ಕರ್ನಾಟಕ

karnataka

ಬಂಡವಾಳ ಹೂಡುವವರಿಗೆ ಕರ್ನಾಟಕ ಪ್ರಶಸ್ತ ರಾಜ್ಯ, ಅನುಕೂಲಕರ ವಾತಾವರಣ ಸೃಷ್ಟಿಸಲಾಗಿದೆ: ಸಚಿವ ನಿರಾಣಿ

By

Published : Oct 31, 2022, 5:15 PM IST

ರಾಜ್ಯದಲ್ಲಿ 400 ಕ್ಕೂ ಹೆಚ್ಚು ಆರ್ ಅಂಡ್ ಡಿ ಕೇಂದ್ರಗಳಿವೆ. ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್​ಗಳಿವೆ. ಉದಯೋನ್ಮುಖ ಉದ್ಯಮಿಗಳಿಗೆ, ಉದ್ಯಮ ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಸಮಾವೇಶದಿಂದ ಪ್ರಯೋಜನ ಆಗಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು: ಬಂಡವಾಳ ಹೂಡುವವರಿಗೆ ಕರ್ನಾಟಕ ಪ್ರಶಸ್ತ ರಾಜ್ಯವಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಸಲಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಜಾಗತಿಕ ಬಂಡವಾಳ‌ ಹೂಡಿಕೆದಾರರ ಸಮಾವೇಶ ನಡೆಯಲಿರುವ ಬೆಂಗಳೂರು ಅರಮನೆ ಬಳಿ ಮಾಧ್ಯಮಗೋಷ್ಟಿ ‌ನಡೆಸಿದ ಅವರು, ನವೆಂಬರ್ 2 ರಿಂದ 4ರ ವರೆಗೆ‌ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ನವೆಂಬರ್ 2 ರಂದು ಬೆಳಗ್ಗೆ 10 ಗಂಟೆಗೆ ಸಮಾವೇಶ ಆರಂಭವಾಗಲಿದೆ. ಬೆಳಗ್ಗೆ 10.30 ಕ್ಕೆ ಸಮಾವೇಶ ಕುರಿತು ಪ್ರಧಾನಿ ಮೋದಿಯವರು ವರ್ಚುವಲ್ ಭಾಷಣ ಮಾಡಲಿದ್ದಾರೆ ಎಂದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ. ಅಂದು ಮೊದಲ ಅರ್ಧ ದಿನ ಕೇಂದ್ರ ಸಚಿವರಾದ ಪಿಯೂಶ್ ಗೋಯಲ್, ಪ್ರಹ್ಲಾದ್ ಜೋಶಿ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಿಎಂ ಬೊಮ್ಮಾಯಿ, ಸಚಿವರಾದ ಅಶ್ವತ್ಥ್​ ನಾರಾಯಣ, ಎಂಟಿಬಿ ನಾಗರಾಜ್ ಭಾಗವಹಿಸಲಿದ್ದಾರೆ. ಮಧ್ಯಾಹ್ನದ ಬಳಿಕ ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರು ಭಾಗವಹಿಸಲಿದ್ದಾರೆ. ಜಿಮ್ ಸಮಾವೇಶದಲ್ಲಿ 5 ಲಕ್ಷ ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಿಕೆ ನಿರೀಕ್ಷೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ

ರಾಜ್ಯದಲ್ಲಿ 400 ಕ್ಕೂ ಹೆಚ್ಚು ಆರ್ ಅಂಡ್ ಡಿ ಕೇಂದ್ರಗಳಿವೆ. ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್ ಗಳಿವೆ. ಉದಯೋನ್ಮುಖ ಉದ್ಯಮಿಗಳಿಗೆ, ಉದ್ಯಮ ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಸಮಾವೇಶದಿಂದ ಪ್ರಯೋಜನ ಆಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಐದು ಏರ್‌ಪೋರ್ಟ್ ಗಳನ್ನು ನಿರ್ಮಾಣ ಮಾಡಲಿದ್ದೇವೆ. ಸಜ್ಜನ್ ಜಿಂದಾಲ್, ಕುಮಾರ ಮಂಗಲಂ ಬಿರ್ಲಾ, ಕರಣ್ ಗೌತಮ್ ಅದಾನಿ, ವಿಕ್ರಂ ಕಿರ್ಲೋಸ್ಕರ್, ಅಮಿತ್ ಅಗರವಾಲ್ ಸೇರಿ ಎಂಟು ಜನ ಖ್ಯಾತ ಉದ್ಯಮಿಗಳು‌ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹೆದ್ದಾರಿಗಳ ಅಭಿವೃದ್ಧಿಯಾಗಿದೆ. ಎಕ್ಸ್​ಪ್ರೆಸ್​ ವೇಗಗಳಲ್ಲಿ ವೇಗ ಮಿತಿ‌ ಹೆಚ್ಚಾಗಿದೆ. ವಿದ್ಯುತ್ ಕ್ಷೇತ್ರದ ಹಸಿರು ಶಕ್ತಿ ವಲಯದಲ್ಲಿ ಹೆಚ್ಚಿನ ಬಂಡವಾಳ ನಿರೀಕ್ಷೆ. ಹಸಿರು ಶಕ್ತಿ ವಲಯದಲ್ಲಿ 2 ಲಕ್ಷ ಕೋಟಿ ಬಂಡವಾಳ‌ ಬರುವ ನಿರೀಕ್ಷೆ ಇದೆ. ಏರೋಸ್ಪೇಸ್ ವಲಯದಲ್ಲೂ ಹೆಚ್ಚು ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ.

