ಬೆಂಗಳೂರು:"ರಾಮಮೂರ್ತಿಯವರ ಜೊತೆಜೊತೆಗೆ ಕನ್ನಡ ಹೋರಾಟವನ್ನು ಕಟ್ಟಿದ ಅವರ ಪತ್ನಿ ಕಮಲಮ್ಮನವರನ್ನೂ ಸಹ ರಾಜ್ಯಸರ್ಕಾರ 'ಸಾಂಸ್ಕೃತಿಕ ರೂವಾರಿ' ಯನ್ನಾಗಿ ನೇಮಿಸಿ ಗೌರವಪೂರ್ವಕವಾಗಿ ನಡೆಸಿಕೊಳ್ಳಬೇಕು" ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ. ಕನ್ನಡದ ಕಟ್ಟಾಳು, ಕನ್ನಡ ಧ್ವಜದ ನಿರ್ಮಾತೃ, ಕನ್ನಡ ಚಳವಳಿಯ ಧೀಮಂತ ನಾಯಕ ದಿವಂಗತ. ಮ. ರಾಮಮೂರ್ತಿ ಅವರ ಧರ್ಮಪತ್ನಿ 101 ವರ್ಷದ ಕಮಲಮ್ಮನರನ್ನು ಮುಖ್ಯಮಂತ್ರಿ ಚಂದ್ರು ನಗರದ ಸೇವಾ ಕ್ಷೇತ್ರ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಕಮಲಮ್ಮನವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿ, ಸಹಾಯಧನದ ಚೆಕ್ ವಿತರಿಸಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, "ಸಾಲುಮರದ ತಿಮ್ಮಕ್ಕನವರಿಗೆ ನೀಡಿರುವ ಗೌರವ ಸವಲತ್ತುಗಳ ರೀತಿಯಲ್ಲಿ ಇವರಿಗೂ ಕೊಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಈ ಕೂಡಲೇ ಗಮನಹರಿಸಬೇಕು" ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸೇವಾ ಕ್ಷೇತ್ರ ಆಸ್ಪತ್ರೆಯ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು. ಆಸ್ಪತ್ರೆಯ ಮುಖ್ಯಸ್ಥ ಡಾ. ವಿಜಯ್, ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆವಾನಿ, ಮುಖಂಡರುಗಳಾದ ಡಾ. ರಮೇಶ್ ಬೆಳ್ಳಂಕೊಂಡ, ದರ್ಶನ್ ಜೈನ್, ಸುಷ್ಮಾ ವೀರ್ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತಿದ್ದರು.
ಸಿಎಂಗೆ ಪತ್ರ ಬರೆದಿದ್ದ ಕಸಾಪ ಅಧ್ಯಕ್ಷ:"ಕನ್ನಡದ ವೀರಸೇನಾನಿ, ಕನ್ನಡ ಬಾವುಟದ ನೇತಾರ ಹಾಗೂ ಮೊದಲ ಬಾರಿಗೆ ಸಾರ್ವಜನಿಕವಾಗಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಪ್ರಾರಂಭಿಸಿದ ಮ. ರಾಮಮೂರ್ತಿರ ಧರ್ಮಪತ್ನಿ ಕಮಲಮ್ಮ ಅವರಿಗೆ ಗೌರವ ಸಂಕೇತವಾಗಿ ಸರ್ಕಾರ ಅವರಿಗೆ ವೃದ್ಯಾಪ್ಯವೇತನ, ಜೀವನೋಪಾಯ ಹಾಗೂ ಶುಶ್ರೂಷೆಗಾಗಿ ಆರ್ಥಿಕ ನೆರವು ನೀಡಬೇಕು. ತೀರಾ ಕಷ್ಟದಲ್ಲಿ ಇರುವ ಕಮಲಮ್ಮನವರಿಗೆ ಈಗ 97 ವರ್ಷಗಳಾಗಿದ್ದು. ಅವರ ಜೀವನದ ಸಂಧ್ಯಾಕಾಲದಲ್ಲಿ ಸರ್ಕಾರ ಆರ್ಥಿಕ ನೆರವು ಒದಗಿಸುವ ಮೂಲಕ ಕನ್ನಡ ಸೇನಾನಿಗೆ ಗೌರವ ಸಲ್ಲಿಸಬೇಕು" ಎಂದು ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದರು.