ಕರ್ನಾಟಕ

karnataka

ETV Bharat / state

ಶಾಸಕರ ಸಭೆ ಕರೆಯಿರಿ: ಕಟೀಲ್​ಗೆ ಪತ್ರ ಬರೆದ ಶಾಸಕ ಸುನೀಲ್ ಕುಮಾರ್ - ನಳಿನ್ ಕುಮಾರ್ ಕಟೀಲ್​ಗೆ ಶಾಸಕ ಸುನೀಲ್ ಕುಮಾರ್ ಪತ್ರ

ನಿಗಮ, ಮಂಡಳಿಗಳ ನೇಮಕ, ಮಂತ್ರಿ ಮಂಡಲದ ರಚನೆ ಈ ಕುರಿತಂತೆ ಪಕ್ಷದ ಚೌಕಟ್ಟಿನಲ್ಲಿ ಅಭಿಪ್ರಾಯಗಳನ್ನು ನಮ್ಮಂತಹ ಶಾಸಕರು ಹಂಚಿಕೊಳ್ಳಬೇಕಾಗಿದೆ. ಹೀಗಾಗಿ ಶಾಸಕರ ಸಭೆ ಕರೆಯಿರಿ ಎಂದು ಶಾಸಕ ಸುನೀಲ್ ಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ಗೆ ಪತ್ರ ಬರೆದಿದ್ದಾರೆ.

mla sunil kumar writes letter to nalin kumar katil
ಶಾಸಕರ ಸಭೆ ಕರೆಯುವಂತೆ ಪತ್ರ

By

Published : Dec 2, 2020, 1:10 PM IST

ಬೆಂಗಳೂರು: ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು, ಸಂಪುಟ ವಿಸ್ತರಣೆ, ನಿಗಮ- ಮಂಡಳಿ ನೇಮಕ ಕುರಿತು ಶಾಸಕರು ಅಭಿಪ್ರಾಯ ಹಂಚಿಕೊಳ್ಳಬೇಕಿದೆ. ಹೀಗಾಗಿ ಕೂಡಲೇ ಶಾಸಕರ ಸಭೆ ಕರೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಪತ್ರ ಬರೆದಿದ್ದಾರೆ.

ಶಾಸಕರ ಸಭೆ ಕರೆಯುವಂತೆ ಪತ್ರ
ಕೆಲವು ದಿನಗಳಿಂದ ನಮ್ಮ ಮಂತ್ರಿಗಳು, ಕೆಲವು ಶಾಸಕ ಸ್ನೇಹಿತರು ಮತ್ತು ಪ್ರಮುಖರ ಬಹಿರಂಗ ಹೇಳಿಕೆಗಳು ಸಮಾಧಾನ ತರುವಂಥದ್ದಲ್ಲ. ಒಂದು ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಪಕ್ಷದ ಶಿಸ್ತಿಗೆ, ಸ್ವಯಂ ಅನುಶಾಸನಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಕಾರ್ಯಕರ್ತರ, ಹಿತೈಷಿಗಳ ಮನಸ್ಸಿಗೆ ಈ ರೀತಿಯ ಬಹಿರಂಗ ಹೇಳಿಕೆಗಳು ನೋವನ್ನು ಉಂಟು ಮಾಡುತ್ತಿದೆ. ಮೂಲ - ಹೊಸಬರು ಎನ್ನುವ ಭಾವನೆಯನ್ನು ವ್ಯಕ್ತ ಮಾಡದೇ ಪಕ್ಷದ ಶಿಸ್ತಿನ ಚೌಕಟ್ಟನ್ನು ಎಲ್ಲರಿಗೂ ಗಟ್ಟಿಯಾಗಿ ಹೇಳಲೇಬೇಕಾಗಿದೆ. ಅದನ್ನು ನೀವು ತಕ್ಷಣ ಮಾಡುವಿರಿ ಎಂದು ನಾನು ಭಾವಿಸುತ್ತೇನೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ನಿಗಮ ಮಂಡಳಿಗಳ ನೇಮಕ, ಮಂತ್ರಿ ಮಂಡಲದ ರಚನೆ ಈ ಕುರಿತಂತೆ ಪಕ್ಷದ ಚೌಕಟ್ಟಿನಲ್ಲಿ ಅಭಿಪ್ರಾಯಗಳನ್ನು ನಮ್ಮಂತಹ ಶಾಸಕರು ಹಂಚಿಕೊಳ್ಳಬೇಕಾಗಿದೆ. ಈ ಹಿನ್ನೆಲೆ ಎಲ್ಲ ಶಾಸಕರ ಅಭಿಪ್ರಾಯಗಳನ್ನು ರಾಜ್ಯಾಧ್ಯಕ್ಷರಾಗಿ ತಾವು ಆಲಿಸಬೇಕು. ಮೋದಿ ಮಾದರಿ ಆಡಳಿತ, ಸೈದ್ಧಾಂತಿಕ ನೆಲೆಗಟ್ಟಿನ ಆಡಳಿತ, ಅಂತ್ಯೋದಯದ ಕಾರ್ಯಕ್ರಮಗಳು, ಜನಮೆಚ್ಚುವ ಯೋಜನೆಗಳು ಈ ಎಲ್ಲವೂ ನಮ್ಮ ಆಡಳಿತದಲ್ಲಿ ಮೂಡಿಬರಬೇಕಾಗಿದೆ.
ಇಂದಿನ ಈ ಸರ್ಕಾರದ ಬೆಳವಣಿಗೆಗಳು, ನಿರ್ಧಾರಗಳು ಮತ್ತು ಪಕ್ಷದಲ್ಲಿನ ಚಟುವಟಿಕೆಗಳ ಕುರಿತಂತೆ ನಮ್ಮ ಭಾವನೆಗಳನ್ನು - ಸಲಹೆಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಬೇಕಾಗಿದೆ. ನಾವು ನೀಡುವ ಸಲಹೆಗಳು ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಮತ್ತು ಸರ್ಕಾರ ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಶಾಸಕರ ಸಭೆಯನ್ನು ಕರೆದು ತಮ್ಮ ಭಾವನೆಗಳನ್ನು ವ್ಯಕ್ತ ಮಾಡಿಕೊಳ್ಳಲು ತಾವು ಅನುವು ಮಾಡಿಕೊಡಬೇಕಾಗಿ ವಿನಂತಿಸುತ್ತೇನೆ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ನಮ್ಮ ಕಾರ್ಯ ವಿಸ್ತಾರದ ಕಲ್ಪನೆಯನ್ನು ಮುಂದಿಟ್ಟು ತಾವು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವುದು ಸಹಜವಾಗಿಯೇ ಎಲ್ಲಾ ಕಾರ್ಯಕರ್ತರನ್ನು ಸಕ್ರಿಯಗೊಳಿಸಿದೆ. ಎಲ್ಲರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಇತ್ತೀಚಿನ ಕೆಲವೊಂದು ವಿದ್ಯಮಾನಗಳ ಬೆಳವಣಿಗೆಯ ಹಿನ್ನೆಲೆಯಲ್ಲಿ ಪತ್ರ ಬರೆಯುವ ಅನಿವಾರ್ಯತೆ ಸೃಷ್ಟಿಯಾಯಿತು ಎಂದು ಪತ್ರ ಬರೆದಿದ್ದನ್ನು ಶಾಸಕ ಸುನೀಲ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ABOUT THE AUTHOR

...view details