ಬೆಂಗಳೂರು :ಮೈಸೂರು ಲ್ಯಾಂಪ್ಸ್ ಸ್ವತ್ತು ಹಾಗೂ ಆಸ್ತಿಯನ್ನು ಯಾವುದೇ ಖಾಸಿಯವರಿಗೆ ಮಾರಾಟ ಮಾಡಬಾರದು, ಸರ್ಕಾರವೇ ಬಳಸಿಕೊಂಡು ಉದ್ಯಾನ, ಆಟದ ಮೈದಾನ ಸೇರಿ ಇತರೆ ಬಳಕೆಗೆ ಬಳಸಿಕೊಳ್ಳಬೇಕು. ಖಾಸಗಿಯವರಿಗೆ ನೀಡಬಾರದು ಎಂದು ಖಾಸಗಿ ನಿರ್ಣಯ ಮಂಡಿಸಲಾಯಿತು.
ವಿಧಾನ ಪರಿಷತ್ನಲ್ಲಿ ಖಾಸಗಿ ಮಸೂದೆ ಮಂಡಿಸಿದ ಕಾಂಗ್ರೆಸ್ ಸದಸ್ಯ ಬಿ ಕೆ ಹರಿಪ್ರಸಾದ್ ಮಾತನಾಡಿ, 26 ಎಕರೆ ಪ್ರದೇಶ ಹಸಿರುಮಯವಾಗಿದೆ. ಮಲ್ಲೇಶ್ವರ, ಸದಾಶಿವನಗರ ವ್ಯಾಪ್ತಿಯಲ್ಲಿ ಉಸಿರಾಡಲು ಸ್ಥಳಾವಕಾಶ ಇಲ್ಲ. ಒಂದೊಮ್ಮೆ ಜಯದೇವ ಮಾದರಿಯ ಆಸ್ಪತ್ರೆ ಮಾಡಿ ಸಾರ್ವಜನಿಕ ಸ್ವತ್ತಾಗಿ ಉಳಿಯಬೇಕು. ಮೈಸೂರು ಮಹಾರಾಜರು ನೀಡಿದ ಸ್ಥಳ ಸರ್ಕಾರಿ ಸ್ವತ್ತಾಗಿ ಉಳಿಯಬೇಕೆಂದು ಕೋರಿದರು. ಸರ್ಕಾರಕ್ಕೆ ಆದೇಶ, ಸೂಚನೆ ನೀಡುತ್ತಿಲ್ಲ. ಇದು ಮನವಿ ಆಗಿದೆ ಎಂದರು.
ಮಧ್ಯ ಪ್ರವೇಶ ಮಾಡಿದ ಸಚಿವ ಮಾಧುಸ್ವಾಮಿ, ಯಾವ ಕಾರಣಕ್ಕೂ ಸರ್ಕಾರವನ್ನು ಲಘುವಾಗಿ ಪರಿಗಣಿಸಬೇಡಿ. ನಮಗೆ ಅಂತಹ ಸ್ಥಿತಿ ಬಂದಿಲ್ಲ. ಸ್ಪಷ್ಟವಾಗಿ ನಿಮ್ಮ ಮಾತನ್ನು ಹೇಳಿ. ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಬೇಡಿ. ಹೈಕೋರ್ಟ್ ಮುಂದೆ ಬಂದಾಗ ಇಂತಹ ಪ್ರಸ್ತಾಪ ಬಂದಿತ್ತು. ನಾವು ಅದನ್ನು ಉಳಿಸಿಕೊಳ್ಳುವ ಮಾತಾಡಿದ್ದೇವೆ. ಹೀಗಿರುವಾಗ ಇಂತಹ ಚರ್ಚೆ ತಂದು ಸದನದಲ್ಲಿ ಮುಜುಗರಕ್ಕೊಳಗಾಗಿಸಬೇಡಿ.
ಸರ್ಕಾರದ ಕೈಕಟ್ಟಿ ಆದೇಶ ಮಾಡುವ ಕೆಲಸ ಮಾಡಬೇಡಿ. ಸಿಎಂ ಯಡಿಯೂರಪ್ಪ ಅವರೇ ಮಾರಲ್ಲ ಅಂತಾ ಭರವಸೆ ಕೊಟ್ಟಿದ್ದಾರೆ. ಹೀಗಿರುವಾಗ ಇಂತದ್ದೊಂದು ಖಾಸಗಿ ನಿರ್ಣಯ ಮಂಡಿಸುವುದು ಸರಿಯೇ ಎಂದು ಕೇಳಿದರು. ಡಿಸಿಎಂ ಲಕ್ಷ್ಮಣ್ ಸವದಿ ಮಾತನಾಡಿ, ಪೀಣ್ಯ ಬಳಿ ಇರುವ ಬಸವೇಶ್ವರ ಬಸ್ ನಿಲ್ದಾಣ ಇರುವ ಸ್ಥಳ ವ್ಯವಸ್ಥಿತವಾಗಿಲ್ಲ. ಅವಕಾಶ ಇದ್ದರೆ ಈ ಸ್ಥಳ ಬಳಸಿಕೊಳ್ಳಿ ಎಂಬ ಸಲಹೆ ಬಂದಿತ್ತು. ಯಾವ ನಿರ್ಧಾರ ಕೈಗೊಂಡಿಲ್ಲ ಎಂದಾಗ ಮಾಧುಸ್ವಾಮಿ ಮಧ್ಯಪ್ರವೇಶ ಮಾಡಿ, ಸುಮ್ಮನೆ ವಿಷಯ ಎಳೆಯಬೇಡಿ. ಅನಗತ್ಯ ಚರ್ಚೆ ಬೇಡ, ಮಾರಲ್ಲ ಎಂದು ಭರವಸೆ ನೀಡಿದರು.
