ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪತಿ ಜತೆ ಸೇರಿ ಕೊಲೆಗೈದು, ಮೂಟ್ಟೆ ಕಟ್ಟಿದ್ದ ಮಹಿಳೆ ಸೇರಿ ಮೂವರು ಕಾಡುಗೋಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಉತ್ತರ ಪ್ರದೇಶ ಮೂಲದ ವಿಶಾಲ್ ಪ್ರಜಾಪತಿ, ಆತನ ಪತ್ನಿ ರೂಬಿ ಪ್ರಜಾಪತಿ ಮತ್ತು ಕೊಲೆಯಾದ ಬಿಹಾರ ಮೂಲದ ಓಂನಾಥ್ಸಿಂಗ್ ಪತ್ನಿ ಗುಂಜಾದೇವಿ ಬಂಧಿತರು.
ಆರೋಪಿಗಳು ಜುಲೈ 4ರಂದು ರಾತ್ರಿ ಓಂನಾಥ್ ಸಿಂಗ್ ಎಂಬಾತನನ್ನು ಚಿತ್ರಹಿಂಸೆ ನೀಡಿ ಕೊಲೆಗೈದು, ಮೃತದೇಹವನ್ನು ಮೂಟ್ಟೆ ಕಟ್ಟಿ ಬೆಳತೂರು-ಕೊಡಿಗೇಹಳ್ಳಿ ಮುಖ್ಯ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯ ಚರಂಡಿಯಲ್ಲಿ ಬಿಸಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಉತ್ತರ ಪ್ರದೇಶದ ಮೂಲದ ವಿಶಾಲ್ ಪ್ರಜಾಪತಿ ದಂಪತಿ ಈ ಹಿಂದೆ ಗುಜರಾತ್ನಲ್ಲಿ ಗುಟ್ಕಾ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅದೇ ವೇಳೆ ಓಂನಾಥ್ಸಿಂಗ್ ದಂಪತಿ ಪರಿಚಯವಾಗಿದ್ದು, ನಾಲ್ವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.
ಓಂನಾಥ್ ಸಿಂಗ್ ಕೊಲೆಯಾದ ವ್ಯಕ್ತಿ ಮತ್ತೊಂದೆಡೆ ಗುಂಜಾದೇವಿ ಮಾನಸಿಕ ಅಸ್ವಸ್ಥೆಯಾಗಿದ್ದರಿಂದ ಓಂನಾಥ್ಸಿಂಗ್ ಮತ್ತು ರೂಬಿ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಬಳಿಕ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ನಾಲ್ವರು ಕಾಡುಗೋಡಿಯ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿಯ ರಾಜೇಂದ್ರ ಎಂಬುವರ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದರು.
ಇದನ್ನೂ ಓದಿ:ಮೊಬೈಲ್ ಕೊಡಿಸದಿದ್ದಕ್ಕೆ ಬೇಸರ: ತಂದೆಯ ಜನ್ಮದಿನದಂದೇ ಮಗ ನೇಣಿಗೆ ಶರಣು
ಕೆಲ ತಿಂಗಳ ಹಿಂದೆ ವಿಶಾಲ್ 15 ಸಾವಿರ ರೂ. ಸಾಲವನ್ನು ಓಂನಾಥ್ ಸಿಂಗ್ಗೆ ಕೊಟ್ಟು ಕೆಲಸಕ್ಕೆಂದು ಮಂಗಳೂರಿಗೆ ಹೋಗಿದ್ದ. ಆಗ ರೂಬಿ ಮತ್ತು ಓಂನಾಥ್ಸಿಂಗ್ ಆತ್ಮೀಯತೆ ಮತ್ತಷ್ಟು ಹೆಚ್ಚಾಗಿತ್ತು. ಇತ್ತೀಚೆಗಷ್ಟೇ ವಿಶಾಲ್ ಪ್ರಜಾಪತಿ ವಾಪಸ್ ಮನೆಗೆ ಬಂದಾಗ ಪತ್ನಿ ಮತ್ತು ಓಂನಾಥ್ಸಿಂಗ್ ಆತ್ಮೀಯವಾಗಿರುವ ದೃಶ್ಯ ನೋಡಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ತಾನೂ ಕೊಟ್ಟ 15 ಸಾವಿರ ರೂ. ವಾಪಸ್ ಕೊಟ್ಟು, ಮನೆಯಿಂದ ಹೊರಗಡೆ ಹೋಗುವಂತೆ ಎಚ್ಚರಿಕೆ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಉಲ್ಟಾ ಹೊಡೆದ ರೂಬಿ:ಪತಿಯ ಹಲ್ಲೆಯಿಂದ ಗಾಬರಿಗೊಂಡ ರೂಬಿ, ತನಗೆ ಇಷ್ಟವಿಲ್ಲದಿದ್ದರೂ ಈತನೇ ತನ್ನನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಪೀಡಿಸುತ್ತಿದ್ದ ಎಂದು ಸುಳ್ಳು ಹೇಳಿದ್ದಳು. ಅಲ್ಲದೆ, ಗುಂಜಾದೇವಿಗೂ ಘಟನೆಯ ವಿವರ ತಿಳಿಸಿ ಹಲ್ಲೆ ನಡೆಸಿದ್ದರು. ಮೂರು ದಿನಗಳ ಕಾಲ ಓಂನಾಥ್ಸಿಂಗ್ನನ್ನು ಮನೆಯಲ್ಲಿ ಕೂಡಿಹಾಕಿ ದಂಪತಿ ಚಿತ್ರಹಿಂಸೆ ನೀಡಿದ್ದಾರೆ. ಊಟ, ನೀರು ಕೊಡದೆ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ.
ಜುಲೈ 4ರಂದು ರಾತ್ರಿ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಓಂನಾಥ್ಸಿಂಗ್ ಮೃತಪಟ್ಟಿದ್ದಾನೆ. ಗಾಬರಿಗೊಂಡ ಮೂವರು ಗೋಣಿ ಚೀಲದಲ್ಲಿ ಮೃತದೇಹವನ್ನು ತುಂಬಿ ಮನೆಯಿಂದ 200 ಮೀಟರ್ ದೂರದಲ್ಲಿರುವ ಚರಂಡಿಗೆ ಎಸೆದು ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸಿಸಿ ಕ್ಯಾಮರಾದ ಸುಳಿವು:ಪ್ರಕರಣ ಸಂಬಂಧ ವೈಟ್ಫೀಲ್ಡ್ ಡಿಸಿಪಿ ಎಸ್. ಗಿರೀಶ್ ಮಾರ್ಗದರ್ಶನದಲ್ಲಿ ವೈಟ್ಫೀಲ್ಡ್ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ಮತ್ತು ಕಾಡುಗೋಡಿ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಐವರು ಸಬ್ ಇನ್ಸ್ಪೆಕ್ಟರ್ಗಳ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಮೃತದೇಹ ಸಿಕ್ಕ ಸುಮಾರು ಎರಡು ಕಿ.ಮೀಟರ್ ವ್ಯಾಪ್ತಿಯ ಎಲ್ಲ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಇಬ್ಬರು ಮಹಿಳೆಯರು ಸೇರಿ ಮೂವರು ಉತ್ತರ ಭಾರತದ ಬಟ್ಟೆ ಧರಿಸಿ ಮೂಟ್ಟೆ ಹೊತ್ತೊಯ್ಯುವ ದೃಶ್ಯ ಸೆರೆಯಾಗಿತ್ತು.
ಹೀಗಾಗಿ ಸಮೀಪದ ಸುಮಾರು ಒಂದು ಸಾವಿರ ಮನೆಗಳಲ್ಲಿ ಹಿಂದಿ ಮಾತನಾಡುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಕೊನೆಗೆ ಮೃತ ವ್ಯಕ್ತಿ ವಾಸದ ಮನೆ ಪತ್ತೆಯಾಗಿತ್ತು. ಆಗ ಆರೋಪಿಗಳು ಪರಾರಿಯಾಗಿರುವುದು ಗೊತ್ತಾಗಿ, ಮೂವರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.