ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಿಂದ ವಿನೂತನ ಯೋಜನೆಯಾಗಿ "ಇಲಾಖೆ ನಡೆ ಹಳ್ಳಿ ಕಡೆ" ಅಭಿಯಾನವನ್ನು ಸಚಿವ ಬಿ.ಶ್ರೀರಾಮುಲು ಘೋಷಣೆ ಮಾಡಿದ್ದಾರೆ.
ನಗರದ ಕ್ಯಾಪಿಟಲ್ ಹೋಟೆಲ್ನಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನೂತನ ವರ್ಷದ-2021ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ರಾಮುಲು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡದ ನಿರ್ದೇಶನಾಲಯದ ಮುಖ್ಯಸ್ಥರು ಇನ್ನು ಮುಂದೆ ಹಳ್ಳಿಗಳಲ್ಲಿ ಕೆಲಸ ಮಾಡಬೇಕು. ಹಂತ ಹಂತವಾಗಿ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಇದನ್ನು ವಿಸ್ತರಿಸಲಾಗುತ್ತದೆ. ತಿಂಗಳಲ್ಲಿ ಎರಡು ದಿನ ಹಾಡಿಗಳಲ್ಲಿ, ಹಳ್ಳಿಗಳಲ್ಲಿ, ಪರಿಶಿಷ್ಟ ಜಾತಿ, ಪಂಗಡಗಳ ಜನರು ವಾಸಿಸುವ ಪ್ರದೇಶಗಳಲ್ಲಿ, ಪಂಚಾಯ್ತಿಗಳಲ್ಲಿ ಕಡ್ಡಾಯವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ನಾನು ಇನ್ನು ಮುಂದೆ ಹಳ್ಳಿಗಳಿಂದ ಆಡಳಿತ ನಡೆಸುತ್ತೇನೆ
ಸರ್ಕಾರ ಎಷ್ಟೇ ಯೋಜನೆಗಳನ್ನ ತಂದರೂ ಸಹ ಅದು ಜನ ಸಾಮಾನ್ಯರಿಗೆ ತಲುಪಿದಾಗ ಮಾತ್ರ ಸಾರ್ಥಕವಾಗುತ್ತದೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಹಳ್ಳಿಗಳ ಏಳಿಗೆಯ ಅಭಿವೃದ್ಧಿಯ ದೃಷ್ಠಿಯಿಂದಾಗಿ ನಾನು ಇನ್ನು ಮುಂದೆ ಹಳ್ಳಿಗಳಿಂದಲೇ ಆಡಳಿತ ನಡೆಸುತ್ತೇನೆ ಎಂದು ಶ್ರೀರಾಮುಲು ಭರವಸೆ ವ್ಯಕ್ತಪಡಿಸಿದರು.
ರಾಜ್ಯ ಗ್ರಾಮೀಣ ಭಾಗಗಳಲ್ಲಿ ನಮ್ಮ ಭವನಗಳು ಇವೆ. ರಸ್ತೆಗಳು ನಿರ್ಮಾಣವಾಗುತ್ತಿವೆ. ವಸತಿ ನಿಲಯ, ವಸತಿ ಶಾಲೆಗಳಿವೆ, ಅವುಗಳಿಗೆಲ್ಲಾ ಮೂಲಭೂತ ಸೌಕರ್ಯದ ಕೊರತೆ ಇದೆ. ಇದನ್ನೆಲ್ಲಾ ತಿಳಿಯುವುದು ಹಾಗೂ ಆಡಳಿತವನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯುವುದು ಈ ಯೋಜನೆಯ ಉದ್ದೇಶ. ಅತೀ ಹಿಂದುಳಿದ ಭಾಗಗಳಲ್ಲಿ ದೀನ ದಲಿತರ, ಬಡವರ ಸಮಸ್ಯೆಗಳು ಇನ್ನು ಹಾಗೆ ಇವೆ. ಅವುಗಳನ್ನು ಅಲ್ಲಿಯೇ ಹೋಗಿ ಬಗೆಹರಿಸುವ ನಿಟ್ಟಿನಲ್ಲಿ "ಇಲಾಖೆ ನಡೆ ಹಳ್ಳಿ ಕಡೆ" ಎಂದು ಆರಂಭಿಸುತ್ತಿದ್ದೇನೆ ಶ್ರೀರಾಮಲು ಸ್ಪಷ್ಟನೆ ನೀಡಿದರು.