ಕರ್ನಾಟಕ

karnataka

ETV Bharat / state

PUCಯಲ್ಲಿ ಟಾಪರ್, ಏರೋನಾಟಿಕಲ್ ಇಂಜಿನಿಯರಿಂಗ್ ಕನಸು: ಕೋಪದಲ್ಲಿ ಅಜ್ಜಿ ಕೊಂದು ಹೋಟೆಲ್ ಸಪ್ಲೈಯರ್ ಆದ ಮೊಮ್ಮಗ - killed an old woman

ಅಜ್ಜಿಯನ್ನು ಕೊಂದು ಗೋಡೆಯಲ್ಲಿ ಬಚ್ಚಿಟ್ಟ ತಾಯಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಐದು ವರ್ಷಗಳ ಹಿಂದಿನ ಕೊಲೆಯನ್ನು ಕೊನೆಗೂ ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ.

Mother and son who killed an old woman
ವೃದ್ಧೆಯನ್ನು ಕೊಂದು ಗೋಡೆ ಕೊರೆದು ಶವ ಬಚ್ಚಿಟ್ಟ ತಾಯಿ,ಮಗ

By

Published : Oct 7, 2022, 9:12 AM IST

Updated : Oct 7, 2022, 6:41 PM IST

ಬೆಂಗಳೂರು:ಕಳೆದ‌‌ ಐದು ವರ್ಷಗಳ ಹಿಂದೆ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸಿದ ವೃದ್ಧೆ ಶಾಂತಕುಮಾರಿ ಕೊಲೆ ಪ್ರಕರಣವನ್ನು ಕೆಂಗೇರಿ ಪೊಲೀಸರು ಕೊನೆಗೂ ಬೇಧಿಸಿದ್ದಾರೆ. ಇದೀಗ ಪೊಲೀಸರು ತಾಯಿ-ಮಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಬೇಧಿಸುವ ಮುನ್ನ ಆರೋಪಿಗಳ ಬಂಧನಕ್ಕೆ ಪೊಲೀಸರು ವಿವಿಧ ತಂಡ ರಚಿಸಿ ತನಿಖೆ ನಡೆಸಿದರೂ, ಪ್ರಕರಣದ ಮೂರನೇ ಆರೋಪಿ ಹೊರತುಪಡಿಸಿ ಮುಖ್ಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು.

ತಾರ್ಕಿಕ ಅಂತ್ಯ ಕಾಣದೆ ದೂಳು ಹಿಡಿದಿದ್ದ ಪ್ರಕರಣವನ್ನ ಮತ್ತೆ ಸವಾಲಾಗಿ ಸ್ವೀಕರಿಸಿದ ಕೆಂಗೇರಿ‌ ಠಾಣೆಯ ಇನ್‌ಸ್ಪೆಕ್ಟರ್ ವಸಂತ್ ನೇತೃತ್ವದ ತಂಡ, ತಾಯಿ ಶಾಂತಕುಮಾರಿ ಕೊಲೆಗೈದ ಆರೋಪದಡಿ ಶಶಿಕಲಾ (46), ಆಕೆಯ ಮಗ ಸಂಜಯ್ (26) ಎಂಬುವರನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿ ನಗರಕ್ಕೆ‌ ಕರೆತಂದಿದ್ದಾರೆ.

ಐದು ವರ್ಷಗಳ ಹಿಂದೆ ನಡೆದಿದ್ದ ವೃದ್ದೆಯ ಹತ್ಯೆ: ಕೆಂಗೇರಿ ಸ್ಯಾಟಲೈಟ್ ಬಡಾವಣೆಯ ಮನೆಯೊಂದರಲ್ಲಿ ಹತ್ಯೆಯಾದ 69 ವರ್ಷದ ಶಾಂತಕುಮಾರಿ ಜೊತೆಗೆ ಮಗಳು ಶಶಿಕಲಾ ಹಾಗೂ‌ ಮೊಮ್ಮಗ ಸಂಜಯ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಶಿಸ್ತು ಹಾಗೂ ಮಡಿವಂತಿಕೆಯನ್ನು ಶಾಂತಕುಮಾರಿ ಬೆಳೆಸಿಕೊಂಡಿದ್ದರು. ಶಶಿಕಲಾ ಗೃಹಿಣಿಯಾಗಿದ್ದು,‌ ಈಕೆಯ ಗಂಡ ಹಲವು ವರ್ಷಗಳ ಹಿಂದೆ ಮೃತರಾಗಿದ್ದರು. ಪುತ್ರ ಸಂಜಯ್ ಖಾಸಗಿ ಕಾಲೇಜಿನಲ್ಲಿ ಏರೊನಾಟಿಕಲ್ ಇಂಜಿನಿಯರ್ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ. ಪ್ರತಿಭಾವಂತನಾಗಿದ್ದ ಈತ ಎಸ್​​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದಿದ್ದ.

ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ

ಓದುವ ವಿಷಯದಲ್ಲಿ ಮುಂದಿದ್ದ ಸಂಜಯ್ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮಡಿ-ಮೈಲಿಗೆ ಸಂಪ್ರದಾಯ ಬೆಳೆಸಿಕೊಂಡಿದ್ದ ವೃದ್ದೆ ಶಾಂತಕುಮಾರಿಗೆ 2016 ಆಗಸ್ಟ್​ನಲ್ಲಿ ಕಾಲೇಜು ಮುಗಿಸಿ ಸಂಜಯ್ ಮನೆಗೆ ಬಂದು ಗೋಬಿಮಂಜೂರಿ ತಂದುಕೊಟ್ಟಿದ್ದ. ಇದನ್ನು ನಿರಾಕರಿಸಿ ಬೈದು ಮೊಮ್ಮಗನ ಮೇಲೆ ಬಿಸಾಕಿದ್ದರು. ಇದರಿಂದ ಅಸಮಾಧಾನಗೊಂಡ ಸಂಜಯ್ ಅಡುಗೆ ಮನೆಯಲ್ಲಿದ್ದ ಲಟ್ಟಣಿಗೆಯಿಂದ ತಲೆಗೆ ಹೊಡೆದಿದ್ದ. ತೀವ್ರ ರಕ್ತಸ್ರಾವವಾಗಿ ಮನೆಯಲ್ಲಿ ಶಾಂತಕುಮಾರಿ ಮೃತಪಟ್ಟಿದ್ದರು.

ಶವವನ್ನ ಗೋಡೆಯಲ್ಲಿ ಬಚ್ಚಿಟ್ಟ ತಾಯಿ-ಮಗ:ತನ್ನ ತಾಯಿಯನ್ನ ಮಗ ಸಂಜಯ್ ಕೊಲೆಗೈದ ವಿಚಾರ ಅರಿತುಕೊಂಡ ಶಶಿಕಲಾ, ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಿದ್ದರು. ಪೊಲೀಸರಿಗೆ ತಿಳಿಸಿದರೆ ನಾನು ಜೈಲಿಗೆ ಹೋಗುವೆ‌. ನಿನ್ನ ಮಗನ ಭವಿಷ್ಯವನ್ನ ನೀನೆ ಹಾಳು ಮಾಡುತ್ತೀಯಾ ಎಂದು ಪೊಲೀಸರಿಗೆ ಹೇಳದಂತೆ ಸಂಜಯ್ ಗೋಗರಿದಿದ್ದ. ‌ಇದಕ್ಕೆ ಶಶಿಕಲಾ ಒಪ್ಪಿಕೊಂಡಿದ್ದರು. ಮನೆಯಿಂದ ಶವ ಹೊರತೆಗೆಯುವುದು ಅಸಾಧ್ಯವೆಂದು ನಿರ್ಧರಿಸಿ ಸ್ನೇಹಿತ ಕುಂಬಳಗೋಡಿನ ನಿವಾಸಿ ನಂದೀಶ್​​ಗೆ ಸಂಜಯ್ ವಿಷಯ ತಿಳಿಸಿ ಮನೆಗೆ ಕರೆಯಿಸಿಕೊಂಡಿದ್ದ.

ಮೂವರು ಒಟ್ಟುಗೂಡಿ ಮನೆಯ ಕಬೋರ್ಡ್​ನಲ್ಲಿ ಶವ ಬಚ್ಚಿಟ್ಟಿದ್ದರು. ವಾಸನೆ ಬರದಿರಲು ಕೆಮಿಕಲ್ಸ್ ಹಾಕಿದ್ದರು. ಬಳಿಕ ಮನೆಯೊಳಗೆ ಗೋಡೆ ಕೊರೆದು ಶವವಿಟ್ಟು ಸಿಮೆಂಟ್​​ನಿಂದ ಪ್ಲಾಸ್ಟರಿಂಗ್ ಮಾಡಿ ಬಣ್ಣ ಬಳಿದಿದ್ದರು‌‌. ಕೆಲ ತಿಂಗಳ ಬಳಿಕ‌ ಊರಿಗೆ ಹೋಗಿಬರುವುದಾಗಿ ಹೇಳಿ ಮನೆ ಮಾಲೀಕರಿಗೆ ತಿಳಿಸಿ ಪರಾರಿಯಾಗಿದ್ದರು.

