಂದವರು ಇಂದಿರಾ ಗಾಂಧಿ. ಬ್ಯಾಂಕ್ ರಾಷ್ಟ್ರೀಕರಣ ಮಾಡುವ ಮೂಲಕ ಆರ್ಥಿಕ ಶಕ್ತಿ ತಂದಿದ್ದರು'' ಎಂದರು.

''ಕಾಲೇಜಿನಲ್ಲಿದ್ದಾಗ ನಾನು ಸ್ಕೂಟರ್ ತಗೋಬೇಕಾಗಿತ್ತು. ಮೂರು ಸಾವಿರ ರೂ. ಅವಾಗ ಬೇಕಿತ್ತು. ಬ್ಯಾಂಕ್​ನವರು ಸಾಲ ಕೊಡುತ್ತಿರಲಿಲ್ಲ. ಕಾರು ತಗೋಬೇಕಿತ್ತು. ಅದಕ್ಕೆ 75, 000 ರೂ. ಇತ್ತು. ಕಾಂಗ್ರೆಸ್​ ಹಿರಿಯ ನಾಯಕ ಜನಾರ್ದನ ಪೂಜಾರಿ ಆಗ ಸಾಲ ಮೇಳ ಮಾಡಿದ್ದರು. ಆಗ ನಾನೂ ಕೆಲವರಿಗೆ ಸಾಲ ನೀಡಿದ್ದೆ. ಅದರಿಂದ ಜಿಲ್ಲಾ ಪಂಚಾಯ್ತಿಯಲ್ಲಿ ಗೆದ್ದು ಬಂದೆ. ಈ ತನಕನೂ ಗೆದ್ದು ಬರುತ್ತಿದ್ದೇನೆ. ಊಳುವವನಿಗೆ ಭೂಮಿ ಕೊಟ್ಟವರು ಇಂದಿರಾ ಗಾಂಧಿ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸವಾಗಿದೆ'' ಎಂದು ಹೇಳಿದರು.

''ಗೃಹ ಲಕ್ಷ್ಮಿ ಯೋಜನೆ ಮೂಲಕ 1.10 ಕೋಟಿ ಮಹಿಳೆಯರಿಗೆ ನೇರವಾಗಿ 2,000 ರೂ.‌ ಜಮಾ ಆಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಭಾವನೆ ಕೆರಳಿಸುತ್ತಾರೆ. ನಮ್ಮದು ಬದುಕಿನ ಕಾರ್ಯಕ್ರಮ. ಈಗ ಬಿಜೆಪಿಯವರು ಇಂಡಿಯಾ ಹೆಸರನ್ನೇ ಬದಲಾಯಿಸಬೇಕಂತೆ. ಅವರು ಭಾವನೆ ಕೆರಳಿಸುವ ವಿಚಾರಕ್ಕೆ ಹೋಗುತ್ತಾರೆ. ನಾವು ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತೇವೆ. ನಾವು ಜಾತಿ ಮೇಲೆ, ಧರ್ಮದ ಮೇಲೆ ಯೋಜನೆಗಳನ್ನು ಕೊಡುತ್ತಿದ್ದೇವಾ? ಬಿಜೆಪಿಯವರು, ದಳದವರು ಉಚಿತ ಯೋಜನೆ ಲಾಭ ಪಡೆಯುತ್ತಿಲ್ಲವಾ. ಅವರೇ ಮೊದಲ ಸಾಲಲ್ಲಿ ನಿಲ್ಲುತ್ತಾರೆ'' ಎಂದು ಟೀಕಿಸಿದರು.

''ನೆಹರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರು ಈಗ ಯಾವ ಆಸ್ತಿಯನ್ನೂ ಹೊಂದಿಲ್ಲ. ದೇಶಕ್ಕಾಗಿ ಎಲ್ಲಾ ಆಸ್ತಿಯನ್ನು ಬಿಟ್ಟು ಕೊಟ್ಟಿದ್ದಾರೆ. ಬಿಜೆಪಿಯವರು, ದಳದವರು ಯಾರಾದರೂ ಆಸ್ತಿಯನ್ನು ಬಿಟ್ಟು ಕೊಟ್ಡಿದ್ದೀರಾ? ಒಂದು 30/40 ನಿವೇಶನವನ್ನೂ ಕೊಟ್ಟಿಲ್ಲ. ಇಂಡಿಯಾ ಅಂದರೆ ಇಂದಿರಾ ಅಂತ ಕರೆಯುತ್ತಾರೆ. ದೇಶಕ್ಕೆ ಅವರು ದೊಡ್ಡ ಶಕ್ತಿ ಕೊಟ್ಟಿದ್ದಾರೆ'' ಎಂದರು‌.

ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ''ಪ್ರತಿಯೊಂದು ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಮಾತನಾಡಲು ಅವಕಾಶ ಕೊಡಲಾಗುವುದು. ಅದಕ್ಕಾಗಿ ನೀವು ಮುಂಚೆನೇ ನೋಂದಣಿ ಮಾಡಿ. ಅವರಿಗೆ ಮಾತನಾಡಲು ಅವಕಾಶ ನೀಡುತ್ತೇವೆ'' ಎಂದು ಸೂಚಿಸಿದರು.

ಇದನ್ನೂ ಓದಿ:ಬರದ ನೋವು ಬಳಸಿ ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ಬಿಜೆಪಿಯನ್ನು ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಜಾಗ್ರತೆಯಿಂದಿರಿ: ಸಿಎಂ

ABOUT THE AUTHOR

...view details