ಬೆಂಗಳೂರು: ಸಚಿವ ಸ್ಥಾನದಿಂದ ಕೈ ಬಿಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಅಬಕಾರಿ ಸಚಿವ ಹೆಚ್.ನಾಗೇಶ್ ಸಿಎಂ ನಿವಾಸಕ್ಕೆ ದೌಡಾಯಿಸಿ ಅನೌಪಚಾರಿಕವಾಗಿ ಮಾತುಕತೆ ನಡೆಸಿದರು.
ಬೆಳಗ್ಗೆಯೇ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಸಚಿವ ನಾಗೇಶ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಇಲಾಖೆಯಲ್ಲಿನ ಕೆಲಸ ಕಾರ್ಯದ ಕುರಿತು ಸಿಎಂಗೆ ವಿವರ ನೀಡಿದರು. ನೇರವಾಗಿ ಸಂಪುಟದಿಂದ ಕೈ ಬಿಡುವ ಸುದ್ದಿ ಬಗ್ಗೆ ಪ್ರಸ್ತಾಪ ಮಾಡದ ಸಚಿವ ನಾಗೇಶ್, ಮತ್ತಷ್ಟು ಉತ್ತಮವಾಗಿ ಇಲಾಖೆಯ ಜವಾಬ್ದಾರಿ ನಿರ್ವಹಿಸುವ ಭರವಸೆ ನೀಡಿ ಆಶೀರ್ವಾದ ಪಡೆದುಕೊಂಡರು.
ಕೆಲಕಾಲ ಅನೌಪಚಾರಿಕವಾಗಿ ಮಾತುಕತೆ ನಡೆಸಿ ಸಂಪುಟದಿಂದ ಕೈಬಿಡುವ ಕುರಿತು ಸ್ವತಃ ಸಿಎಂ ಯಡಿಯೂರಪ್ಪ ಅವರೇ ಏನಾದರೂ ಹೇಳಬಹುದಾ ಎಂದು ನಿರೀಕ್ಷಿಸಿದರು. ಆದರೆ ಅಂತಹ ಯಾವುದೇ ಮಾತುಗಳು ಯಡಿಯೂರಪ್ಪ ಅವರಿಂದ ಬಾರದ ಕಾರಣ ಸಂಪುಟದಿಂದ ಕೈ ಬಿಡುವ ವಿಷಯದ ಕುರಿತು ಹೆಚ್ಚಿನ ಚರ್ಚೆಗೆ ಹೋಗದ ನಾಗೇಶ್ ಸಿಎಂ ನಿವಾಸದಿಂದ ನಿರ್ಗಮಿಸಿದರು.