ಬಸವರಾಜ ಹೊರಟ್ಟಿ ಮಾತನಾಡಿ, ಕ್ಯಾಬಿನೆಟ್ನಲ್ಲಿ ಪ್ರಸ್ತಾಪಿಸಿ ಇದನ್ನು ಅಧಿಕೃತ ಪಡಿಸಿ ಎಂದು ಸಲಹೆ ಕೊಟ್ಟರು. ಅದಕ್ಕೆ ಒಪ್ಪಿಕೊಳ್ಳಲಾಯಿತು. ಸದಸ್ಯ ಮೋಹನ್ ಕೊಂಡಜ್ಜಿ ಮಾತನಾಡಿ, ಅಶೋಕ ಹೋಟೆಲ್ ಮಾರಾಟವಾದಾಗ ಯಾರಿಂದಲೂ ತಡೆಯಲಾಗಲಿಲ್ಲ. ಕೇಂದ್ರ ಸಚಿವ ಅನಂತ್ ಕುಮಾರ್, ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಉಳಿಸಿಕೊಳ್ಳಲಾಗಲಿಲ್ಲ. ಅಂತಹ ಸ್ಥಿತಿ ಬರಬಾರದು ಎಂದು ಸಲಹೆ ನೀಡಿದರು. ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಎರಡು ದಿನ ಹಿಂದೆ ನಡೆದ ಚರ್ಚೆಯನ್ನು ಮತ್ತೆ ನಿರ್ಣಯ ತರುವುದು ಎಷ್ಟು ಸರಿ? ಅಲ್ಲದೇ ನಿರ್ಣಯ ತರಲು ಏಳು ದಿನ ಮುನ್ನ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ನಿರ್ಧಾರಕ್ಕೆ ಬಿಡಲಾಯಿತು. ನಿರ್ಣಯ ಮಂಡನೆ ಆಗಿದೆ ಅಷ್ಟೇ.. ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು. ವಿಧೇಯಕ ಅನುಮೋದನೆ ಕೈಗಾರಿಕೆ ಸೌಲಭ್ಯ ತಿದ್ದುಪಡಿ ವಿಧೇಯಕವನ್ನು ಸಚಿವ ಜೆ.ಸಿ. ಮಾಧುಸ್ವಾಮಿ ಮಂಡಿಸಿದರು. ಎಲ್ಲಾ ಹಂತದ ಕೈಗಾರಿಕೆಗೂ ಇದು ಅನ್ವಯ. ಎಲ್ಲಾ ಪರವಾನಗಿ ಪಡೆಯುವುದು ಸರಳವಾಗಲಿದೆ. ಒಪ್ಪಿಗೆ ನೀಡಬೇಕೆಂದು ಮನವಿ ಮಾಡಿದರು. ಪ್ರಸ್ತಾವವನ್ನು ಸಭಾಪತಿಗಳು ಮಂಡಿಸಿ ಅನುಮೋದನೆ ಪಡೆದು ಅಂಗೀಕರಿಸಿದರು.
ಭರವಸೆ ನಿಯಮ 330ರ ಅಡಿ ಸದಸ್ಯೆ ವೀಣಾ ಅಚ್ಚಯ್ಯ ಪ್ರಸ್ತಾಪಿಸಿದ ಭೂ ಕುಸಿತ ಹಾಗೂ ಧಾರ್ಮಿಕ ವಿಚಾರದ ಕುರಿತು ಸರ್ಕಾರ ಗಮನ ಹರಿಸಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಶಿವಲಿಂಗ ವಿಸರ್ಜನೆಯಿಂದ ಸಮಸ್ಯೆ ಆಗಲಿದೆ ಎಂದು ಹೇಳಿದ್ದಾರೆ. ಇಲಾಖೆಯ ಆಗಮ ಪಂಡಿತರು ಹಾಗೂ ಸದಸ್ಯೆಯನ್ನೂ ಕೂರಿಸಿ ಚರ್ಚಿಸುತ್ತೇನೆ. ಭೂ ಕುಸಿತ ಸಂಬಂಧ ತಜ್ಞರನ್ನು ಕಳಿಸಿಕೊಟ್ಟು ಪರಿಶೀಲನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ಇತ್ತರು.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇದೆ ಎನ್ನುವ ಕಾರಣಕ್ಕೆ ಆಡಳಿತ ಪಕ್ಷದ ಸದಸ್ಯರು ಕಲಾಪವನ್ನು ಮುಂದೂಡುವಂತೆ ಮನವಿ ಮಾಡಿದರು. ಪ್ರತಿಪಕ್ಷದ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಕಲಾಪ ಮುಂದೂಡಲಾಗುತ್ತಿದೆ. ಸಭಾಪತಿಗಳು ನಿಯಮ 330ರ ಅಡಿ ಸಭೆ ಮುಂದುವರಿಸುವ ನಿರ್ಧಾರ ಕೈಗೊಂಡರು. ಆದರೆ, ಉತ್ತರಿಸಲು ಸಚಿವರು ಇಲ್ಲದ ಹಿನ್ನೆಲೆ ಅನಿವಾರ್ಯವಾಗಿ ಗದ್ದಲದ ನಡುವೆಯೇ ಕಲಾಪವನ್ನು ನಾಳೆ ಬೆಳಗ್ಗೆ 10 ಗಂಟೆಗೆ ಮುಂದೂಡಲಾಯಿತು.