ಕರ್ನಾಟಕ

karnataka

By

Published : Feb 7, 2021, 9:13 PM IST

ETV Bharat / state

ಇಲ್ಲಿ ಸೋತವರು, ಗೆದ್ದವರು ಎಲ್ಲರೂ ನಮ್ಮವರೇ: ನಲಪಾಡ್

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ಸ್ಥಾನ ಪಡೆದವರು ಹಾಗೂ ಸೋತವರು ಎಲ್ಲರೂ ನಮ್ಮವರೇ. ಇಲ್ಲಿ ಬೇರೆಯವರು ಯಾರೂ ಇಲ್ಲ. ರಕ್ಷಾ ರಾಮಯ್ಯ, ಮಂಜುನಾಥ್​ ಹಾಗೂ ಮಿಥುನ್ ಸೇರಿದಂತೆ ನಾವೆಲ್ಲರೂ ಅಣ್ಣ-ತಮ್ಮಂದಿರು. ನನಗೆ ಪಕ್ಷದ ಮೇಲೆ ತುಂಬಾ ನಂಬಿಕೆ ಇದೆ ಎಂದು ಮೊಹಮ್ಮದ್ ನಲಪಾಡ್ ಹ್ಯಾರಿಸ್ ಹೇಳಿದ್ದಾರೆ.

Mohammad Nalpad reaction about Youth Congress Election
ಮೊಹಮ್ಮದ್​ ನಲಪಾಡ್

ಬೆಂಗಳೂರು: ಕಾಂಗ್ರೆಸ್ ಪಕ್ಷ ನನಗೆ ತಾಯಿ ಇದ್ದಂತೆ. ಇಲ್ಲಿ ಸೋತವರು, ಗೆದ್ದವರು ಎಲ್ಲರೂ ನಮ್ಮವರೇ ಎಂದು ಮೊಹಮ್ಮದ್ ನಲಪಾಡ್ ಹ್ಯಾರಿಸ್ ಹೇಳಿದರು.

ಯುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದಿದ್ದರೂ ಅನರ್ಹಗೊಂಡಿರುವ ಹಿನ್ನೆಲೆ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿರುವ ಮೊಹಮ್ಮದ್​, ಮೂರು ದಿನಗಳ ನಂತರ ಇಂದು ದೆಹಲಿಯಿಂದ ನಗರಕ್ಕೆ ಆಗಮಿಸಿದರು. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿಯಾಗಲು ಸದಾಶಿವನಗರದ ನಿವಾಸಕ್ಕೆ ತೆರಳಿದರು.

ಮೊಹಮ್ಮದ್​ ನಲಪಾಡ್

ಈ ಸಂದರ್ಭದಲ್ಲಿ ಮಾತನಾಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರು ಹಾಗೂ ಸೋತವರು ಎಲ್ಲರೂ ನಮ್ಮವರೇ, ಇಲ್ಲಿ ಬೇರೆಯವರು ಯಾರೂ ಇಲ್ಲ. ರಕ್ಷಾ ರಾಮಯ್ಯ, ಮಂಜುನಾಥ್​ ಹಾಗೂ ಮಿಥುನ್ ಸೇರಿದಂತೆ ನಾವೆಲ್ಲರೂ ಅಣ್ಣ-ತಮ್ಮಂದಿರು. ನನಗೆ ಪಕ್ಷದ ಮೇಲೆ ತುಂಬಾ ನಂಬಿಕೆ ಇದೆ, ಒಳ್ಳೆಯದಾಗುತ್ತೆ ಎಂದರು.

ಓದಿ : ಗೆದ್ದರೂ ಗದ್ದುಗೆ ಸಿಗಲಿಲ್ಲ.. ನಲಪಾಡ್‌ಗೆ ಬೆಂಬಲಿಗರಿಂದ ಅಬ್ಬರದ ಸ್ವಾಗತ.. ಕೆಲಕಾಲ ಟ್ರಾಫಿಕ್‌ ಜಾಮ್..

