ಕರ್ನಾಟಕ

karnataka

By

Published : Aug 28, 2020, 10:34 PM IST

ETV Bharat / state

ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಸಹಾಯ ಕುರಿತು ಚಿಂತನೆ: ಸುರೇಶ್ ಕುಮಾರ್

ಖಾಸಗಿ ಶಾಲೆಗಳ ಶಿಕ್ಷಕರು ಕೊರೊನಾ ಲಾಕ್​ಡೌನ್​ನಿಂದಾಗಿ ತರಕಾರಿ ಮಾರಾಟ, ನರೇಗಾದಂತಹ ಕೆಲಸಗಳಿಗೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದ್ದು,ಅವರಿಗಾಗಿ ಸಹಾಯ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

minister suresh kumar pressmeet
ಸಚಿವ ಸುರೇಶ್ ಕುಮಾರ್

ಬೆಂಗಳೂರು:ಕೊರೊನಾ ಹಿನ್ನೆಲೆ ಶಾಲೆಗಳು ಸಕಾಲಕ್ಕೆ ಬಾಗಿಲು ತೆರೆಯದೇ ಇರುವುದರಿಂದ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಅವರಿಗಾಗಿ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಲು ಇಲಾಖೆ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಸಚಿವ ಸುರೇಶ್ ಕುಮಾರ್ ಮಾಹಿತಿ

ನಗರದ ಶಿಕ್ಷಕರ ಸದನದಲ್ಲಿ ಇಲಾಖೆಯ ಸಹಾಯವಾಣಿ-ಶಿಕ್ಷಣವಾಣಿ ಮತ್ತು ಶಿಕ್ಷಣ ಸಚಿವರ ಡ್ಯಾಷ್‍ಬೋರ್ಡ್-ಪರಿವರ್ತನಾ ಕೇಂದ್ರಗಳಿಗೆ ಚಾಲನೆ ನೀಡಿದರು. ನಂತರ ಕರೆ ಕೇಂದ್ರದಲ್ಲಿ ಶಿಕ್ಷಕರೊಬ್ಬರ ಕರೆ ಸ್ವೀಕರಿಸಿ ಮಾತನಾಡಿದ ಅವರು, ಇಂತಹ ಶಾಲೆಗಳ ಅನೇಕ ಶಿಕ್ಷಕರು ತರಕಾರಿ ಮಾರಾಟ, ನರೇಗಾದಂತಹ ಕೆಲಸಗಳಿಗೆ ಹೋಗುವಂತಹ ಸ್ಥಿತಿ ಕಂಡು ನಿಜಕ್ಕೂ ಬೇಸರವಾಗಿದೆ. ಅವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕೆಂಬ ಕುರಿತು ಈಗಾಗಲೇ ಅಂತಹ ಶಿಕ್ಷಕರು ಮತ್ತು ಆ ಶಾಲೆಗಳ ಸಿಬ್ಬಂದಿಯ ಅಂಕಿ-ಸಂಖ್ಯೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು. ಆದರೆ ಅವರ ಸಂಖ್ಯೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿರುವುದರಿಂದ ಆ ಬೃಹತ್ ಪ್ರಮಾಣದ ಸಂಖ್ಯೆಗೆ ಸಹಾಯ ಮಾಡುವುದರತ್ತ ಎಲ್ಲ ಆಯಾಮಗಳಿಂದಲೂ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.

'ಶಾಲೆ ಆರಂಭ ಯಾವಾಗ'?
ಶಾಲೆಗಳ ಆರಂಭದ ಕುರಿತು ಇನ್ನೂ ಯಾವುದೇ ಸೂಚನೆಗಳಿಲ್ಲ. ಈ ಮಾಸಾಂತ್ಯದ ವೇಳೆಗೆ ಶಾಲೆಗಳು ಯಾವಾಗ ಆರಂಭವಾಗಲಿವೆ ಎಂಬುದಕ್ಕೆ ಒಂದು ಸ್ಪಷ್ಟ ರೂಪ ದೊರೆಯಬಹುದಾಗಿದೆ. ಆ ತನಕವೂ ನಾವು ಶಾಲೆಗಳನ್ನು ಆರಂಭಿಸಲು ಆತುರಪಡುವುದಿಲ್ಲ ಎಂದು ಹೇಳಿದರು.

