ಕರ್ನಾಟಕ

karnataka

By

Published : Feb 10, 2021, 3:47 AM IST

ETV Bharat / state

2ನೇ ದಿನದ ರಾಷ್ಟ್ರೀಯ ತೋಟಗಾರಿಕಾ ಮೇಳಕ್ಕೆ ಹರಿದು ಬಂದ ನೆರೆ ರಾಜ್ಯಗಳ ರೈತರು

ಕೊರೊನಾ ಆತಂಕದ ನಡುವೆಯೂ ಸಾವಿರಾರು ಜನ ತೋಟಗಾರಿಕಾ ಮೇಳದತ್ತ ಹೆಜ್ಜೆ ಹಾಕುತ್ತಿದ್ದಾರೆ. ಎರಡನೇ ದಿನವಾದ ಮಂಗಳವಾರವೂ ಮೇಳದ ಎಲ್ಲೆಡೆ ಜನವೋ ಜನ. ರೈತರು, ರೈತ ಮಹಿಳೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಆಸಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು.

ರಾಷ್ಟ್ರೀಯ ತೋಟಗಾರಿಕಾ ಮೇಳ
ರಾಷ್ಟ್ರೀಯ ತೋಟಗಾರಿಕಾ ಮೇಳ

ಬೆಂಗಳೂರು:ನಗರ ಹೊರವಲಯದ ಹಸಿರುತಾಣ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಐಐಎಚ್‌ಆರ್ ಆಯೋಜಿಸಿರುವ ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ ಈಗ ಅತ್ಯಂತ ಜನಾಕರ್ಷಣೆಯ ತಾಣವಾಗಿ ಹೊರಹೊಮ್ಮುತ್ತಿದೆ.

ರಾಷ್ಟ್ರೀಯ ತೋಟಗಾರಿಕಾ ಮೇಳ

ಕೊರೊನಾ ಆತಂಕದ ನಡುವೆಯೂ ಸಾವಿರಾರು ಜನ ತೋಟಗಾರಿಕಾ ಮೇಳದತ್ತ ಹೆಜ್ಜೆ ಹಾಕುತ್ತಿದ್ದಾರೆ. ಎರಡನೇ ದಿನವಾದ ಮಂಗಳವಾರವೂ ಮೇಳದ ಎಲ್ಲೆಡೆ ಜನವೋ ಜನ. ರೈತರು, ರೈತ ಮಹಿಳೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಆಸಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು. ಬಗೆ ಬಗೆಯ ಹೂವು-ಹಣ್ಣು-ತರಕಾರಿಗಳನ್ನು ಕಣ್ತುಂಬಿಕೊಂಡರು. ಮಳಿಗೆಗಳಲ್ಲಿ ತಮಗೆ ಬೇಕಾದ ಹಣ್ಣು-ತರಕಾರಿ ಬೀಜ-ಗೊಬ್ಬರ ಕುರಿತು ಮಾಹಿತಿಗಳನ್ನು ಪಡೆದರು.

ರಾಷ್ಟ್ರೀಯ ತೋಟಗಾರಿಕಾ ಮೇಳ

ತೋಟಗಾರಿಕಾ ಯಂತ್ರೋಪಕರಣಗಳ ಉಪಯೋಗವನ್ನು ಪ್ರಾತ್ಯಕ್ಷಿಕೆ ಮೂಲಕ ವೀಕ್ಷಿಸಿದರು. ವಿಶೇಷವಾಗಿ ಐಐಎಚ್‌ಆರ್‌ನ ವಿಶೇಷ ತರಕಾರಿ, ಪುಷ್ಪ ಮತ್ತು ಔಷಧೀಯ ಬೀಜ ಹಾಗೂ ಸಸ್ಯಗಳ ಮಾರಾಟ ಮಳಿಗೆಗಳ ಸುತ್ತಲೂ ಜನರು ಮುಗಿಬಿದ್ದಿದ್ದರು. ಇಲ್ಲಿ ಅಭಿವೃದ್ಧಿಪಡಿಸಿರುವ ಹಣ್ಣು ಮತ್ತು ತರಕಾರಿಗಳ ಬೀಜಗಳಿಗೆ ರೈತರಿಂದ ಭಾರೀ ಬೇಡಿಕೆ ಇರುವುದು ಕಂಡುಬಂತು. ಈ ಬಾರಿಯ ಮೇಳಕ್ಕೆ ಬೆಂಗಳೂರು ಹೊರತುಪಡಿಸಿ, ದೂರ ದೂರದ ಊರುಗಳಿಂದಲೂ ಸ್ತ್ರೀಶಕ್ತಿ ಗುಂಪು, ಸ್ವಸಹಾಯ ಸಂಘಗಳು, ರೈತರ ಆಸಕ್ತ ಗುಂಪುಗಳು ತಂಡೋಪ ತಂಡವಾಗಿ ಆಗಮಿಸಿದ್ದವು. ಆಸಕ್ತರು, ತೋಟಗಾರಿಕೆಯನ್ನು ಉದ್ಯಮವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುವುದರ ಕುರಿತು ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು, ತಂತ್ರಜ್ಞರಿಂದ ಅಗತ್ಯ ಮಾಹಿತಿ ಪಡೆದರು.

