ಬೆಂಗಳೂರು: ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ಪಶುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು, ನಾಳೆ ಸಂಜೆಯವರೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ರಾಮಸಮುದ್ರ ಅಮೃತ ಮಹಲ್ ಕೇಂದ್ರದ ಸಂಪೂರ್ಣ ವರದಿ ಹಾಗೂ ತೆಗೆದುಕೊಂಡ ಕ್ರಮಗಳ ಬಗ್ಗೆ ಕಚೇರಿಗೆ ಮಾಹಿತಿ ತಲುಪಿಸುವಂತೆ ಪಶುಸಂಗೋಪನೆ ನಿರ್ದೇಶಕ ಡಾ.ಮಂಜುನಾಥ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ರಾಮಸಮುದ್ರದ ಅಮೃತ ಮಹಲ್ ಕಾವಲಿನಲ್ಲಿ 230 ಅಮೃತ್ ಮಹಲ್ ತಳಿಯ ರಾಸುಗಳನ್ನು ಪಾಲನೆ ಮಾಡಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳಲ್ಲಿ ಸುರಿದ ಮಳೆಯಿಂದಾಗಿ ಜಮೀನಿನಲ್ಲಿ ನೀರು ನಿಂತು ಕೆಸರು ಆವರಿಸಿತ್ತು. ಇದರ ಬಗ್ಗೆ ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಕಾಮಗಾರಿ ನಡೆಯುತ್ತಿದ್ದು, ಪ್ಲೋರಿಂಗ್, ಪೈಪ್ ಲೈನ್ ಕೆಲಸ. ನೀರಿನ ತೊಟ್ಟಿಗಳ ನಿರ್ಮಾಣ, ಮೇವು ಶೇಖರಣೆಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ನವೆಂಬರ್ ತಿಂಗಳಲ್ಲಿ ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಸದ್ಯ ಕೇಂದ್ರದಲ್ಲಿನ 230 ದನಗಳನ್ನು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಿದರೆ ಕಾವಲಿಗೆ ಈಗಾಗಲೇ ಸ್ಥಳಾಂತರಿಸಲಾಗಿದೆ. ಇಂದು ಸಂಜೆಯವರೆಗೆ ಎಲ್ಲ ದನಗಳನ್ನು ಬಿದರೆ ಕಾವಲಿಗೆ ಸ್ಥಳಾಂತರಿಸಲಾಗುವುದು ಎಂದು ವಿವರಿಸಿದ್ದಾರೆ.
ಬಿದರೆ ಕಾವಲು 782.16 ಎಕರೆ ಜಮೀನು ಹೊಂದಿರುವುದರಿಂದ ದನಗಳಿಗೆ ಸೂಕ್ತವಾದ ಸ್ಥಳಾವಕಾಶ ದೊರೆಯಲಿದ್ದು ಚನ್ನರಾಯಪಟ್ಟಣದಲ್ಲಿ ಕಾಮಗಾರಿ ಸಂಪೂರ್ಣಗೊಳ್ಳುವವರೆಗೆ ಬಿದರೆ ಕಾವಲಿನಲ್ಲಿ ಪಶುಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದ್ದಾರೆ.