ಬೆಂಗಳೂರು: ಅತಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ ಕ್ಯಾನ್ಸರ್ ಗುಣಪಡಿಸುತ್ತಿದ್ದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತೊಂದು ಮೈಲಿಗಲ್ಲು ಇಟ್ಟಿದ್ದು, ಮಕ್ಕಳ ಕ್ಯಾನ್ಸರ್ ರೋಗಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲು ಮುಂದಾಗಿದೆ. ಅಲ್ಲದೇ ಈ ಆಸ್ಪತ್ರೆಗೆ ಶ್ರೀಮತಿ ಮೀರಾ ನಾಯ್ಡುರವರು ತಮ್ಮ ಹೋಟೆಲ್ನ್ನು ದಾನವಾಗಿ ನೀಡಿದ್ದಾರೆ.
ಶಂಕರ ಟ್ರಸ್ಟ್ ವ್ಯವಸ್ಥಾಪಕರು ಹಾಗೂ ಕ್ಯಾನ್ಸರ್ ಶಸ್ತ್ರವೈದ್ಯರಾದ ಡಾ. ಶ್ರೀನಾಥ್ ಬಸವನಗುಡಿಯಲ್ಲಿರುವ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ 2012 ರಿಂದ ಇಂದಿನವರೆಗೆ 43,000 ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ ಗುಣಪಡಿಸುವಲ್ಲಿ ಶಂಕರ ಆಸ್ಪತ್ರೆ ಹೆಸರುವಾಸಿಯಾಗಿದೆ. ಚಿಕಿತ್ಸೆಯ ಜೊತೆಗೆ ಕ್ಯಾನ್ಸರ್ ರೋಗಿಗಳಿಗೆ ನಿತ್ಯ ಅನ್ನದಾನ ಸೇವೆಯನ್ನು ಮಾಡುತ್ತಾ ಬಂದಿದೆ.
ಈ ಕುರಿತು ಶಂಕರ ಟ್ರಸ್ಟ್ ವ್ಯವಸ್ಥಾಪಕರು ಹಾಗೂ ಕ್ಯಾನ್ಸರ್ ಶಸ್ತ್ರವೈದ್ಯರಾದ ಡಾ. ಶ್ರೀನಾಥ್ 'ಈಟಿವಿ ಭಾರತ್' ಜೊತೆ ಮಾತನಾಡಿ, ಕ್ಯಾನ್ಸರ್ ರೋಗವನ್ನು ಗುಣಪಡಿಸಲು ದುಬಾರಿ ವೆಚ್ಚ ತಗುಲುತ್ತದೆ. ತಮ್ಮ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳಿಗೆ ಕ್ಯಾನ್ಸರ್ ಉಚಿತವಾಗಿ ಗುಣಪಡಿಸುವ ಒಂದು ವಿಭಾಗವನ್ನು ಆರಂಭಿಸಿದ್ದೇವೆ. ಅದರಲ್ಲಿ ದೂರದ ಹಳ್ಳಿಗಳಿಂದ ಬರುವ ಬಡಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಯೋಜನೆ ಇದೆ. ಈ ಮೂಲಕ ಚಿಕ್ಕ ಮಕ್ಕಳ ಕ್ಯಾನ್ಸರ್ ಗುಣಪಡಿಸಬಹುದಾಗಿದೆ ಎಂದರು.
ಇನ್ನು ಶ್ರೀಮತಿ ಮೀರಾ ನಾಯ್ಡುರವರು ತಮ್ಮ ಪತಿಯ ಸ್ಮರಣಾರ್ಥವಾಗಿ ಗಾಂಧಿನಗರದಲ್ಲಿದ್ದ ಲಕ್ಷ್ಮೀ ಹೋಟೆಲ್ನ್ನು ಆಸ್ಪತ್ರೆಗೆ ದಾನವಾಗಿ ನೀಡಿದ್ದಾರೆ. ಇದರಲ್ಲಿರುವ ಮೂವತ್ತು ಕೋಣೆಗಳನ್ನು ನವೀಕರಣ ಮಾಡಿ ಮೂವತ್ತು ಸಂಸಾರಗಳು ಉಚಿತವಾಗಿ ನೆಲೆಸಲು ಹಾಗೂ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮಕ್ಕಳು ತಿಂಗಳುಗಳ ಕಾಲ ಚಿಕಿತ್ಸೆಗೆಂದು ನಗರದಲ್ಲಿ ತಂಗಾಬೇಕಾಗುತ್ತದೆ. ಉಳಿದಿಕೊಳ್ಳುವ ಹೆಚ್ಚಾಗಿ ಖರ್ಚು ತಗುಲುತ್ತದೆ. ಮಹಾತಾಯಿ ದಾನ ಮಾಡಿರುವ ಹೋಟೆಲ್ ಬಹಳಷ್ಟು ಉಪಕಾರಿಯಾಗಿದೆ ಎಂದು ಮೀರಾ ನಾಯ್ಡುರಿಗೆ ವಂದನೆ ಸಲ್ಲಿಸಿದರು.
ಹದಿನೈದು ದಿನದಲ್ಲಿ ಲಕ್ಷ್ಮಿ ಚಿಲ್ಡ್ರನ್ಸ್ ಹೆಲ್ತ್ ಸೆಂಟರ್ ಸೇವೆಗೆ ಸಿದ್ಧ:
ಹೋಟೇಲ್ ನವೀಕರಣ ಮಾಡಿ ರೋಗಿಗಳ ಕುಟುಂಬ ಚಿಕಿತ್ಸೆಯ ಅವಧಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಎಲ್ಲ ತಯಾರಾಗಿದೆ. ಬಿಸಿ ನೀರು, ಅಡುಗೆ ವ್ಯವಸ್ಥೆ ಆಗಿದೆ. ಹದಿನೈದು ದಿನದಲ್ಲಿ ಅಲ್ಲಿ ಕೆಲಸ ಆರಂಭವಾಗಲಿದೆ. ಡೊನೇಷನ್ ಕೊಡುವವರಿಗೆ ಸದಾ ಅವಕಾಶವಿದೆ. ಆಸ್ಪತ್ರೆ, ದಾನ ಮಾಡಲು ಇಚ್ಛಿಸುವವರು 08026981000, ಅಥವಾ 08026981026 ನಂಬರ್ಗೆ ಸಂಪರ್ಕಿಸಬಹುದಾಗಿದೆ ಎಂದರು.