ರಾಷ್ಟ್ರೀಯ ತೋಟಗಾರಿಕಾ ಮೇಳ

ಕರ್ನಾಟಕ ಜನರಲ್ಲಷ್ಟೇ ಅಲ್ಲದೆ ನೆರೆಯ ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ, ತಮಿಳುನಾಡು ರಾಜ್ಯಗಳಿಂದ ಅಧಿಕಾರಿಗಳೊಂದಿಗೆ ರೈತರು ಆಗಮಿಸಿದ್ದರು. ಆಯಾಯ ಪ್ರಾದೇಶಿಕ ಭಾಷೆಯಲ್ಲೇ ಅವರಿಗೆ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ತೋಟಗಾರಿಕೆ ತಜ್ಞರು ರೈತರ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಆಲಿಸಿ, ಕೆಲವೊಂದು ಪರಿಹಾರೋಪಾಯಗಳನ್ನು ಸ್ಥಳದಲ್ಲೇ ಸೂಚಿಸಿದರು.

ರಾಷ್ಟ್ರೀಯ ತೋಟಗಾರಿಕಾ ಮೇಳ

ಉತ್ತರ ಭಾರತದ ತೋಟಗಾರಿಕಾ ಬೆಳೆಗಳ ಚರ್ಚಾಗೋಷ್ಠಿ ತೋಟಗಾರಿಕಾ ಮೇಳದ ಪ್ರಧಾನ ವೇದಿಕೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ತಾಂತ್ರಿಕ ಗೋಷ್ಠಿಗಳು ಬೆಳಗ್ಗೆಯಿಂದಲೇ ನಡೆದವು. ವಿಶೇಷವಾಗಿ ಉತ್ತರ ಭಾರತದ ತೋಟಗಾರಿಕೆ ಬೆಳೆಗಳ ಬಗ್ಗೆ ಹಾಗೂ ಆ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಚರ್ಚಾಗೋಷ್ಠಿಯಲ್ಲಿ ಅನಾವರಣಗೊಂಡವು. ವರ್ಚುವಲ್ ಮೂಲಕ ಮೂರು ವಲಯವಾರು ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. ಜಮ್ಮು-ಕಾಶ್ಮೀರ, ಲಡಾಕ್, ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ರೈತರ ಕೇಳಲಾದ ಪ್ರಶ್ನೆಗಳಿಗೆ ತೋಟಗಾರಿಕಾ ಬೆಳೆಗಳ ವಿಜ್ಞಾನಿಗಳು, ತಂತ್ರಜ್ಞರು ಸಮರ್ಪಕ ಮಾಹಿತಿ ನೀಡಿದರು.

ರಾಷ್ಟ್ರೀಯ ತೋಟಗಾರಿಕಾ ಮೇಳ

ಗೋಷ್ಠಿಯ ಅಧ್ಯಕ್ಷತೆಯನ್ನು ಐಐಎಚ್‌ಆರ್ ನಿರ್ದೇಶಕ ಡಾ.ಎಂ.ಆರ್. ದಿನೇಶ್ ವಹಿಸಿದ್ದರು. ಐಐಎಚ್‌ಆರ್ ವಿಜ್ಞಾನಿಗಳಾದ ಡಾ.ಅನಿಲ್‌ಕುಮಾರ್ ನಾಯರ್, ಡಾ. ಅಂಜನಿಕುಮಾರ್, ಡಾ. ರಾಜೀವ್‌ಕುಮಾರ್ ಮತ್ತಿತರರು ಗೋಷ್ಠಿಯಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯ ತೋಟಗಾರಿಕಾ ಮೇಳ
ರಾಷ್ಟ್ರೀಯ ತೋಟಗಾರಿಕಾ ಮೇಳ

ABOUT THE AUTHOR

...view details