ಇನ್ನು 'ಶಿಕ್ಷಕ ಮಿತ್ರ' ಆ್ಯಪ್ ಕುರಿತು ವಿವರಿಸಿದ ಸಚಿವರು, ಪ್ರತಿ ಹಂತದಲ್ಲೂ ಶಿಕ್ಷಕರ ಮೊಬೈಲ್‍ಗೆ ಪ್ರತಿ ಹಂತದ ಕ್ರಮಗಳ ಸಂದೇಶಗಳ ಲಭ್ಯವಾಗಲಿದೆ. ಮುಂದೆ ಇದೇ ಶಿಕ್ಷಕ ಮಿತ್ರ- ಆ್ಯಪ್​​ನಲ್ಲಿ ಪ್ರತಿಯೊಬ್ಬ ಶಿಕ್ಷಕರ ಸರ್ವೇ ಸೇವಾ ವಿವರ ಅಳವಡಿಕೆ ಮಾಡಲಾಗಿದೆ. ಕಳೆದ ಸಾಲಿನಲ್ಲಿ ಏನು ಭರವಸೆ ನೀಡಿದ್ದೇನೋ ಅದರಂತೆ ವರ್ಗಾವಣಾ ಪ್ರಕ್ರಿಯೆ ನಡೆಯಲಿದೆ. ಕಡ್ಡಾಯ ಮತ್ತು ಹೆಚ್ಚುವರಿ ಶಿಕ್ಷಕರಿಗೆ ಮೊದಲ ಆದ್ಯತೆ ದೊರೆಯಲಿದೆ. 50 ವರ್ಷ ದಾಟಿದವರಿಗೆ ವರ್ಗಾವಣೆಯಿಂದ ವಿನಾಯ್ತಿ ಸೇರಿದಂತೆ ಶಿಕ್ಷಕ ಸ್ನೇಹಿ ವ್ಯವಸ್ಥೆಯಾಗಿದೆ ಎಂದರು.

ಶಿಕ್ಷಕ ಮಿತ್ರ ಆ್ಯಪ್​ನಲ್ಲಿ ಈಗಾಗಲೇ 2.50 ಲಕ್ಷ ಶಿಕ್ಷಕರ ಮಾಹಿತಿ ಅಪ್‍ಲೋಡ್ ಆಗಿದೆ. ಇದರಿಂದ ಇಡೀ ಪ್ರಕ್ರಿಯೆಗೆ ಪಾರದರ್ಶಕತೆ ಲಭ್ಯವಾಗಿದೆ. ತಂತ್ರಜ್ಞಾನಾಧಾರಿತ ವ್ಯವಸ್ಥೆಗೆ ಇದೇ ಮೊದಲ ಬಾರಿಗೆ ಇಲಾಖೆ ಸಜ್ಜುಗೊಂಡಿದೆ. ಶಿಕ್ಷಕರು ತಾವಿರುವ ಸ್ಥಳದಿಂದಲೇ ಶಿಕ್ಷಕ ಮಿತ್ರ ಆ್ಯಪ್​ ಡೌನ್‍ಲೋಡ್ ಮಾಡಿಕೊಂಡು ವರ್ಗಾವಣೆಗೆ ಅರ್ಜಿ ಸಲ್ಲಿಸುವ ತಾಂತ್ರಿಕ ಸೌಲಭ್ಯ. ಶಿಕ್ಷಕರಿಗೆ ಇಲಾಖೆಯ ಸೇವೆಗಳನ್ನು ಇಂತಿಷ್ಟೇ ದಿನಗಳೊಳಗೆ ನೀಡಬೇಕೆಂದು ಒಂದೊಂದು ಸೇವೆಗೆ ಪ್ರತ್ಯೇಕ ದಿನಗಳನ್ನು ನಿಗದಿಪಡಿಸಲಿದ್ದು, ಆ ದಿನಗಳೊಳಗೆ ಸೇವೆಗಳು ದೊರೆಯಲಿವೆ ಎಂದರು.

ಶಿಕ್ಷಣವಾಣಿ- ಸಹಾಯವಾಣಿ: ಪರಿಹಾರಕ್ಕೆ ‘ಶಿಕ್ಷಣವಾಣಿ’-ಸಹಾಯವಾಣಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಸಹಾಯವಾಣಿ ಅಲ್ಲದೇ ವಾಟ್ಸ್ ಆಪ್ ಸೌಲಭ್ಯ. ಪ್ರತ್ಯೇಕ ಫ್ರೀ-ಟೋಲ್ ಸಂಖ್ಯೆಯ ಲಭ್ಯತೆ. ಮಾಹಿತಿ ಅರ್ಜಿದಾರರ ಮೊಬೈಲ್‍ಗೆ ಲಭ್ಯವಾಗಲಿದೆ. ಇದರ ವ್ಯವಸ್ಥಿತ ನಿರ್ವಹಣೆಯನ್ನು ನಾನೇ ಖುದ್ದಾಗಿ ನಿರಂತರವಾಗಿ ಪರಾಮರ್ಶಿಸಲಿದ್ದೇನೆ ಎಂದು ಸಚಿವ ಸುರೇಶ್​​ ಕುಮಾರ್​​ ತಿಳಿಸಿದ್ರು.

ABOUT THE AUTHOR

...view details