ದುಬೈ ಎಕ್ಸ್‌ಪೋದಲ್ಲಿ ಭಾಗಿಯಾಗಿದ್ದ ಹೂಡಿಕೆದಾರರು ಇಲ್ಲಿಗೂ ಕೂಡ ಬರ್ತಿದ್ದಾರೆ. ದಾವೋಸ್ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಕರ್ನಾಟಕ ಅತಿ ಹೆಚ್ಚು MOUಗಳಿಗೆ ಸಹಿ ಹಾಕಿತ್ತು. ಫೋರಂ‌ನಲ್ಲಿ ಕರ್ನಾಟಕದ ಸ್ಟಾಲ್‌ಗೆ ಗೌತಮ್ ಅದಾನಿ, ಹರ್ಷಲ್ ಮಿತ್ತಲ್ ಭೇಟಿ ನೀಡಿ ಚರ್ಚೆ ನಡೆಸಿದ್ರು. ಕರ್ನಾಟಕದಲ್ಲಿ 600 ಕ್ಕೂ R AND D ಸಂಸ್ಥೆಗಳಿದೆ. ಸ್ಟಾರ್ಟ್ ಅಪ್ ಕಂಪನಿಗಳಲ್ಲೂ ಕೂಡ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಕ್ಲಸ್ಟರ್​​ ನಿರ್ಮಾಣಕ್ಕೆ ಸಿಎಂ ಸೂಚನೆ:ಮೈಸೂರು ಮಹಾರಾಜರು, ಸರ್ ಎಂ ವಿಶ್ವೇಶ್ವರಯ್ಯ 100 ವರ್ಷಗಳ ಹಿಂದೆ ಆತ್ಮನಿರ್ಭರದ ಕಲ್ಪನೆ ನೀಡಿದವರು. ಬೇರೆ ರಾಜ್ಯಗಳ ಮೇಲೆ ಅವಲಂಬನೆಯಾಗದಂತೆ 150 ಕಂಪನಿಗಳನ್ನು ಸ್ಥಾಪಿಸಿದ್ದಾರೆ. ಅದನ್ನು ಉಳಿಸಿಕೊಂಡು ಬೆಳೆಸುವ ಕೆಲಸ ನಮ್ಮದಾಗಿದೆ. ಐಟಿಬಿಟಿ, ಗೋಲ್ಡ್ ಮೈನಿಂಗ್, ಇಂಟಲಿಜೆನ್ಸ್, ಸರ್ವಿಸ್ ಸೆಕ್ಟರ್ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್‌ನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಧಾರವಾಡದಲ್ಲಿ FMCG ಕ್ಲಸ್ಟರ್ ನಿರ್ಮಾಣ ಮಾಡಿ ಉದ್ಯೋಗ ನೀಡುವ ಕೆಲಸ ಮಾಡಿದ್ದೇವೆ. ಕಲ್ಯಾಣ ಕರ್ನಾಟಕದಲ್ಲೂ ಕೂಡ ಕ್ಲಸ್ಟರ್​​ ನಿರ್ಮಾಣಕ್ಕೆ ಸಿಎಂ ಸೂಚಿಸಿದ್ದಾರೆ. ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

2012 ರ ಜಿಮ್ ಸಮಾವೇಶದಲ್ಲಿ ಮಾಡಿಕೊಂಡ ಒಪ್ಪಂದಗಳ ಪೈಕಿ 27% ಜಾರಿಯಾಗಿದೆ. ಕಬ್ಬಿಣ ಅದಿರು ವಲಯದ ಸ್ಥಿತ್ಯಂತರ ಮತ್ತು ಭೂಮಿ ನೀಡಿಕೆಗೆ ಪ್ರತಿಪಕ್ಷದವರಿಂದ ಬಂದ ಆಕ್ಷೇಪ ಹಿನ್ನೆಲೆಯಲ್ಲಿ ಒಪ್ಪಂದ ಜಾರಿಯಲ್ಲಿ ಹಿನ್ನಡೆ ಆಗಿದೆ ಎಂದು ತಿಳಿಸಿದರು.