ಪಕ್ಷದ ವ್ಯವಸ್ಥೆಯನ್ನು ನಾನು ನಂಬುತ್ತೇನೆ. ಯಾಕೆಂದರೆ ನನ್ನ ಮೇಲೆ ನಂಬಿಕೆಯಿಟ್ಟು 64 ಸಾವಿರ ಮಂದಿ ಮತ ನೀಡಿದ್ದಾರೆ. ಈ ವಿಚಾರವನ್ನು ನಾನು ಪಕ್ಷದ ಹೈಕಮಾಂಡ್ ಹಾಗೂ ರಾಜ್ಯ ನಾಯಕರಿಗೆ ವಿವರಿಸಿದ್ದೇನೆ. ನನ್ನ ಜೊತೆ ಗುರುತಿಸಿಕೊಂಡಿದ್ದವರು ಹಲವು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಆಯ್ಕೆಯಾಗಿದ್ದಾರೆ. ಅವರೆಲ್ಲರೂ ಸೇರಿ ಡಿ.ಕೆ.ಶಿವಕುಮಾರ್​ ಅವರನ್ನು ಅಭಿನಂದಿಸಲು ಬಯಸಿದ್ದರು. ಇದಕ್ಕಾಗಿ ಆಗಮಿಸಿದ್ದರು. ನಾನು ನನಗೋಸ್ಕರವೇ ಡಿಕೆಶಿ ನಿವಾಸಕ್ಕೆ ಆಗಮಿಸಿದ್ದೇನೆ ಎಂದು ಹೇಳಿದರು.

ತಮಗೆ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅಧ್ಯಕ್ಷನನ್ನಾಗಿ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಪಕ್ಷ ವಹಿಸುವ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುತ್ತೇನೆ. ಅದನ್ನು ಹೊರತುಪಡಿಸಿ ಬೇರೆ ಏನು ಮಾತನಾಡಲು ಇಷ್ಟಪಡುವುದಿಲ್ಲ. ಪಕ್ಷ ಯಾವುದೇ ಜವಾಬ್ದಾರಿ ಕೊಡಲಿ, ಪಾಲಿಸುತ್ತೇನೆ. ಅವರು ಏನೂ ಇಲ್ಲ, ಹಾಗೆ ಸುಮ್ಮನೆ ಕೆಲಸ ಮಾಡಿಕೊಂಡು ಹೋಗು ಎಂದರೂ ಅದಕ್ಕೂ ಬದ್ಧ ಎಂದರು.

ಹೈಕಮಾಂಡ್ ನಾಯಕರ ಭೇಟಿ ವಿಚಾರ ಮಾತನಾಡಿ, 64 ಸಾವಿರ ಮಂದಿ ನನಗೆ ಮತ ನೀಡಿದ್ದಾರೆ. ಇಷ್ಟೂ ಮಂದಿಯ ವಿಶ್ವಾಸ ನನ್ನ ಮೇಲಿದೆ. ಪಕ್ಷ ಕಟ್ಟುತ್ತೇನೆ ಎಂದು ಭರವಸೆ ನೀಡಿ, ನಾನು ಅವರ ಮುಂದೆ ಹೋಗಿದ್ದರಿಂದ ನನಗೆ ಮತ ನೀಡಿದ್ದಾರೆ. ಚುನಾವಣೆ ಆದ ಬಳಿಕ ನನ್ನನ್ನು ಅನರ್ಹಗೊಳಿಸುವುದು ಸರಿಯಾ ಎಂದು ಪ್ರಶ್ನಿಸಿದ್ದೇನೆ. ನನಗೆ ಜನರು ನೀಡಿರುವ ಮಾನ್ಯತೆಯನ್ನು ನೀವು ಪುರಸ್ಕರಿಸಬೇಕು. ನನ್ನ ಮೇಲಿನ ನಿರ್ಬಂಧ ತೆಗೆದು ಹಾಕಬೇಕು. ಅನರ್ಹತೆ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದೇನೆ. ಎಐಸಿಸಿ ಯುವ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಕಾಂಗ್ರೆಸ್ ಪಕ್ಷ ನನ್ನನ್ನ ತಕ್ಕ ಸ್ಥಾನದಲ್ಲಿ ಕೂರಿಸಲಿದೆ ಎಂಬ ವಿಶ್ವಾಸ ನನಗೆ ನೂರರಷ್ಟು ಇದೆ. ಯಾವುದೇ ಜವಾಬ್ದಾರಿ ಕೊಡದೇ ಇದ್ದರೂ ತೊಂದರೆ ಇಲ್ಲ. ನಾನು ಯುವಕರ ಮನಸ್ಸಿನಲ್ಲಿ ಇರುತ್ತೇನೆ. ಒಬ್ಬ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದರು.

ABOUT THE AUTHOR

...view details