ಕರ್ನಾಟಕ

karnataka

By ETV Bharat Karnataka Team

Published : Dec 27, 2023, 8:01 PM IST

Updated : Dec 27, 2023, 10:06 PM IST

ETV Bharat / state

ಕನ್ನಡ ನಾಮಫಲಕ ಕಡ್ಡಾಯಕ್ಕೆ ಕಾನೂನು ಮಾಡುತ್ತಿದ್ದೇವೆ: ಸಚಿವ ತಂಗಡಗಿ

ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಪದಗಳು ಕಡ್ಡಾಯವಾಗಿ ಇರಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

Minister Shivraj Thangagi spoke to the media
ವಿಕಾಸಸೌಧದಲ್ಲಿ ಸಚಿವ ಶಿವರಾಜ್ ತಂಗಡಗಿ ಮಾಧ್ಯಮದವರ ಜೊತೆ ಮಾತನಾಡಿದರು.

ಸಚಿವ ಶಿವರಾಜ್ ತಂಗಡಗಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರು: ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆಗೆ ಕಾನೂನು ಮಾಡುತ್ತಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ವಿಕಾಸಸೌಧದಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ನಾನು ನಾರಾಯಣ ಗೌಡರ ಹೋರಾಟವನ್ನು ಬೆಂಬಲಿಸುತ್ತೇನೆ. ಆದರೆ ಮತ್ತೊಬ್ಬರಿಗೆ ತೊಂದರೆ ಕೊಡುವುದು ಬೇಡ. ಸರೋಜಿನಿ ಮಹಿಷಿ ವರದಿ ಎರಡೂ ಸದನಗಳಲ್ಲಿ ಅಂಗೀಕಾರವಾಗಿದೆ. ಈ ವರದಿಯನ್ವಯ ನಿಯಮಗಳನ್ನು ಅನುಸರಿಸುತ್ತಿದ್ದೇವೆ. ಜನವರಿ ಮೊದಲ ವಾರದಲ್ಲಿ ಅಂತಿಮ ಸಭೆ ಮಾಡುತ್ತೇವೆ. ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಪದಗಳು ಇರಲೇಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಟಾಸ್ಕ್ ಫೋರ್ಸ್ ರಚನೆ: ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆ, ಕನ್ನಡ ಬೋಧನೆ ಅನುಷ್ಠಾನಕ್ಕಾಗಿ ಟಾಸ್ಕ್‌ಫೋರ್ಸ್ ಸಮಿತಿ ರಚನೆ ಮಾಡಲಾಗುವುದು. ಕನ್ನಡ ಸಂಸ್ಕೃತಿ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳನ್ನು ಒಳಗೊಂಡ ಟಾಸ್ಕ್‌ಫೋರ್ಸ್ ಸಮಿತಿ ರಚನೆಗೆ ಚಿಂತನೆ ನಡೆದಿದೆ. ನಾವು ಕಾನೂನು ತಂದ ಬಳಿಕ ಕನ್ನಡ ನಾಮ ಫಲಕ ಹಾಕದೇ ಇದ್ದರೆ ಅಂಗಡಿ ಪರವಾನಗಿ ರದ್ದು ಮಾಡುತ್ತೇವೆ. ಶಾಲೆಗಳಲ್ಲಿ ಕನ್ನಡ ಬೋಧನೆ ಮಾಡದೇ ಇದ್ದರೆ ದಂಡ ಅಷ್ಟೇ ಅಲ್ಲ, ಶಿಕ್ಷಣ ಸಂಸ್ಥೆಯ ಮಾನ್ಯತೆ ರದ್ದು ಮಾಡುವ ಬಿಗಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಿಎಂ, ಡಿಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಸರ್ಕಾರಿ ಕಡತಗಳು ಕನ್ನಡದಲ್ಲೇ ಆರಂಭವಾಗಬೇಕು. ಕನ್ನಡಪರ ಸಂಘಟನೆಗಳು ಹೇಳಿದಂತೆ ಕಾನೂನು ತರುತ್ತೇವೆ ಎಂದು ತಿಳಿಸಿದರು. ಇದೇ ವೇಳೆ, ಮಾರ್ವಾಡಿ ವ್ಯಾಪಾರಿಗಳಿಂದ ಬೆಂಗಳೂರು ಕೇಂದ್ರಾಡಳಿತ ಮಾಡಿ ಎಂದು ರಾಜ್ಯಪಾಲರಿಗೆ ದೂರು ನೀಡಿದ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಅಹಿಂದ ಸಮಾವೇಶ:ಜಾರಿ ಗಣತಿ ಜಾರಿ ಸಂಬಂಧ ಅಹಿಂದ ಸಮಾವೇಶ ಆಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಲಿಂಗಾಯತ ಸಮುದಾಯದವರು ಸಮಾವೇಶ ಮಾಡಿದ್ರು, ಅದರಂತೆ ಅಹಿಂದ ಸಮಾವೇಶ ಮಾಡ್ತಿದ್ದಾರೆ. ನಾವು ಕೌಂಟರ್ ಸಮಾವೇಶ ಮಾಡ್ತಿಲ್ಲ ಎಂದು ಹೇಳಿದರು.