ಗೋಡೆ ಕೊರೆದಾಗ ವೃದ್ಧೆಯ ಕಳೇಬರ ಪತ್ತೆ: ಆರು ತಿಂಗಳಾದರೂ ಊರಿಗೆ ಹೋಗಿದ್ದ ಅಮ್ಮ-ಮಗ ಮನೆಗೆ ಬಾರದೆ ಅನುಮಾನಗೊಂಡ ಮನೆ ಮಾಲೀಕರು, ಮನೆ ರಿಪೇರಿ ಮಾಡಿಸಲು 2017 ಮೇ. 7 ರಂದು ಮನೆಯೊಳಗೆ ಪ್ರವೇಶಿಸಿದ್ದರು. ಈ ವೇಳೆ ಹೂತು ಹಾಕಿದ್ದ ಗೋಡೆ ಬಳಿ ರಕ್ತಸಿಕ್ತವಾಗಿದ್ದ ಬಿದ್ದಿದ್ದ ಸೀರೆಯನ್ನು ಗಮನಿಸಿದ್ದರು. ಮನೆಯಲ್ಲಿ ವಾಸವಾಗಿದ್ದ ವೃದ್ಧೆಯೂ ಕಾಣದಿದ್ದಾಗ ಸಂಶಯಗೊಂಡು ಕೂಡಲೇ ಆಗಿನ ಇನ್​​ಸ್ಪೆಕ್ಟರ್ ಗಿರಿರಾಜ್ ಅವರ ಗಮನಕ್ಕೆ ತಂದಿದ್ದರು.

ಇದನ್ನೂ ಓದಿ:ಬೆಂಗಳೂರು: ವೃದ್ಧೆ ಕೊಲೆ ಪ್ರಕರಣ, 6 ಜನ ನೇಪಾಳಿಗರ ಬಂಧನ

ಸ್ಥಳಕ್ಕೆ ದೌಡಾಯಿಸಿ ಮನೆಯಲ್ಲಿ ಶೋಧಿಸಿದಾಗ ಸಂಜಯ್ ಬಿಟ್ಟುಹೋಗಿದ್ದ ಮೊಬೈಲ್ ಪತ್ತೆಯಾಗಿತ್ತು. ಕರೆ ವಿವರ ಪರಿಶೀಲಿಸಿದಾಗ ನಂದೀಶ್ ಮೊಬೈಲ್ ನಂಬರ್ ತಳಕುಹಾಕಿಕೊಂಡಿತ್ತು‌. ಈತನ ಜಾಡು ಹಿಡಿದು ಹೊರಟ ಪೊಲೀಸ್ ತಂಡ, ನಂದೀಶ್​ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವೃದ್ಧೆಯನ್ನ ಕೊಲೆ ಮಾಡಿ ಶವವನ್ನ ಗೋಡೆಯಲ್ಲಿ ಅವಿತಿಟ್ಟಿರುವ ಸಂಗತಿ ಬಯಲಾಗಿತ್ತು‌. ಆರೋಪಿ ಹೇಳಿಕೆ ಆಧರಿಸಿ ಗೋಡೆ ಕೊರೆದು ಪರಿಶೀಲಿಸಿದಾಗ ವೃದ್ಧೆಯ ಕಳೇಬರ ಪತ್ತೆಯಾಗಿತ್ತು.

ಗೋಡೆ ಕೊರೆದು ಶವ ಬಚ್ಚಿಟ್ಟ ತಾಯಿ ಮಗ

ಕೊಲ್ಲಾಪುರದಲ್ಲಿ ಹೊಟೇಲ್ ಸಪ್ಲೈಯರ್: ವೃದ್ಧೆಯ ಹತ್ಯೆ ನಂತರ ಬಂಧನ ಭೀತಿಯಿಂದ ತಾಯಿ-ಮಗ ಮಾಲೀಕರ ಬಳಿ‌ ಸಂಬಂಧಿಕರಿಗೆ ಹುಷಾರಿಲ್ಲ ಎಂದು ಮನೆ ತೊರೆದಿದ್ದರು. ಆರೋಪಿಗಳು‌ ಹುಟ್ಟೂರಾದ ಶಿವಮೊಗ್ಗದ ಸಾಗರಕ್ಕೆ ತೆರಳಿದ್ದರು. ನಂತರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ತಲೆಮರೆಸಿಕೊಂಡಿದ್ದರು. ಸ್ಥಳೀಯ ಹೊಟೇಲ್​​ವೊಂದರಲ್ಲಿ ಸಂಜಯ್ ಸಪ್ಲೈಯರ್ ಕೆಲಸ‌ ಹಾಗೂ ತಾಯಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದರು. ಇತ್ತ ಕೊಲೆ‌ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ಕಾಲಕ್ರಮೇಣ ಕೊಲೆ‌ ಪ್ರಕರಣದ ಕಡತ ದೂಳು ಸೇರಿತ್ತು. ಇತ್ತೀಚೆಗೆ ಇತ್ಯರ್ಥವಾಗದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದ್ದ ನಗರ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಕೆಂಗೇರಿ ಪೊಲೀಸರಿಗೆ ತಾಕೀತು ಮಾಡಿದ್ದರು. ಸವಾಲಾಗಿ ಸ್ವೀಕರಿಸಿ ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿದಾಗ ಸಿಕ್ಕ ಸುಳಿವಿನಿಂದ ಕೊಲ್ಲಾಪುರದಲ್ಲಿ ಅಡಗಿದ್ದ ತಾಯಿ-ಮಗನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Oct 7, 2022, 6:41 PM IST

ABOUT THE AUTHOR

...view details