ಕರ್ನಾಟಕ

karnataka

By

Published : Sep 21, 2021, 8:22 AM IST

ETV Bharat / state

ಅನುದಾನಿತ ಪಿಯು ಕಾಲೇಜಿನಲ್ಲಿ ತೆರವಾದ ಹುದ್ದೆ ಭರ್ತಿ ಸಂಬಂಧ MLCಗಳ ಜತೆ ಚರ್ಚೆ: ನಾಗೇಶ್

ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ತೆರವಾಗಿರುವ ಹುದ್ದೆಗಳ ಭರ್ತಿ ಸಂಬಂಧ ಎಂಎಲ್​ಸಿಗಳ ಜತೆ ಚರ್ಚಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ನಾಗೇಶ್
ನಾಗೇಶ್

ಬೆಂಗಳೂರು: ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ತೆರವಾಗಿರುವ ಹುದ್ದೆಗಳ ಭರ್ತಿಗೆ ಎದುರಾಗಿರುವ ತೊಂದರೆಗಳ ಕುರಿತು ವಿಧಾನ ಪರಿಷತ್ ಸದಸ್ಯರ ಜತೆ ಚರ್ಚಿಸಿ ಒಂದು ತೀರ್ಮಾನ ಕೈಗೊಳ್ಳುವುದಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ತಿನ ಸದಸ್ಯ ಎಸ್.ವಿ.ಸಂಕನೂರು ಮಂಡಿಸಿದ ನಿಯಮ 72ರ ಗಮನ ಸೆಳೆಯುವ ಸೂಚನೆಗೆ ಬಿ.ಸಿ.ನಾಗೇಶ್ ಉತ್ತರ ನೀಡಿದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಶೈಕ್ಷಣಿಕ ನಿಯಮ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಅಡಿ ಉಪನ್ಯಾಸಕರ ಕಾರ್ಯಭಾರ ನಿಗದಿಪಡಿಸಿರುವ ಹಿನ್ನೆಲೆ ಉಪನ್ಯಾಸಕರುಗಳಿಗೆ 16/20 ಅವಧಿಗಳ ಕಾರ್ಯಭಾರವನ್ನು ಸರಿದೂಗಿಸುವಂತೆ ಜಿಲ್ಲಾ ಉಪ ನಿರ್ದೇಶಕರುಗಳಿಗೆ ಸೂಚಿಸಲಾಗಿತ್ತು ಎಂದರು.

ಪದವಿ ಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಆಡಳಿತ ಮತ್ತು ಸಹಾಯಾನುದಾನ ಇತ್ಯಾದಿ) 2006ರ ನಿಯಮ 15, 16 ಮತ್ತು 17ರ ಅನ್ವಯ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿನ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸದರಿ ನಿಯಮಗಳನ್ನು ಸರ್ಕಾರದಿಂದ ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ ಎಂದು ತಿಳಿಸಿದರು.

ಅದರಂತೆ, ಸರ್ಕಾರದ ಅಧಿಸೂಚನೆ ಮೇಲಿನ ನಿಯಮ 14ಕ್ಕೆ ತಿದ್ದುಪಡಿ ತಂದು ಖಾಸಗಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಷಯಗಳಿಗೆ ವಾರದಲ್ಲಿ ತಲಾ 24 ಗಂಟೆಗಳು ಹಾಗೂ ಕಲಾ, ವಾಣಿಜ್ಯ ಮತ್ತು ಭಾಷಾ ವಿಷಯಗಳಿಗೆ ವಾರದಲ್ಲಿ ತಲಾ 20 ಗಂಟೆಗಳ ಕಾರ್ಯಭಾರ ನಿಗದಿಪಡಿಸಲಾಗಿರುತ್ತದೆ. ಮುಂದುವರೆದು, ಸಾಕಷ್ಟು ಕಾರ್ಯಭಾರ ಇರುವ ಹುದ್ದೆಗಳನ್ನು ಮಾತ್ರ ವೇತನಾನುದಾನಕ್ಕೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಒಂದು ವೇಳೆ ಕಾರ್ಯಭಾರ ಇಲ್ಲದಿರುವ ಪಕ್ಷದಲ್ಲಿ ಸಮೀಪದ ಇನ್ನೊಂದು ಅನುದಾನಿತ ಪದವಿ ಪೂರ್ವ ಕಾಲೇಜಿಗೆ ಹೊಂದಾಣಿಕೆ ಮಾಡಿ ಅನುಮೋದನೆ ನೀಡಲಾಗುವುದು. ಆದರೆ, ಹೊಂದಾಣಿಕೆ ಮಾಡಿರುವ ಕಾಲೇಜಿನಲ್ಲಿ ಇರುವ ಹುದ್ದೆಯನ್ನು ಖಾಯಂ ಆಗಿ ಹಿಂಪಡೆಯಲಾಗುವುದು. ಇದಕ್ಕೆ ಸಂಬಂಧಪಟ್ಟ ಆಡಳಿತ ಮಂಡಳಿಯ ಅನುಮತಿ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಕೈಲಿ ಹಗ್ಗ, ಡಿಕೆಶಿ ಕೈಲಿ ಬಾರುಕೋಲು..ಕಾಂಗ್ರೆಸ್ ಪ್ರತಿಭಟನೆಗೆ ಸಿಎಂ ವ್ಯಂಗ್ಯ

ಈ ಅಧಿಸೂಚನೆನ್ವಯ ನಿಗದಿತ ಕಾರ್ಯಭಾರ ಹೊಂದಿರುವ 2015 ರ ಡಿ.31ರೊಳಗೆ ಖಾಲಿಯಾಗಿರುವ ಅನುದಾನಿತ ಉಪನ್ಯಾಸಕರ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡಲು ಆಡಳಿತ ಮಂಡಳಿಗಳಿಗೆ ಅನುಮತಿ ನೀಡಲಾಗುತ್ತಿದೆ. ನಿಗದಿತ ಕಾರ್ಯಭಾರ ಹೊಂದಿಲ್ಲದ/ಕೊರತೆ ಇರುವ ಅನುದಾನಿತ ಉಪನ್ಯಾಸಕರ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ.

ಹಾಗೆ ಮಾಡಿದಲ್ಲಿ ಸರ್ಕಾರದ ಹಣದ ಪೂರ್ಣ ಉಪಯೋಗ ಸಾಧ್ಯವಾಗುವುದಿಲ್ಲ. ಪೂರ್ಣ ಕಾರ್ಯಭಾರ ಒದಗಿಸಿಕೊಂಡಿರುವ ಬಗ್ಗೆ ಆಡಳಿತ ಮಂಡಳಿಗಳು ಪ್ರಸ್ತಾವನೆ ಸಲ್ಲಿಸಿದಲ್ಲಿ ಹುದ್ದೆಗಳನ್ನು ತುಂಬಿಕೊಳ್ಳಲು ನಿಯಮಾನುಸಾರ ಪರಿಶೀಲಿಸಿ ಅನುಮತಿ ನೀಡಲಾಗುತ್ತದೆ ಎಂದರು.

ಆದರೆ, ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರು, ಶ್ರೀಕಂಠೇಗೌಡ ಹಾಗೂ ಇತರ ಸದಸ್ಯರು ತೀವ್ರ ಒತ್ತಡ ಹೇರಿದ ಹಿನ್ನೆಲೆ ಸಭೆ ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆ ಸಚಿವರು ನೀಡಿದರು.

ABOUT THE AUTHOR

...view details