ಕರ್ನಾಟಕ

karnataka

ETV Bharat / state

ವಿದ್ಯಾರ್ಥಿಯಾಗಿದ್ದಾಗಲೇ ನಾಯಕತ್ವದ ಗುಣ.. ಗ್ರಾಮೀಣ ಭಾರತದ ಪ್ರತಿಬಿಂಬ ಎಂ ವಿ ರಾಜಶೇಖರನ್.. - ಮಾಜಿ ಸಚಿವ ಎಂ.ವಿ.ರಾಜಶೇಖರನ್ ನಿಧನ

1978ರಲ್ಲಿ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜನತಾಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ರಾಜಶೇಖರನ್ ತಮ್ಮ ರಚನಾತ್ಮಕ ಕೆಲಸಗಳಿಂದ ತಮ್ಮ ಕ್ಷೇತ್ರದೆಲ್ಲೆಡೆ ಪ್ರಸಿದ್ಧಿಯಾಗಿದ್ದರು. 1999ರಲ್ಲಿ ವಿಧಾನಪರಿಷತ್ತಿನ ಸದಸ್ಯತ್ವ, 2002ರಲ್ಲಿ ರಾಜ್ಯಸಭಾ ಸದಸ್ಯತ್ವ ಸ್ಥಾನವು ಅವರನ್ನು ಅರಸಿಕೊಂಡು ಬಂದಿತು.

RAJASHEKARAN_
ಎಂ.ವಿ.ರಾಜಶೇಖರನ್

By

Published : Apr 13, 2020, 11:37 AM IST

ಬೆಂಗಳೂರು: ರಾಜ್ಯವು ಇಂದು ಒಬ್ಬ ರಾಷ್ಟ್ರೀಯ ಮಟ್ಟದ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಿದೆ. ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕ ಗ್ರಾಮೀಣ ಭಾರತ ನಿರ್ಮಾಣದ ಕನಸು ಕಂಡು ಅದರ ಪ್ರತಿಬಿಂಬದ ರೀತಿ ಕಾರ್ಯನಿರ್ವಹಿಸಿದ್ದವರು ಕೇಂದ್ರದ ಮಾಜಿಸಚಿವ ಎಂ ವಿ ರಾಜಶೇಖರನ್. ದೀರ್ಘಕಾಲದ ಅನಾರೋಗ್ಯದಿಂದ ಬಳಲಿ ಇಂದು ಇಹಲೋಕ ತ್ಯಜಿಸಿದ್ದಾರೆ. 92ರ ಹಿರಿಯ ಜೀವ ಹಲವು ತಿಂಗಳಿಂದ ಅನಾರೋಗ್ಯದಿಂದ ಆಸ್ಪತ್ರೆ ವಾಸ ಅನುಭವಿಸಿತ್ತು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ನಗರದ ಬನ್ನೇರುಘಟ್ಟ ರಸ್ತೆಯ ಅಪೊಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.

ಮರಳವಾಡಿಯಲ್ಲಿ ಜನನ :1928ರ ಸೆ.12ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿಯಲ್ಲಿ ಜನಿಸಿದ್ದ ಎಂ ವಿ ರಾಜಶೇಖರನ್ ಕರ್ನಾಟಕದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. 1947-48ರ ‘ಮೈಸೂರು ಚಲೋ ಚಳವಳಿ’ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಾವು ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಭಾರತದ ಸ್ವಾತಂತ್ರ್ಯ ಹೋರಾಟದ ಮೌಲ್ಯ ಮೈಗೂಡಿಸಿಕೊಂಡಿದ್ದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ‘ಮಿತ್ರಮೇಳ’ ಎಂಬ ಸಾಂಸ್ಕೃತಿಕ ಸಂಘಟನೆ ಕಟ್ಟಿ ಬೆಳೆಸಿದ್ದರು. 1953ರಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕಾನೂನು ವ್ಯಾಸಂಗ ಮುಗಿಸುವ ಮುನ್ನವೇ ತಂದೆಯ ಅಕಾಲಿಕ ನಿಧನದಿಂದ ಊರಿಗೆ ವಾಪಸಾಗಬೇಕಾಗಿ ಬಂತು. ಬಳಿಕ ಕೃಷಿ ಕ್ಷೇತ್ರಕ್ಕೆ ಮರಳಿ ಪ್ರಗತಿಪರ ರೈತರೆನಿಸಿಕೊಂಡರು.

