ಬೆಂಗಳೂರು: ರಾತ್ರೋರಾತ್ರಿ ಲಕ್ಷಾಂತರ ರೂಪಾಯಿ ಮೌಲ್ಯದ ಕಾರಿಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಸುಕಿನಜಾವ 2.45ರ ವೇಳೆಗೆ ಘಟನೆ ನಡೆದಿದೆ. ಕಿಡಿಗೇಡಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುರುಬರಹಳ್ಳಿಯ ಕಾವೇರಿ ನಗರದಲ್ಲಿ ವಾಸವಾಗಿರುವ ಸುಬ್ರಮಣ್ಯ ಎಂಬುವರ ಕಾರಿನ ಜತೆ ಒಂದು ಆ್ಯಕ್ಟಿವಾ ಸ್ಕೂಟರ್ ಸಹ ಸುಟ್ಟು ಕರಕಲಾಗಿದೆ. ಈ ಸಂಬಂಧ ಸುಬ್ರಮಣ್ಯ ಸಹೋದರ ನೀಡಿದ ದೂರಿನ ಮೇರೆಗೆ ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆ ಮುಂದೆ ನಿಲ್ಲಿಸಿದ್ದ ಎಕ್ಸ್ ಯುವಿ ಕಾರಿಗೆ ಬೆಂಕಿ:ಕಾವೇರಿ ನಗರದ ಸುಬ್ರಮಣ್ಯ ಎಂಬುವರ ಮನೆ ಮುಂದೆ ಇಂದು ಮುಂಜಾನೆ ಹೆಲ್ಮೆಟ್ ಧರಿಸಿಕೊಂಡು ಬಂದ ಕಿಡಿಗೇಡಿಗಳಿಬ್ಬರು ನೀರಿನ ಬಾಟೆಲ್ನಲ್ಲಿ ತಂದಿದ್ದ ಪೆಟ್ರೋಲ್ನ್ನು ಕಾರಿನ ಮೇಲೆ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ. ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಕಾರು ಧಗಧಗನೆ ಹೊತ್ತಿ ಉರಿದಿದೆ. ಬೆಂಕಿಯ ಜ್ಚಾಲೆಗೆ ಪಕ್ಕದಲ್ಲಿದ್ದ ಬೈಕ್ ಸಹ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.
ಸುಬ್ರಮಣ್ಯ ಅವರು ಹೊರ ರಾಜ್ಯದಲ್ಲಿ ವಾಸವಾಗಿದ್ದರೆ. ಅವರ ಕುಟುಂಬ ಕಾವೇರಿ ನಗರದಲ್ಲಿ ವಾಸವಿದೆ. ಕಳೆದ ಮೂರು ತಿಂಗಳ ಹಿಂದೆ ಬೈಕ್ ಸಹ ಇದೇ ರೀತಿಯಲ್ಲಿ ಸುಟ್ಟಿರುವ ಘಟನೆ ನಡೆದಿತ್ತು. ಆದರೆ ಕುಟುಂಬಸ್ಥರು ಶಾರ್ಟ್ ಸಕ್ಯೂರ್ಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಭಾವಿಸಿದ್ದರು. ಆದರೆ ಕಿಡಿಗೇಡಿಗಳು ರಾತ್ರೋರಾತ್ರಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಯಾವ ಕಾರಣಕ್ಕಾಗಿ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂಬುದರ ಬಗ್ಗೆ ಗೊತ್ತಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಘಟನೆ ಬಗ್ಗೆ ಸುಬ್ರಹ್ಮಣ್ಯ ಅವರ ಸ್ನೇಹಿತ ಮಾರುತಿ ಎಂಬುವರು ಮಾತನಾಡಿ, ನಿನ್ನೆ ರಾತ್ರಿ ಇಬ್ಬರು ಬೈಕ್ ನಲ್ಲಿ ಬಂದಿದ್ದರು. ಬೈಕ್ನ್ನು ಪಕ್ಕದ ರಸ್ತೆಯಲ್ಲಿ ನಿಲ್ಲಿಸಿ ನಡೆದುಕೊಂಡು ಬಂದಿದ್ದಾರೆ. ಇಬ್ಬರಲ್ಲಿ ಒಬ್ಬನಿಗೆ ವಯಸ್ಸಾಗಿದೆ. ಇಬ್ಬರಲ್ಲಿ ಒಬ್ಬ ಕೊಟ್ಟ ಸೂಚನೆಯಂತೆ ಕಾರಿಗೆ ಬೆಂಕಿ ಹಾಕಿದ್ದಾರೆ. ಮೂರು ತಿಂಗಳ ಹಿಂದೆ ಬೈಕ್ ಸಹ ಸುಟ್ಟಿದ್ದು ಈಗ ಕಾರಿಗೆ ಬೆಂಕಿ ಹಾಕಿದ್ದಾರೆ. ಅವರು ಯಾರೂ ಅಂತಾ ಗೊತ್ತಿಲ್ಲ. ಈಗ ಪೊಲೀಸರಿಗೆ ದೂರು ನೀಡಲಾಗಿದೆ ಎಂದ ಮಾಹಿತಿ ನೀಡಿದ್ದಾರೆ.