ಕರ್ನಾಟಕ

karnataka

ETV Bharat / state

ಸಂಧ್ಯಾ ಸುರಕ್ಷಾ ಯೋಜನೆ ದುರ್ಬಳಕೆ : ಕಾಸು ಕೊಟ್ಟರೆ ಯುವಕರಿಗೂ ವೃದ್ಧಾಪ್ಯ ವೇತನ! - ಈಟಿವಿ ಭಾರತ ಕನ್ನಡ

ಸಂಧ್ಯಾ ಸುರಕ್ಷಾ ಯೋಜನೆ ದುರ್ಬಳಕೆ ಆರೋಪ - ಯುವಕರಿಗೆ ವೃದ್ಧಾಪ್ಯ ವೇತನ ವಿತರಣೆ - ರಾಜಾಜಿನಗರದಲ್ಲಿ ಪ್ರಕರಣ ದಾಖಲು

misuse-of-sandhya-suraksha-yojana-distribution-of-old-age-pension-to-youth
ಸಂಧ್ಯಾ ಸುರಕ್ಷಾ ಯೋಜನೆ ದುರ್ಬಳಕೆ : ಕಾಸು ಕೊಟ್ಟರೆ ಯುವಕರಿಗೂ ವೃದ್ದಾಪ್ಯ ವೇತನ

By

Published : Mar 5, 2023, 3:27 PM IST

ಬೆಂಗಳೂರು : ವಯೋವೃದ್ಧರಿಗಾಗಿ ಇರುವ ಸರ್ಕಾರದ ಸಂಧ್ಯಾಸುರಕ್ಷಾ ಯೋಜನೆಯನ್ನು ದುರ್ಬಳಕೆ ಮಾಡುತ್ತಿರುವ ಆರೋಪದಡಿ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯ ನಾಗರಿಕರಿಗೆ ಕೊಡುವ ವೃದ್ಧಾಪ್ಯ ವೇತನ ಸೌಲಭ್ಯವನ್ನು ರಾಜಾಜಿನಗರ, ಜಯನಗರದ ನಾಡ ಕಚೇರಿಗಳಲ್ಲಿ ದಲ್ಲಾಳಿಗಳು ಹಾಗೂ ಕೆಲ ಅಧಿಕಾರಿಗಳು ಕೈಜೊಡಿಸಿ ಹಣ ಕೊಟ್ಟವರಿಗೆ ಮಾಡಿಕೊಡುತ್ತಿರುವ ಆತಂಕಕಾರಿ ವಿಚಾರ ಬಯಲಾಗಿದೆ. ಈ ಬಗ್ಗೆ ರಮೇಶ್ ಎಂಬುವವರು ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ.

ವೃದ್ಧಾಪ್ಯ ವೇತನ ಪಡೆಯಲು ಮುಖ್ಯವಾಗಿ 60 ವರ್ಷ ವಯಸ್ಸಾಗಿರಬೇಕು. ಹಾಗೂ ಬಡತನ ರೇಖೆಗಿಂತ ಕೆಳಗಿರುವ ವೃದ್ಧರು ಮಾತ್ರ ಈ ಯೋಜನೆಗೆ ಅರ್ಹರು. ಇದಲ್ಲದೆ ಯೋಜನೆಯ ಲಾಭ ಪಡೆಯಲು ಆದಾಯ ಪ್ರಮಾಣಪತ್ರ ಹಾಗೂ ಆಧಾರ್ ಕಾರ್ಡ್ ಕಡ್ಡಾಯ. ಆದರೆ ಆಧಾರ್ ಕಾರ್ಡನ್ನು ಕಂಪ್ಯೂಟರ್ ಮೂಲಕ ತಿದ್ದುಪಡಿ ಮಾಡುತ್ತಿರುವ ವಂಚಕರು 60 ವರ್ಷ ವಯಸ್ಸಿನಂತೆ ಆಧಾರ್ ಕಾರ್ಡ್ ಮಾಡಿ ಕೊಡುತ್ತಿದ್ದಾರೆ. ಸೈಬರ್ ಅಪರೇಟರ್ ಗಳೇ ವೆಬ್‌ಸೈಟಿಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕಂಡ ಕಂಡವರು ಯೋಜನೆ ಲಾಭ ಪಡೆಯವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇಷ್ಟೆಲ್ಲವನ್ನೂ ನಕಲಿ ಮಾಡಿದರೂ ಸಹ ವೆಬ್‌ಸೈಟಿಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡುವಾಗ ಉಪ‌ತಹಶೀಲ್ದಾರ್ ಮಟ್ಟದ ಅಧಿಕಾರಿಯ ಡಿಜಿಟಲ್ ಬೆರಳಚ್ಚು ಅಗತ್ಯವಿದೆ. ಆದರೆ ಬೆರಳಚ್ಚು ಕೂಡಾ ಬಳಕೆ ಆಗುತ್ತಿರುವುದರಿಂದ ಉಪತಹಶೀಲ್ದಾರ್​ವೊಬ್ಬರ ಹೆಸರು ಕೂಡ ಕೇಳಿ ಬಂದಿದೆ.

ಸದ್ಯ ಈ ಕುರಿತು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ. ಈಗಾಗಲೇ ಸೈಬರ್ ಸೆಂಟರಿಗೆ ಸೇರಿದ ಓರ್ವನನ್ನ ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹುಬ್ಬಳ್ಳಿಯಲ್ಲಿ ಉದ್ಯಮಿ ಮನೆ ಮೇಲೆ ಸಿಸಿಬಿ ದಾಳಿ :ಹುಬ್ಬಳ್ಳಿಯಲ್ಲಿ ಉದ್ಯಮಿಯೊಬ್ಬರ ಮನೆ ಹಾಗೂ ಕಚೇರಿಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಬರೋಬ್ಬರಿ 3 ಕೋಟಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಸಿಸಿಬಿ ಡಿವೈಎಸ್ಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಶನಿವಾರ ದಾಳಿ ನಡೆಸಲಾಗಿತ್ತು.

ಹುಬ್ಬಳ್ಳಿ ಧಾರವಾಡ ಸಿಸಿಬಿ ಪೊಲೀಸರು ಪಡೆದ ಖಚಿತ ಮಾಹಿತಿಯೊಂದಿಗೆ ಉದ್ಯಮಿ ರಮೇಶ್ ಬೊಣಗೇರಿಯ ಭವಾನಿನಗರದ ನಿವಾಸದ ಮೇಲೆ ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ಮೂರು ಕೋಟಿ ರೂಪಾಯಿ ಪತ್ತೆಯಾಗಿತ್ತು. ಉದ್ಯಮಿ ರಮೇಶ್ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟದ ವ್ಯಾಪಾರಿಯಾಗಿದ್ದು, ಜೊತೆಗೆ ರಾಜ್ಯ ಸರ್ಕಾರದ ಕೃಷಿ ಇಲಾಖೆಗೂ ಸಹ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಉದ್ಯಮಿಯು ಅಕ್ರಮವಾಗಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿಟ್ಟುಕೊಂಡಿರುವ ಮಾಹಿತಿ ಪಡೆದ ಸಿಸಿಬಿ ಆರ್ಥಿಕ ಅಪರಾಧದ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯ ಸಮಯದಲ್ಲಿ ಪತ್ತೆಯಾದ ಹಣ ಮೂಲದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ :ಉದ್ಯಮಿ‌ ನಿವಾಸದ ಮೇಲೆ ಸಿಸಿಬಿ ದಾಳಿ: ಮೂರು ಕೋಟಿ ನಗದು ವಶ

ABOUT THE AUTHOR

...view details