ಬೆಂಗಳೂರು: ನೂತನ ಸಚಿವ ಎಸ್.ಟಿ.ಸೋಮಶೇಖರ್ ಇಂದು ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ ರವಿಶಂಕರ್ ಗುರೂಜಿ ಆಶೀರ್ವಾದ ಪಡೆದರು. ಸಚಿವ ಎಸ್.ಟಿ ಸೋಮಶೇಖರ್ ಅವರಿಗೆ ಪೆನ್ ನೀಡಿ ರವಿಶಂಕರ ಗುರೂಜಿ ಆಶೀರ್ವದಿಸಿದರು.
ಈ ಪೆನ್ ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೇ ರೀತಿಯ ಪೆನ್ ನೀಡಿದ್ದೆ. ಅವರು ಇಟ್ಟುಕೊಂಡಿದ್ದಾರೆ. ನೀವು ಇಟ್ಟುಕೊಳ್ಳಿ, ಒಳ್ಳೆಯದಾಗುತ್ತದೆ ಎಂದು ಹೇಳಿದರು.
ರವಿಶಂಕರ್ ಗುರೂಜಿ ಭೇಟಿಯಾದ ಸಚಿವ ಸೋಮಶೇಖರ್ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಎಸ್.ಟಿ.ಸೋಮಶೇಖರ್, ಸೋಮವಾರ ನೂತನ ಸಚಿವರಿಗೆ ಖಾತೆ ಹಂಚುತ್ತೇವೆ ಎಂದು ಸಿಎಂ ಯಡಿಯೂರಪ್ಪನವರು ಹೇಳಿದ್ದಾರೆ. ಸಿಎಂ ಜೊತೆ ಇಂದು ಬೆಳಗ್ಗೆ ಚರ್ಚಿಸಿದ್ದೇನೆ. ಖಾತೆ ಬಗ್ಗೆ ಅವರಿಗೆ ಯಾವುದೇ ಒತ್ತಡ ಹೇರಿಲ್ಲ. ಆಸಕ್ತಿಯ ಕ್ಷೇತ್ರದ ಖಾತೆ ಕೊಟ್ಟರೆ ಅನುಕೂಲ ಅಂತ ಕೇಳಿದ್ದೇನೆ ಅಷ್ಟೇ ಎಂದು ತಿಳಿಸಿದರು.
ಇಂಧನ ಖಾತೆಗೆ ಭಾರೀ ಪೈಪೋಟಿ ಅನ್ನುವುದು ಸರಿಯಲ್ಲ. ನನಗೆ ಆಸಕ್ತಿ ಕ್ಷೇತ್ರ ಅನ್ನುವ ಕಾರಣಕ್ಕಾಗಿ ನಾನು ಬೆಂಗಳೂರು ಅಭಿವೃದ್ಧಿ ಖಾತೆ ಕೇಳಿದ್ದೆ. ಖಾತೆ ಮುಖ್ಯ ಅಲ್ಲ, ನಾವು ಹೇಗೆ ಕೆಲಸ ಮಾಡುತ್ತೇವೆ ಅನ್ನೋದು ಮುಖ್ಯ ಎಂದರು.