ಕರ್ನಾಟಕ

karnataka

By

Published : Nov 27, 2020, 8:30 PM IST

ETV Bharat / state

ಮೂವರು ಎಂಎಲ್​ಸಿಗಳಿಗೆ ಸಚಿವ ಸ್ಥಾನ ವಿಚಾರ: ನ. 30ಕ್ಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್​

ವಕೀಲ ಎ.ಎಸ್.ಹರೀಶ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ministerial-position-on-three-mlc-news
ಮೂವರು ಎಂಎಲ್​ಸಿಗಳಿಗೆ ಸಚಿವ ಸ್ಥಾನ ವಿಚಾರ

ಬೆಂಗಳೂರು:ಶಾಸಕ ಸ್ಥಾನದಿಂದ ಅನರ್ಹಗೊಂಡು ಪರಿಷತ್ತಿಗೆ ನೇಮಕಗೊಂಡಿರುವ ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ನೀಡದಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಿದೆ.

ಈ ಮೂವರಿಗೂ ಸಚಿವ ಸ್ಥಾನ ನೀಡಬಾರದು ಎಂದು ಕೋರಿ ವಕೀಲ ಎ.ಎಸ್.ಹರೀಶ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಹಾಗೂ ಎಂಎಲ್​​ಸಿಗಳ ಪರ ವಾದಿಸಿದ ಹಿರಿಯ ವಕೀಲರಾದ ಉದಯ್ ಹೊಳ್ಳ ಮತ್ತು ಅಶೋಕ್ ಹಾರನಹಳ್ಳಿ, ಪ್ರತಿವಾದಿಗಳಾದ ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಿದರೆ ಯಾವುದೇ ನಿಯಮಗಳು ಉಲ್ಲಂಘನೆಯಾಗುವುದಿಲ್ಲ. ಶಾಸಕರನ್ನು ಅನರ್ಹ ಮಾಡಿದ್ದ ಸ್ಪೀಕರ್ ಆದೇಶವನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಅಲ್ಲದೆ ತೀರ್ಪಿನಲ್ಲಿ ಎಲ್ಲಿಯೂ ಅವರಿಗೆ ಸಚಿವ ಸ್ಥಾನ ನೀಡದಂತೆ ತಿಳಿಸಿಲ್ಲ ಎಂದು ವಿವರಿಸಿದರು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಸುಪ್ರೀಂ ಕೋರ್ಟ್ ಸ್ಪೀಕರ್ ಆದೇಶ ರದ್ದುಗೊಳಿಸುವ ಸಂದರ್ಭದಲ್ಲಿ ಶಾಸಕರು ಪಕ್ಷಾಂತರ ಮಾಡುವ ಹಾಗೂ ರಾಜಕಾರಣಿಗಳ ಭ್ರಷ್ಟಾಚಾರಗಳಿಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದೆ. ಹಾಗೆಯೇ ಅನರ್ಹ ಶಾಸಕರು ಚುನಾವಣೆಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗಬೇಕೆಂದು ಸ್ಪಷ್ಟಪಡಿಸಿದೆ.

ಚುನಾವಣೆಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗಲು ವಿಫಲವಾಗಿರುವ ಈ ಮೂವರು ಹಿಂಬಾಗಿಲ ಮೂಲಕ ಆಯ್ಕೆಯಾಗಿದ್ದಾರೆ. ವಿಶ್ವನಾಥ್ ಅವರಂತೂ ನಾಮ ನಿರ್ದೇಶನವಾಗಿರುವುದರಿಂದ ಅವರ ಅನರ್ಹತೆ ಇಂದಿಗೂ ಮುಂದುವರೆದಿದೆ. ಹೀಗಾಗಿ ಮೂವರು ಎಂಎಲ್​ಸಿಗಳಿಗೆ ಸಚಿವ ಸ್ಥಾನ ನೀಡದಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ವಾದ ಪ್ರತಿವಾದ ಆಲಿಸಿದ ಪೀಠ, ಉಕ್ತಲೇಖನ ಆರಂಭಿಸಿತಾದರೂ ಸಮಯಾವಕಾಶದ ಕೊರತೆ ಇದ್ದುದರಿಂದ ಆದೇಶವನ್ನು ನವೆಂಬರ್ 30ರ ಮಧ್ಯಾಹ್ನ 12.45ಕ್ಕೆ ನಿಗದಿಪಡಿಸಿತು.

ಇದನ್ನೂ ಓದಿ:ಈ ಮೂವರು ಒಂದೊಮ್ಮೆ ಸಚಿವರಾದರೆ, ಕೋರ್ಟ್ ಅಂತಿಮ ತೀರ್ಪಿಗೆ ಒಳಪಡಲಿದ್ದಾರೆ: ಹೈಕೋರ್ಟ್​​​ ಮಧ್ಯಂತರ ಆದೇಶ

ABOUT THE AUTHOR

...view details