ಒಕ್ಕಲಿಗ, ಲಿಂಗಾಯತರು ಜಾತಿ ಗಣತಿ ವರದಿ ಜಾರಿ ಮಾಡಬೇಡಿ ಅಂತಾರೆ, ವರದಿ ಸಿದ್ದವಾಗಿದೆ. ವರದಿ ಜಾತಿಗೆ ಸೀಮಿತವಾದುದಲ್ಲ. ಆರ್ಥಿಕ, ಶೈಕ್ಷಣಿಕ ಕುರಿತ ವರದಿ ಇದು. 54 ಅಂಶಗಳ ಕಾಲಂ ಹಾಕಿ ವರದಿ ಮಾಡಲಾಗಿದೆ. ಪರ, ವಿರೋಧ ಸಲಹೆ ಸಹಜ. ಕ್ಯಾಬಿನೆಟ್​ನಲ್ಲಿ ಎಲ್ಲ ಸಮುದಾಯದವರಿದ್ದಾರೆ. ಒಕ್ಕಲಿಗ, ಲಿಂಗಾಯತ, ಒಬಿಸಿ, ದಲಿತರಿದ್ದಾರೆ. ಮೊದಲು ವರದಿ ಸ್ವೀಕಾರ ಮಾಡ್ತೇವೆ. ವರದಿಯಲ್ಲಿ ಏನಿದೆ ಅಂತ ಯಾರಿಗೆ ಗೊತ್ತು?. ವರದಿ ಲೀಕ್ ಆಗಿದೆ ಅನ್ನೋದು ಸುಳ್ಳು. 168 ಕೋಟಿ ರೂ. ಖರ್ಚು ಮಾಡಿದ್ದೇವೆ. ವರದಿ ತೆಗೆದುಕೊಂಡ ಮೇಲೆ ಅಲ್ಲವೇ ಗೊತ್ತಾಗೋದು? ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಧಕರಿಗೆ ವಾರ್ಷಿಕ ಪ್ರಶಸ್ತಿ: ಇದೇ ಸಂದರ್ಭದಲ್ಲಿ 2022/2023/2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಣೆ ಮಾಡಿದರು. ಕನ್ನಡ ಸಂಸ್ಕೃತಿ ಇಲಾಖೆಯಿಂದ ನೀಡುವ ಪ್ರಶಸ್ತಿಯಲ್ಲಿ ವರ್ಷ ಶಿಲ್ಪಿ ಪ್ರಶಸ್ತಿ- ಜಿ.ಎಲ್.ಎನ್ ಸಿಂಹ, ಕಲಬುರ್ಗಿಯ ಬಸವರಾಜ ಎಲ್.ಜಾನೆಗೆ,ಕಲಬುರ್ಗಿಯ ಮಹದೇವಪ್ಪ ಶಿಲ್ಪಿಗೆ ಜಕಣಾಚಾರಿ ಪ್ರಶಸ್ತಿ, ಚಿಕ್ಕಮಗಳೂರಿನ ಎಸ್.ಪಿ.ಜಯಣ್ಣಾಚಾರ್, ಜಾನಪದ ಶ್ರೀ ಪ್ರಶಸ್ತಿ ಕೊರಗಪ್ಪ ಶೆಟ್ಟಿಗೆ, ರಿವಾಯತ್ ಪದ- ಕಲ್ಲಪ್ಪ ಮಿರ್ಜಾಪುರ, ವೀರಗಾಸೆ- ಜೆ.ಪಿ. ಜಗದೀಶ್, ಹಲಗೆ ವಾದನ- ಹಲಗೆ ದುರ್ಗಮ್ಮ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಪ್ರಕಟಿಸಿದರು.

ಇದನ್ನೂಓದಿ:ಕನ್ನಡದಲ್ಲಿ ನಾಮಫಲಕಕ್ಕೆ ಕರವೇ​ ಆಗ್ರಹ: ಇಂಗ್ಲಿಷ್​ ಫಲಕಗಳನ್ನು​ ಕಿತ್ತುಹಾಕಿದ ಕಾರ್ಯಕರ್ತರು, ನಾರಾಯಣಗೌಡ ಸೇರಿ ಹಲವರು ಪೊಲೀಸ್​ ವಶಕ್ಕೆ

ಎಫ್‌ಕೆಸಿಸಿಐ ಕಳವಳ:ಶೇ.60ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸುವ ಬಿಬಿಎಂಪಿ ನಿರ್ದೇಶನಗಳ ಬಗ್ಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿರುವ ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ, ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸದಾ ಸರ್ಕಾರದ ನಿಯಮಗಳನ್ನು ಅನುಸರಿಸುತ್ತಾ ಬಂದಿದೆ. ಜೊತೆಗೆ ಸರ್ಕಾರದ ಆದೇಶಗಳನ್ನು ಮತ್ತು ಸೂಚನೆಗಳನ್ನು ಪಾಲಿಸಲು ತನ್ನ ಸದಸ್ಯರಿಗೆ ಸೂಚನೆ ನೀಡುತ್ತಾ ಬರಲಾಗಿದೆ. ಕಡ್ಡಾಯ ಕನ್ನಡ ನಾಮಫಲಕಗಳನ್ನು ಅಳವಡಿಸುವುದಕ್ಕೆ 2024ರ ಫೆಬ್ರವರಿ 28 ರವರೆಗೆ ಗಡುವು ಇದೆ. ಈ ನಿಯಮಕ್ಕಾಗಿ ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಾರದೆಂದು ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿಯನ್ನು ವಿನಂತಿಸುತ್ತೇವೆ. ವ್ಯಾಪಾರ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಕಿರುಕುಳ ನೀಡಲು ಯಾರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳದಂತೆಯೂ ನೋಡಿಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Last Updated : Dec 27, 2023, 10:06 PM IST

ABOUT THE AUTHOR

...view details