ಬೆಂಗಳೂರು:ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ ಡಿಕೆಶಿ ಸಹೋದರರಿಗೆ ಇಡಿ ಸಮನ್ಸ್ ನೀಡಿದ್ದು, ಇಂದು ವಿಚಾರಣೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೈರು ಹಾಜರಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯ ಇಡಿ ಕಚೇರಿಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಆದರೆ ವಿಚಾರಣೆಗೆ ಬೇರೆ ದಿನ ಹಾಜರಾಗುವುದಾಗಿ ಡಿಕೆಶಿ ತಿಳಿಸಿದ್ದಾರೆ.
ಇಡಿ ಸಮನ್ಸ್ಗೆ ಉತ್ತರ ಬರೆದಿರುವ ಡಿಕೆಶಿ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಬೇರೆ ದಿನಾಂಕದಂದು ಸಮಯ ನೀಡುವಂತೆ ಮನವಿ ಮಾಡಿದ್ದಾರೆ. ಇಮೇಲ್ ಮೂಲಕ ಅವರು ತಮ್ಮ ಮನವಿ ಪತ್ರ ಕಳುಹಿಸಿದ್ದಾರೆ. ಇವರ ಸೋದರ ಹಾಗೂ ಸಂಸದ ಡಿ ಕೆ ಸುರೇಶ್ ವಿಚಾರಣೆಗೆ ಹಾಜರಾಗಲಿದ್ದಾರೆ.
ಇಂದು ಕಿತ್ತೂರಿಗೆ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿರುವ ಡಿಕೆಶಿ ಬೆಳಗ್ಗೆಯೇ ಸದಾಶಿವನಗರ ನಿವಾಸದಿಂದ ತೆರಳಿದ್ದಾರೆ. ಬೆಳಗಾವಿಗೆ ತೆರಳಿರುವ ಅವರು ಸಂಜೆಯವರೆಗೆ ಅಲ್ಲಿದ್ದು ಕೆಲ ಸಭೆ ನಡೆಸಲಿದ್ದಾರೆ. ಇಂದು ಸಂಜೆ 5ಕ್ಕೆ ಕಿತ್ತೂರಿಗೆ ತೆರಳಿ ಅಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಹುಬ್ಬಳ್ಳಿಗೆ ವಾಪಸ್ ಆಗುವ ಅವರು ಅಲ್ಲಿಯೇ ತಂಗಲಿದ್ದು, ನಾಳೆ ಮಧ್ಯಾಹ್ನ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.