ಕರ್ನಾಟಕ

karnataka

By

Published : Jan 17, 2022, 3:20 PM IST

ETV Bharat / state

ಮೇಕೆದಾಟು ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಇಲಿಯೂ ಸಿಕ್ಕಿಲ್ಲ : ಸಚಿವ ಅಶೋಕ್ ವ್ಯಂಗ್ಯ

ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ಮಾಡುವುದಕ್ಕೂ ಮುನ್ನ ಯೋಚಿಸಬೇಕಿತ್ತು. ನಿಜವಾಗಿಯೂ ಕಳಕಳಿ ಇದ್ದಿದ್ದರೆ ಸುಪ್ರೀಂ ಕೋರ್ಟ್​ನಲ್ಲಿ ಕೇಸ್ ಇದ್ದರೂ ಪಾದಯಾತ್ರೆ, ಹೋರಾಟ ಮಾಡಿದರೆ ಏನಾಗುತ್ತದೆ ಎಂಬ ಆಲೋಚನೆ ಸಹ ಅವರಿಗಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.

minister-r-ashok
ಸಚಿವ ಆರ್. ಅಶೋಕ್

ಬೆಂಗಳೂರು:'ಬೆಟ್ಟ ಅಗೆದು ಇಲಿ ಹಿಡಿದಂತೆ' ಎಂಬ ಗಾದೆ ಇದೆ. ಮೇಕೆದಾಟು ಪಾದಯಾತ್ರೆಯಲ್ಲಿ ಕಾಂಗ್ರೆಸ್​ಗೆ ಇಲಿಯೂ ಸಿಕ್ಕಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್​ನವರ ಮನಸ್ಥಿತಿ. ಪಾದಯಾತ್ರೆ ವೇಳೆ ಯಾರು ಮೊದಲಿರಬೇಕು. ಆ ನಂತರ ಯಾರು ಹಿಂದಿರಬೇಕು ಎಂಬ ಗೊಂದಲ ಅವರಲ್ಲಿತ್ತು ಎಂದು ಆರೋಪಿಸಿದರು.

ಸಚಿವ ಆರ್. ಅಶೋಕ್ ಮಾತನಾಡಿದರು

ಕಾಂಗ್ರೆಸ್​ನಲ್ಲಿನ ನಾಯಕತ್ವದ ಕೋಲ್ಡ್ ವಾರ್ ಅದರ ಪ್ರತಿಫಲ ಅಷ್ಟೇ. ನಾಯಕತ್ವದ ಬಗ್ಗೆ ಪಕ್ಷದ ವೇದಿಕೆಯಲ್ಲಿ ತೀರ್ಮಾನ ಮಾಡಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ರ್ಯಾಲಿಯಲ್ಲಿ ಮೊದಲಿಗರು ಯಾರೆಂಬ ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಮೊದಲು ಸಿದ್ದರಾಮಯ್ಯ ಫೋಟೋ ಹಾಕಲಾಗುತ್ತಿದೆ. ಈಗ ಡಿ. ಕೆ ಶಿವಕುಮಾರ್ ಫೋಟೊವನ್ನು ಮೊದಲು ಹಾಕಲಾಗಿದೆ. ಪ್ರತಿಫಲ ಶೂನ್ಯ. ಇದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರ ಮೇಲಾಟದ ಪಾದಯಾತ್ರೆ ಅಷ್ಟೇ ಎಂದು ಅಶೋಕ್​ ಟೀಕಿಸಿದರು.

ದೇಶದಲ್ಲಿ ಪಾದಯಾತ್ರೆ ಅಥವಾ ಹೋರಾಟದ ಮೂಲಕ ಯಾವುದೇ ನೀರಾವರಿ ಯೋಜನೆಗಳು ಯಶಸ್ವಿಯಾಗಿಲ್ಲ. ಈ ಹಿಂದೆ ಎಸ್.ಎಂ ಕೃಷ್ಣ ಅವರು ಬೆಂಗಳೂರಿನಿಂದ‌ ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡಿದ್ರು. ಆಗ ಕೋರ್ಟ್ ಛೀಮಾರಿ ಹಾಕಿತ್ತು. ಹಾಗಾಗಿ, ಯಾವುದೇ ಹೋರಾಟದಿಂದ ನ್ಯಾಯಾಲಯಗಳ ಮೇಲೆ ನಾವು ಒತ್ತಡ ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.

