ಕರ್ನಾಟಕ

karnataka

By

Published : Mar 17, 2023, 8:24 PM IST

ETV Bharat / state

ಮುಖ್ಯಮಂತ್ರಿ ಬೊಮ್ಮಾಯಿ‌ ನಿವಾಸಕ್ಕೆ ಸಚಿವ ಸೋಮಣ್ಣ ಭೇಟಿ, ಕೆಲಕಾಲ ಸಮಾಲೋಚನೆ

ವಸತಿ ಸಚಿವ ಸೋಮಣ್ಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಖಾಸಗಿ ನಿವಾಸಕ್ಕೆ ಭೇಟಿ ಭೇಟಿ ನೀಡಿ ಕೆಲ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.

minister-somanna-meets-cm-basavaraj-bommai
ಮುಖ್ಯಮಂತ್ರಿ ಬೊಮ್ಮಾಯಿ‌ ನಿವಾಸಕ್ಕೆ ಸಚಿವ ಸೋಮಣ್ಣ ಭೇಟಿ, ಕೆಲಕಾಲ ಸಮಾಲೋಚನೆ

ಬೆಂಗಳೂರು:ವಸತಿ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಭೇಟಿ ಮಾಡಿ ಮಾತುಕತೆ ನಡೆಸಿದರು. ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದ ಕುರಿತು ಚರ್ಚಿಸಿದರು. ಇದೇ ವೇಳೆ, ಹೈಕಮಾಂಡ್ ಜೊತೆಗಿನ ಮಾತುಕತೆ ಬಗ್ಗೆಯೂ ಸಿಎಂ ವಿವರಣೆ ಪಡೆದುಕೊಂಡರು‌.

ಬೇಸರಗೊಂಡು ಹೈಕಮಾಂಡ್ ಜೊತೆಗಿನ ಮಾತುಕತೆ ಬಳಿಕ ಸಮಾಧಾನಗೊಂಡಿರುವ ವಸತಿ ಸಚಿವ ಸೋಮಣ್ಣ ಆರ್.ಟಿ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಖಾಸಗಿ ನಿವಾಸಕ್ಕೆ ಭೇಟಿ ನೀಡಿದರು. ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ಸಿಎಂ ಜೊತೆ ಮಾತುಕತೆ ನಡೆಸಿದರು.

ದೆಹಲಿಯಲ್ಲಿ ವರಿಷ್ಠರ ಜೊತೆ ನಡೆದ ಮಾತುಕತೆ ಸೇರಿದಂತೆ ರಾಜ್ಯ ರಾಜಕೀಯ ವಿಚಾರದ ಕುರಿತು ಸಮಾಲೋಚನೆ ನಡೆಸಿದರು. ನಂತರ ನಾಳೆ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಾದಪ್ಪನ 108 ಅಡಿ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದ ಸಿದ್ದತೆ ಕುರಿತು ಮಾತುಕತೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸೋಮಣ್ಣ ಉಸ್ತುವಾರಿಯಲ್ಲಿಯೇ ಕಾರ್ಯಕ್ರಮ ನಡೆಸಲು ಸಿಎಂ ಸೂಚಿಸಿದ್ದು, ಅದರಂತೆ ಸೋಮಣ್ಣ ಅವರೊಂದಿಗೆ ಕಾರ್ಯಕ್ರಮದ ಕುರಿತು ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ:ಬಿಎಸ್​ವೈ ನಮ್ಮ ಪ್ರಶ್ನಾತೀತ ನಾಯಕ, ಗೊಂದಲ ಪರಿಹಾರವಾಗಿದೆ: ಸಚಿವ ಸೋಮಣ್ಣ

ಇತ್ತೀಚೆಗೆ ಪಕ್ಷದ ವಿಜಯ ಸಂಕಲ್ಪ ಯಾತ್ರೆಯಿಂದ ದೂರ ಉಳಿದು ಅಸಮಾಧಾನ ತೋರಿದ್ದ ಸೋಮಣ್ಣ ಇತ್ತೀಚೆಗಷ್ಟೆ ಸುದ್ದಿಗೋಷ್ಠಿ ನಡೆಸಿ ಚಾಮರಾಜನಗರದ ಮಾದಪ್ಪನ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಹೋಗುತ್ತೇನೆ ಎಂದಿದ್ದರು. ಮತ್ತೊಮ್ಮೆ ಸೋಮಣ್ಣ ಗೈರಾಗಿ ಕಾರ್ಯಕರ್ತರು, ಜನತೆಗೆ ಬೇರೆ ಸಂದೇಶ ಹೋಗಬಾರದು ಎಂದು ಖುದ್ದಾಗಿ ಮುಖ್ಯಮಂತ್ರಿಗಳೇ ಸೋಮಣ್ಣ ಅವರನ್ನು ನಿವಾಸಕ್ಕೆ ಕರೆಸಿಕೊಂಡು ನಾಳಿನ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಬಿಎಸ್​​​​ವೈ- ಸೋಮಣ್ಣ ಮುನಿಸು ಶಮನಕ್ಕೆ ಮಾದಪ್ಪನ ಬೆಟ್ಟದಲ್ಲಿ ವೇದಿಕೆ ಸಿದ್ಧ!

ಮಾಜಿ ಸಿಎಂ ಯಡಿಯೂರಪ್ಪ ಅವರನ್ನೂ ಕಾರ್ಯಕ್ರಮಕ್ಕೆ ಕರೆಸಲು ಸಿಎಂ ಬೊಮ್ಮಾಯಿ‌ ಪ್ರಯತ್ನ ನಡೆಸಿದ್ದಾರೆ. ಒಂದೇ ವೇದಿಕೆಯಲ್ಲಿ ಯಡಿಯೂರಪ್ಪ ಮತ್ತು ಸೋಮಣ್ಣ ಅವರನ್ನು ಸೇರಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಸೋಮಣ್ಣ ಬಗ್ಗೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪ ಬಗ್ಗೆ ಸೋಮಣ್ಣ ಕೂಡ ಮಾತನಾಡಿದ್ದಾರೆ. ಪ್ರತ್ಯೇಕವಾಗಿ ಪರಸ್ಪರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಇಬ್ಬರನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವ ಚಿಂತನೆಯನ್ನು ಸಿಎಂ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಇದೇ ವೇಳೆ ಧರ್ಮೇಂದ್ರ ಪ್ರಧಾನ್ ಹಾಗೂ ಅರುಣ್ ಸಿಂಗ್ ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕುರಿತು ಮಾತುಕತೆ ನಡೆಸಿದರು. ದಾವಣಗೆರೆಯಲ್ಲಿ ಮಾರ್ಚ್ 25ರಂದು ರಥಯಾತ್ರೆಯ ಸಮಾರೋಪ ಸಮಾರಂಭದ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಹಾಗಾಗಿ ಆ ಕಾರ್ಯಕ್ರಮದ ಸಿದ್ಧತೆ ಕುರಿತು ಚರ್ಚೆ ನಡೆಸಿದರು.

ಇದನ್ನೂ ಓದಿ:ಸಿಟಿ ರವಿ ವಿರುದ್ಧ ಕಾಂಗ್ರೆಸ್ ಚುನಾವಣಾ ಟೂಲ್ ಕಿಟ್ ಬಳಕೆ:ಛಲವಾದಿ ನಾರಾಯಣಸ್ವಾಮಿ ಆರೋಪ

ABOUT THE AUTHOR

...view details