ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಇಷ್ಟು ಸೌಲಭ್ಯವಿರುವ ಮತ್ತೊಂದು ಸರ್ಕಾರಿ ಶಾಲೆ ಇದೆಯೇ? ನೀವೇ ಹೇಳಿ.. - ಶಾಸಕ ರಾಮಲಿಂಗಾ ರೆಡ್ಡಿ

ಬೆಂಗಳೂರು ನಗರದಲ್ಲಿರುವ ಆಡುಗೋಡಿ ಮುನಿಚಿನ್ನಪ್ಪ ಸರ್ಕಾರಿ ಶಾಲೆ 50 ವರ್ಷಗಳ ಇತಿಹಾಸ ಹೊಂದಿದೆ. ಇಂದಿಗೂ ಮಾದರಿ ಶಾಲೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಸಚಿವ ಮಧು ಬಂಗಾರಪ್ಪರಿಂದ ಭೇಟಿ
ಸಚಿವ ಮಧು ಬಂಗಾರಪ್ಪರಿಂದ ಭೇಟಿ

By

Published : Jul 9, 2023, 8:19 AM IST

Updated : Jul 9, 2023, 9:57 AM IST

ಬೆಂಗಳೂರು: ಸರ್ಕಾರಿ ಶಾಲಾ ಕಟ್ಟಡಗಳು ಎಂದ ತಕ್ಷಣ ಮೊದಲು ಮನಸ್ಸಲ್ಲಿ ಮೂಡುವುದೇ ಮೂಲಭೂತ ಮೂಲಸೌಕರ್ಯಗಳ ಕೊರತೆಯ ಚಿತ್ರಣ. ಆದರೆ 1984ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ಆಡುಗೋಡಿ ಮುನಿಚಿನ್ನಪ್ಪ ಸರ್ಕಾರಿ ಶಾಲೆ ಈ ಅಭಿಪ್ರಾಯಕ್ಕೆ ಅಪವಾದ. ಸುಮಾರು 50 ವರ್ಷ ಹಳೆಯದಾದ ಶಾಲೆ 1ರಿಂದ 10ನೇ ತರಗತಿಯ ಮಕ್ಕಳಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಶಾಸಕ ರಾಮಲಿಂಗಾ ರೆಡ್ಡಿ ಅವರ ಸ್ಥಳೀಯ ಶಾಸಕರ ಕ್ಷೇತ್ರಾನುದಾನ, ಪಕ್ಕದಲ್ಲಿಯೇ ಇರುವ ಬಾಷ್ ಪ್ರಧಾನ ಕಚೇರಿ ಮತ್ತು ಹಲವು ದಾನಿಗಳ ಸಹಾಯದಿಂದ ರಾಜ್ಯದ ಮಾದರಿ ಸರ್ಕಾರಿ ಶಾಲೆಯಾಗಿ ಇದು ರೂಪುಗೊಂಡಿದೆ. ಅಷ್ಟೇಕೆ? ಯಾವುದೇ ಖಾಸಗಿ ಶಾಲೆಗೂ ಕಡಿಮೆಯಿಲ್ಲ ಎನ್ನುವಂತ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.

ಸರ್ಕಾರಿ ಶಾಲೆಯ ಕಟ್ಟಡ

ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್, ಪ್ರಯೋಗ ಶಾಲೆ, ಗ್ರಂಥಾಲಯಗಳು ಹಾಗು ವಿದ್ಯಾರ್ಥಿಗಳಿಗಾಗಿ ಹೆಲ್ತ್ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದೆ. ನುರಿತ ಶಿಕ್ಷಕರು ಟೆಕ್‌ಲ್ಯಾಬ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಓರ್ವ ನರ್ಸ್ ಚಿಕಿತ್ಸಾ ಕೇಂದ್ರದಲ್ಲಿದ್ದಾರೆ. ಮಕ್ಕಳು ಮತ್ತು ಚರ್ಮ ರೋಗ ತಜ್ಞರು ವಾರಕ್ಕೆರಡು ಬಾರಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸುತ್ತಾರೆ. ಹೊಸ ವಿನ್ಯಾಸದಲ್ಲಿ ಕಟ್ಟಡ ಮತ್ತು ಶಾಲಾ ಕೊಠಡಿಗಳನ್ನು ನಿರ್ಮಿಸಿ ವಿದ್ಯಾರ್ಥಿಗಳ ಯೋಚನೆಗಳಿಗೆ ಹೊಸ ಆಯಾಮ ನೀಡಲಾಗುತ್ತಿದೆ.