ಸಾಕಷ್ಟು ಬಂಡವಾಳ ಹರಿದು ಬರಲಿದೆ: ಹಾಸನ, ಶಿವಮೊಗ್ಗ, ವಿಜಯಪುರದಲ್ಲಿ ಅತಿ ಕಡಿಮೆ ಸಮಯದಲ್ಲಿ ಏರ್ಪೋರ್ಟ್ ನಿರ್ಮಾಣ ಮಾಡಿದ್ದೇವೆ. ಚಿಕ್ಕಮಗಳೂರು, ಬಾದಾಮಿ, ಕೊಪ್ಪಳ, ರಾಯಚೂರು, ದಾವಣಗೆರೆಯಲ್ಲಿ ಬರುವ 18 ತಿಂಗಳಲ್ಲಿ ಏರ್ಪೋರ್ಟ್ ನಿರ್ಮಾಣ ಮಾಡಲಿದ್ದೇವೆ. ಕಾರಾವಾರ, ಮಂಗಳೂರು ಬಂದರು ಅಭಿವೃದ್ಧಿಗೆ ಪಿಪಿಪಿ ಮಾದರಿಯಲ್ಲಿ ಯೋಜನೆ ರೂಪಿಸಿದ್ದೇವೆ. ಬೆಂಗಳೂರು ಟ್ರಾಫಿಕ್ ತಡೆಗಟ್ಟಲು ಕೂಡ ಕ್ರಮ ವಹಿಸಲಾಗಿದೆ. ಈ ಎಲ್ಲಾ ಕ್ರಮಗಳಿಂದ ಕರ್ನಾಟಕಕ್ಕೆ ಸಾಕಷ್ಟು ಬಂಡವಾಳ ಹರಿದು ಬರಲಿದೆ ಎಂದು ತಿಳಿಸಿದರು.

ದುಬಾರಿ ವೆಚ್ಚಗಳಿಗೆ ಕಡಿವಾಣ:ಜಿಮ್ ಸಮಾವೇಶದ ಕಿರುಚಿತ್ರವೊಂದಕ್ಕೆ 4.50 ಕೋಟಿ ಪ್ರಸ್ತಾವನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಮಾವೇಶ ಉತ್ತಮವಾಗಿ ಆಗಬೇಕು ಅಂತ ಕಿರುಚಿತ್ರ ಮಾಡಲು ಅಧಿಕಾರಿಗಳು ಮುಂದಾಗಿದ್ರು. ಒಳ್ಳೆಯ ಸಂಸ್ಥೆಯ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆದರೆ ಈಗಿನ ನಮ್ಮ ಪರಿಸ್ಥಿತಿಯಲ್ಲಿ ದುಬಾರಿ ಕಿರುಚಿತ್ರ ಬೇಡ ಅಂತ ನಿರ್ಧರಿಸಿದೆವು. ಹಾಗಾಗಿ ಕಿರುಚಿತ್ರದ ಒಪ್ಪಂದ ರದ್ದು ಮಾಡಲಾಯ್ತು. ಸಮಾವೇಶದಲ್ಲಿ ಯಾವುದೇ ದುಂದು ವೆಚ್ಚ ಮಾಡ್ತಿಲ್ಲ. ಮುಂದಿನ‌ ದಿನಗಳಲ್ಲಿ ದುಬಾರಿ ವೆಚ್ಚಗಳಿಗೆ ಕಡಿವಾಣ ಹಾಕುತ್ತೇವೆ ಎಂದರು.

ಜಿಮ್ ಸಮಾವೇಶಕ್ಕೆ ತಗುಲುವ ವೆಚ್ಚದ ಬಗ್ಗೆ ಮಾಹಿತಿ ಕೊಡದ ಸಚಿವ ನಿರಾಣಿ, ಸಮಾವೇಶ ಮುಗಿದ ಬಳಿಕ ವೆಚ್ಚದ ಬಗ್ಗೆ ಗೊತ್ತಾಗುತ್ತದೆ. ಈಗಲೇ ವೆಚ್ಚದ ನಿಖರ ಮಾಹಿತಿ ಗೊತ್ತಾಗಲ್ಲ ಎಂದು ಹೇಳಿದರು.

ಓದಿ:ರಾಜ್ಯದಲ್ಲಿ ₹1.74 ಲಕ್ಷ ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಒಪ್ಪಿಗೆ: 41,448 ಉದ್ಯೋಗ ಸೃಷ್ಟಿ ನಿರೀಕ್ಷೆ

ABOUT THE AUTHOR

...view details