ಬೆಂಗಳೂರು: ಬಿಹಾರ ಚುನಾವಣಾ ಪ್ರಚಾರದಲ್ಲಿ ಇರುವ ನನಗೆ ಬೆಂಗಳೂರು ದಕ್ಷಿಣ ಮೊದಲ ಆದ್ಯತೆಯಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬಿಬಿಎಂಪಿ ಮತ್ತು ಜಲಂಮಡಲಿ ಅಧಿಕಾರಿಗಳೊಂದಿಗೆ ಮಾತನಾಡಿ ಜಲಾವೃತವಾಗಿರುವ ಪ್ರದೇಶಗಳಿಂದ ನೀರನ್ನು ಶೀಘ್ರವೇ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದು, ಅಧಿಕಾರಿಗಳು ನಿನ್ನೆ ಸಂಜೆಯಿಂದ ಈ ಕಾರ್ಯದಲ್ಲಿ ನಿರತರಾಗಿರುತ್ತಾರೆ ಎಂದಿದ್ದಾರೆ.
ಬಿಟಿಎಂ ಲೇಔಟ್ ಮತ್ತು ಕೋರಮಂಗಲದ ಪ್ರದೇಶಗಳು ಮಳೆಯಿಂದ ಹೆಚ್ಚಿನ ತೊಂದರೆಗೊಳಗಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ತಳ ಮಟ್ಟದಲ್ಲಿರುವ ಕೆ.ಸಿ.ವ್ಯಾಲಿ ಕಾಲುವೆ ಹಾಗೂ ಚರಂಡಿ ಲೈನ್ಗಳಿಂದ ಇಂತಹ ಸಮಸ್ಯೆಯುಂಟಾಗಿದೆ. ಅಧಿಕಾರಿಗಳು ಪರ್ಯಾಯ ಲೈನ್ ಕಾಮಗಾರಿಯನ್ನು 2 ತಿಂಗಳೊಳಗಾಗಿ ಮುಗಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸಿಎಂ ಯಡಿಯೂರಪ್ಪನವರು ಧಾರಾಕಾರ ಮಳೆಯಿಂದ ತೊಂದರೆಗೊಳಗಾಗಿರುವ ಪ್ರದೇಶಗಳಿಗೆ ಸಚಿವ ಆರ್. ಅಶೋಕ್ ಜೊತೆಗ ತೆರಳಿ ಪರಿಶೀಲನೆ ನಡೆಸಿದ್ದು, ಹಾನಿಗೆ ಒಳಗಾದ ಕುಟುಂಬಗಳಿಗೆ ತಕ್ಷಣವೇ 25,000 ರೂ. ಪರಿಹಾರ ಘೋಷಿಸಿರುವುದು ಶ್ಲಾಘನೀಯ. ಧಾರಾಕಾರ ಮಳೆಗೆ ಕುಸಿದಿರುವ ಗವಿಗಂಗಾಧರೇಶ್ವರ ದೇವಸ್ಥಾನದ ಕಂಪೌಂಡ್ ಪುನರ್ ನಿರ್ಮಾಣಕ್ಕೆ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ರವರು ಕ್ರಮ ಕೈಗೊಂಡಿದ್ದು, ಶ್ರೀನಗರ ಹಾಗೂ ಹನುಮಂತನಗರದ ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗಿರುವ ಪ್ರದೇಶಗಳ ನೀರನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸುರಕ್ಷಿತವಾಗಿರುವಂತೆ ಬೆಂಗಳೂರು ಜನತೆಯಲ್ಲಿ ಕೋರಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.