ಕರ್ನಾಟಕ

karnataka

ಸರಳ ಮದುವೆಯಾಗುವ ಜೋಡಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ!

By

Published : Oct 15, 2019, 5:35 AM IST

Updated : Oct 15, 2019, 12:42 PM IST

ರಾಜ್ಯದ ಆಯ್ದ 100 ‘ಎ’ ದರ್ಜೆ ದೇಗುಲಗಳಲ್ಲಿ ಸರ್ಕಾರದ ವತಿಯಿಂದ ಪ್ರತೀ ವರ್ಷ 10 ಸಾವಿರಕ್ಕೂ ಅಧಿಕ ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಆಯೋಜಿಸಲು ರಾಜ್ಯ ಧಾರ್ಮಿಕ ಪರಿಷತ್ ಚಿಂತನೆ ನಡೆಸಿದೆ. ಈ ಸಂಬಂಧ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಭೆ ನಡೆಸಿ ಚರ್ಚಿಸಿದ್ದಾರೆ.

ಉಚಿತ ಸಾಮೂಹಿಕ ವಿವಾಹ ಯೋಜನೆ

ಬೆಂಗಳೂರು: ಬಡವರು, ಜನ ಸಾಮಾನ್ಯರಿಗೆ ಸರಳ ವಿವಾಹವಾಗಲು ಅನುಕೂಲವಾಗುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಉಚಿತ ಸಾಮೂಹಿಕ ವಿವಾಹ ಆಯೋಜಿಸುವ ಮೂಲಕ ವಿನೂತನ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ.

ರಾಜ್ಯದ ಆಯ್ದ 100 ‘ಎ’ ದರ್ಜೆ ದೇಗುಲಗಳಲ್ಲಿ ಸರ್ಕಾರದ ವತಿಯಿಂದ ಪ್ರತೀ ವರ್ಷ 10 ಸಾವಿರಕ್ಕೂ ಅಧಿಕ ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಆಯೋಜಿಸಲು ರಾಜ್ಯ ಧಾರ್ಮಿಕ ಪರಿಷತ್ ಯೋಜಿಸಿದೆ. ಈ ಸಂಬಂಧ ಈಗಾಗಲೇ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಭೆಗಳನ್ನು ನಡೆಸಿದ್ದು, ಧಾರ್ಮಿಕ ಪರಿಷತ್ ಸಮಿತಿಗಳ ರಚನೆ ಬಳಿಕ ಈ ಯೋಜನೆ ಜಾರಿಗೆ ವೇಗ ನೀಡಲು ಚಿಂತನೆ ನಡೆಸಿದ್ದಾರೆ.

ಈ ಯೋಜನೆಯ ಅಂಗವಾಗಿ ವಧು ಮತ್ತು ವರನಿಗೆ ವಿವಾಹ ವಸ್ತ್ರ, ಎಂಟು ಗ್ರಾಂ ಚಿನ್ನದ ಮಾಂಗಲ್ಯ, ವಿವಾಹವಾದ ಜೋಡಿಗಳಿಗೆ ಆರ್ಥಿಕ ಸಹಾಯಧನ ನೀಡುವುದರ ಜೊತೆಗೆ ವಿವಾಹ ನೋಂದಣಿಯನ್ನು ಮಾಡಿಸಲು ಇಲಾಖೆ ತೀರ್ಮಾನಿಸಿದೆ. ನೂತನ ಯೋಜನೆಯನ್ನು 2020-21ರ ಆರ್ಥಿಕ ವರ್ಷದಿಂದ ಜಾರಿಗೊಳಿಸಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದೆ.

ಉಚಿತ ಸಾಮೂಹಿಕ ವಿವಾಹ ಯೋಜನೆ

ಪ್ರತಿ ಜೋಡಿ ವಿವಾಹಕ್ಕೆ ಅಂದಾಜು 25-30 ಸಾವಿರ ರೂ. ಖರ್ಚು ತಗಲುವ ಸಾಧ್ಯತೆ ಇದ್ದು,1000 ಜೋಡಿಗಳಿಗೆ ಅಂದಾಜು 2.5- 3 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದೆ. 10 ಸಾವಿರ ಜೋಡಿಗಳಿಗೆ 25-30 ಕೋಟಿ ರೂ. ವಾರ್ಷಿಕ ವೆಚ್ಚ ತಗಲುವ ಸಾಧ್ಯತೆ ಇದ್ದು, ವಿವಾಹ ಕಾರ್ಯಕ್ರಮ, ಊಟೋಪಚಾರ ಸೇರಿ ಸುಮಾರು 35 ಕೋಟಿ ರೂ. ಖರ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ದೇವಸ್ಥಾನಗಳಲ್ಲಿ ವಿವಾಹ?:

ರಾಜ್ಯದ ಪ್ರಮುಖ ದೇವಾಲಯಗಳಾದ ಮಲೆ ಮಹದೇಶ್ವರ, ಚಾಮುಂಡೇಶ್ವರಿ, ನಂಜನಗೂಡು ನಂಜುಂಡೇಶ್ವರ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ ದೇವಿ, ಮಂಗಳೂರು ಮಂಗಳಾದೇವಿ, ಕಟೀಲು ದುರ್ಗಾ ಪರಮೇಶ್ವರಿ ದೇಗುಲ ಸೇರಿದಂತೆ ಆಯ್ದ 100 ದೇಗುಲಗಳನ್ನು ಸಾಮೂಹಿಕ ವಿವಾಹ ಯೋಜನೆಗೆ ಗುರುತಿಸಲಾಗಿದೆ‌ ಎಂದು‌ ಮುಜರಾಯಿ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ.

ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ಆಯಾ ದೇವಸ್ಥಾನದ ಆದಾಯದಿಂದಲೇ ಭರಿಸಲಾಗುತ್ತದೆ. ಒಂದೊಮ್ಮೆ ಅಷ್ಟು ವೆಚ್ಚವನ್ನು ದೇಗುಲದಿಂದ ಭರಿಸಲು ಸಾಧ್ಯವಾಗದಿದ್ದಲ್ಲಿ ದಾನಿಗಳ ಸಹಕಾರದಿಂದ ಸಾಮೂಹಿಕ ವಿವಾಹ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ.

ಇನ್ನು ಸಾಮೂಹಿಕ ವಿವಾಹ ಕಾರ್ಯಕ್ರಮ ಸಾಧಕ ಬಾಧಕಗಳನ್ನು ಕುರಿತು ಮತ್ತಷ್ಟು ಸಮಗ್ರ ಅಧ್ಯಯನ ನಡೆಸಲಾಗುತ್ತಿದೆ. ಅಧಿಕಾರಿಗಳ ತಂಡ ಧರ್ಮಸ್ಥಳಕ್ಕೆ ತರಳಿ ವೀರೇಂದ್ರ ಹೆಗ್ಗಡೆ ಅವರು ನಡೆಸಿಕೊಡುವ ಸಾಮೂಹಿಕ ವಿವಾಹ ಕಾರ್ಯಕ್ರಮದ ರೂಪು ರೇಷೆಗಳನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ತಿಳಿಸಲಾಗಿದೆ.

Last Updated : Oct 15, 2019, 12:42 PM IST

ABOUT THE AUTHOR

...view details