7 ರಿಂದ 8 ಕೋಟಿ ರೂ ವೆಚ್ಚದಲ್ಲಿ ಹೊಸ ಸೌಲಭ್ಯಗಳನ್ನು ಕಲ್ಪಿಸಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಶಾಲೆಗೆ ನಗರದಲ್ಲೇ ಅತಿ ದೊಡ್ಡದು ಎನ್ನಬಹುದಾದ ಆಟದ ಮೈದಾನವಿದೆ. ಅಚ್ಚುಕಟ್ಟು ಮತ್ತು ಸ್ವಚ್ಛ ಪ್ರಾರ್ಥನಾ ಮಂದಿರವಿದೆ. ರಾಜ್ಯದಲ್ಲಿ ಇಷ್ಟು ಸೌಲಭ್ಯಗಳುಳ್ಳ, ಸುಸಜ್ಜಿತ ಸರ್ಕಾರಿ ಶಾಲೆ ಕಾಣಸಿಗುವುದು ವಿರಳ.

ಸರ್ಕಾರಿ ಶಾಲೆಯ ಕಟ್ಟಡ

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳು ದಾಖಲೆ ಸಂಖ್ಯೆಯಲ್ಲಿ ಸೇರ್ಪಡೆಗೊಂಡಿದ್ದಾರೆ. 30 ಜನ ಕಾರ್ಮಿಕರು ಸ್ವಚ್ಚತೆಗಾಗಿಯೇ ಶಾಲೆಯಲ್ಲಿ ನಿಯೋಜನೆಗೊಂಡಿದ್ದಾರೆ. ಕುರ್ಚಿ, ಬೋರ್ಡು, ಡೆಸ್ಕ್ ಮತ್ತು ಬೆಂಚುಗಳು ಯಾವುದೇ ಅಂತಾರಾಷ್ಟೀಯ ಮಟ್ಟದ ಶಾಲೆಗೂ ಕಮ್ಮಿಯಿಲ್ಲ ಎನ್ನುವಂತಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಶಾಲೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾಲೆಯಲ್ಲಿ ಮುಖ್ಯ ಶಿಕ್ಷಕರು/ ಶಿಕ್ಷಕರಿಗೆ ಪ್ರತ್ಯೇಕ ಕೊಠಡಿಗಳಿವೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ 8ಕ್ಕೂ ಹೆಚ್ಚು ಶೌಚಾಲಯಗಳಿವೆ. ಗ್ರಂಥಾಲಯದಲ್ಲಿ 2,000ಕ್ಕೂ ಹೆಚ್ಚು ಪುಸ್ತಕಗಳಿವೆ. ಈ ಶಾಲೆ ಹೊಸೂರು ಮುಖ್ಯರಸ್ತೆ ಬಳಿ ಇರುವುದರಿಂದ ಮಕ್ಕಳಿಗೆ ಶಾಲೆ ತಲುಪಲು ಮತ್ತು ಮನೆಗೆ ತೆರಳಲು ಉತ್ತಮ ಸಾರಿಗೆ ಸಂಪರ್ಕ ಸಿಗುತ್ತಿದೆ. ಇದು ಪೋಷಕರಲ್ಲೂ ನಿರಾಳತೆ ಮೂಡಿಸಿದೆ.

ಶಾಲೆಗೆ ಸಚಿವರಾದ ಮಧು ಬಂಗಾರಪ್ಪ, ರಾಮಲಿಂಗಾ ರೆಡ್ಡಿ ಭೇಟಿ

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, "ಕಂಪ್ಯೂಟರ್ ಶಿಕ್ಷಕರು, ಅತಿಥಿ ಶಿಕ್ಷಕರು ಮತ್ತು ಮನೆಗೆಲಸದ ಸಿಬ್ಬಂದಿ ಸೇರಿದಂತೆ ಶಾಲೆಯಲ್ಲಿ ಕೆಲಸ ಮಾಡುವ ಸುಮಾರು 50 ಜನರಿಗೆ ಸ್ವಂತ ದುಡ್ಡಿನಿಂದ ಸಂಬಳ ನೀಡುತ್ತಿದ್ದೇನೆ. ಬಿಟಿಎಂ ಕ್ಷೇತ್ರದಲ್ಲಿರುವ ಈ ಶಾಲೆ ಮತ್ತು ಇತರ ಸರಕಾರಿ ಶಾಲಾ ಕಾಲೇಜುಗಳನ್ನು ಉತ್ತಮ ರೀತಿಯಲ್ಲಿ ನೋಡುಕೊಳ್ಳುವುದು ನನ್ನ ಕರ್ತವ್ಯ" ಎಂದರು.

ಇದನ್ನೂ ಓದಿ:ಬಿಡುವಿನ ವೇಳೆ ಶಿಕ್ಷಕರಿಂದಲೇ ಸರ್ಕಾರಿ ಶಾಲೆಗಳ ಸೌಂದರ್ಯೀಕರಣ: 'ನಲಿಕಲಿ ನಕ್ಷತ್ರ' ತಂಡದ ಸೇವೆಗೆ ಮೆಚ್ಚುಗೆ

Last Updated : Jul 9, 2023, 9:57 AM IST

ABOUT THE AUTHOR

...view details