ಎಷ್ಟು ಹೋರಾಟ ಮಾಡುತ್ತಿರೋ ಅಷ್ಟು ತಮಿಳುನಾಡಿಗೆ ವರವಾಗಲಿದೆ. ಪ್ರತಿಬಾರಿಯೂ ಹೇಳುತ್ತಿದ್ದೇವೆ. ಮೇಕೆದಾಟು ಯೋಜನೆ ಕುಡಿಯುವ ನೀರಿಗಾಗಿ ಮತ್ತು ವಿದ್ಯುತ್ ತಯಾರಿಕೆಗಾಗಿ ಎಂದು ಹೇಳುತ್ತಿದ್ದೇವೆ. ಸುಪ್ರೀಂ ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿ ಮನವರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ಮಾಡಿ ಮೇಕೆದಾಟು ಯೋಜನೆಯಿಂದ ವ್ಯವಸಾಯ ಮತ್ತಿತರ ಉಪಯೋಗಕ್ಕೆ ಕೊಡುತ್ತೇವೆ ಎಂದು ಹೇಳಿದ್ದಾರೆ‌. ಅದು ರೆಕಾರ್ಡ್ ಸಹ ಆಗಿದೆ. ಕಾಂಗ್ರೆಸ್​ನ ಮಿತ್ರಪಕ್ಷ ತಮಿಳುನಾಡಿನಲ್ಲಿ ಅಧಿಕಾರದಲ್ಲಿದೆ. ಅವರಿಗೆ ಇದರಿಂದ ಅನುಕೂಲವಾಗಲಿದೆ‌. ಜೊತೆಗೆ ನ್ಯಾಯಾಲಯದಲ್ಲಿ ನಮಗೆ ಇದರಿಂದ ಹಿನ್ನಡೆಯಾಗುತ್ತದೆ ಎಂದರು.

ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ಮಾಡುವುದಕ್ಕೂ ಮುನ್ನ ಯೋಚಿಸಬೇಕಿತ್ತು. ನಿಜವಾಗಿಯೂ ಕಳಕಳಿ ಇದ್ದಿದ್ದರೆ ಸುಪ್ರೀಂ ಕೋರ್ಟ್​ನಲ್ಲಿ ಕೇಸ್ ಇದ್ದರೂ ಪಾದಯಾತ್ರೆ, ಹೋರಾಟ ಮಾಡಿದರೆ ಏನಾಗುತ್ತದೆ ಎಂಬ ಆಲೋಚನೆ ಸಹ ಅವರಿಗಿಲ್ಲ. ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ಮಾಡಿದ್ದು, ಸುಪ್ರೀಂಕೋರ್ಟ್ ವಿರುದ್ಧನಾ ಅಥವಾ ತಮಿಳುನಾಡಿನ ವಿರುದ್ಧನಾ? ಎಂದು ಪ್ರಶ್ನಿಸಿದರು.

ಈ ರೀತಿ ಮಾಡಿರುವುದು ಕರ್ನಾಟಕಕ್ಕೆ ಮಾಡಿದ ಅನ್ಯಾಯ. ಇದನ್ನು ಕಾಂಗ್ರೆಸ್ ಪಕ್ಷದವರು ಅರ್ಥಮಾಡಿಕೊಳ್ಳಬೇಕು. ಪಾದಯಾತ್ರೆ ಒಂದು ರೀತಿಯ ಚಟ ತೀರಿಸಿಕೊಳ್ಳುವ, ಐಷಾರಾಮಿ ಪಾದಯಾತ್ರೆ ಆಗಿದೆ. ಪಾದಯಾತ್ರೆಯಲ್ಲಿ ಸಾವಿರಾರು ಜನರನ್ನು ಸೇರಿಸಿದ್ದರು. ಸುಮಾರು 10 ರಿಂದ 12 ಮಂದಿ ಶಾಸಕರು, ಎಂಪಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ರೇವಣ್ಣ ಮತ್ತಿತರ ನಾಯಕರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಇನ್ನಷ್ಟು ಸಾವಿರಾರು ಮಂದಿಗೆ ಪಾಸಿಟಿವ್ ಬಂದಿದೆಯೋ ಗೊತ್ತಿಲ್ಲ‌. ಪರೀಕ್ಷೆ ಮಾಡಿಸಿಕೊಂಡರೆ ಸಾವಿರಾರು ಮಂದಿಗೆ ಪಾಸಿಟಿವ್ ಬರುತ್ತದೆ. ಹಾಗಾಗಿ, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದಂತೆ ಕಾಂಗ್ರೆಸ್ ನಾಯಕರೇ ತಾಕೀತು ಮಾಡಿದ್ದಾರೆ. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರೇ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ.

ಪಾದಯಾತ್ರೆಯಿಂದ ಕೋವಿಡ್ ಹರಡಿದೆಯೇ ಹೊರತು. ಕೋವಿಡ್ ಕಡಿಮೆ ಮಾಡಲು ಆಗಿಲ್ಲ. ಈಗಲೂ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದವರು ಪರೀಕ್ಷೆ ಮಾಡಿಸಿಕೊಂಡರೆ ಐದಾರು ಸಾವಿರ ಮಂದಿಗೆ ಕೋವಿಡ್ ಪಾಸಿಟಿವ್ ಬರುತ್ತದೆ. ಕೊರೊನಾ ಹರಡಲು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯೂ ಒಂದು ಕಾರಣ ಎಂದು ಕಂದಾಯ ಸಚಿವರು ಕಿಡಿಕಾರಿದರು.

ಓದಿ:ಕೊಲೆ ಪ್ರಕರಣ: ಜಾಮೀನು ಷರತ್ತು ಸಡಿಲಿಸಿದ ಕೋರ್ಟ್.. ಮಾಜಿ ಸಚಿವ ವಿನಯ್ ಕುಲಕರ್ಣಿಗೆ ರಿಲೀಫ್​

For All Latest Updates

TAGGED:

ABOUT THE AUTHOR

...view details