ರಾಜ್ಯದಲ್ಲಿ ಯೂತ್ ಕಾಂಗ್ರೆಸ್ ಬಲವರ್ಧನೆ :ಹೆಚ್ ಸಿ ದಾಸಪ್ಪ ಮತ್ತು ಯಶೋದರಮ್ಮ ದಾಸಪ್ಪನವರ ಮಧ್ಯಸ್ತಿಕೆಯಿಂದ ಕರ್ನಾಟಕದ ರೂವಾರಿ ಎಸ್‌ ನಿಜಲಿಂಗಪ್ಪನವರ ನಾಲ್ಕನೆಯ ಮಗಳು ಗಿರಿಜಾ ಅವರನ್ನು 1959ರಲ್ಲಿ ವಿವಾಹವಾದರು. ಅಖಿಲ ಭಾರತ ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಘಟಕದ ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಅವರದಾಯಿತು. ವಿಶೇಷವಾಗಿ ಯೂತ್ ಕಾಂಗ್ರೆಸ್ ರಾಜ್ಯದಲ್ಲಿ ಬಲಗೊಳ್ಳಲು ಅವರು ಕಾರಣಕರ್ತರಾಗಿದ್ದಾರೆ.

ಲೋಕಸಭೆಗೆ ಆಯ್ಕೆ :1967ರಲ್ಲಿ 50 ಸಾವಿರಕ್ಕೂ ಹೆಚ್ಚಿನ ಮತಗಳಿಂದ ಕನಕಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಎಂ ವಿ ರಾಜಶೇಖರನ್ ಯಾವ ಲೋಕಸಭಾ ಸದಸ್ಯರೂ ಯೋಚಿಸದ ರೀತಿ ಚಿಂತಿಸಿ, ಅವುಗಳನ್ನು ಅನುಷ್ಠಾನ ಮಾಡಿದರು. ಮಂಚನಬೆಲೆ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕಾರಣೀಭೂತರಾದವರು.

ಜನತಾಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆಗೆ ಆಯ್ಕೆ :1978ರಲ್ಲಿ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜನತಾಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ರಾಜಶೇಖರನ್ ತಮ್ಮ ರಚನಾತ್ಮಕ ಕೆಲಸಗಳಿಂದ ತಮ್ಮ ಕ್ಷೇತ್ರದೆಲ್ಲೆಡೆ ಪ್ರಸಿದ್ಧಿಯಾಗಿದ್ದರು. 1999ರಲ್ಲಿ ವಿಧಾನಪರಿಷತ್ತಿನ ಸದಸ್ಯತ್ವ, 2002ರಲ್ಲಿ ರಾಜ್ಯಸಭಾ ಸದಸ್ಯತ್ವ ಸ್ಥಾನವು ಅವರನ್ನು ಅರಸಿಕೊಂಡು ಬಂದಿತು. ಭಾರತ ಸರ್ಕಾರದಲ್ಲಿ ಯೋಜನಾ ರಾಜ್ಯ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 2009ರವರೆಗೂ ಬದ್ಧತೆ, ಸಂಘಟನೆ ಹಾಗೂ ವಿಚಾರಶೀಲತೆಗೆ ರಾಜಶೇಖರನ್ ಸದಾ ಹೆಸರಾದವರು.

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಬಂಧ ಮಂಡನೆ :ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗ್ರಾಮೀಣ ಅಭಿವೃದ್ಧಿ ಕುರಿತಂತೆ 100ಕ್ಕೂ ಹೆಚ್ಚಿನ ಪ್ರಬಂಧಗಳನ್ನು ಮಂಡಿಸಿದ್ದಾರೆ. ರಾಜಶೇಖರನ್ ಅವರ ಏಷ್ಯಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಸರಳತೆ, ಸಜ್ಜನಿಕೆ, ತಾಳ್ಮೆಗಳನ್ನು ರೂಢಿಸಿಕೊಂಡಿದ್ದ ರಾಜಶೇಖರನ್ ಮಹಾತ್ಮ ಗಾಂಧೀಜಿ ಹೇಳಿದ ಜೀವನ ಮೌಲ್ಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು.

ಕೌಟುಂಬಿಕ ವಿವರ :ಪತ್ನಿ ಗಿರಿಜಾ ರಾಜಶೇಖರನ್ ಹಾಗೂ ಇಬ್ಬರು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳನ್ನು ಹೊಂದಿರುವ ಇವರು ಬೆಂಗಳೂರಿನ ಬಸನವಗುಡಿಯಲ್ಲಿ ವಾಸವಾಗಿದ್ದರು.

For All Latest Updates

ABOUT THE AUTHOR

...view details