ಕರ್ನಾಟಕ

karnataka

By

Published : Jun 26, 2020, 9:10 PM IST

ETV Bharat / state

ಮನೆ ಮನೆಗೆ ಗಂಗೆ ಯೋಜನೆಗೆ ಅಗಸ್ಟ್​ನಲ್ಲಿ ಚಾಲನೆ.. ಸಚಿವ ಕೆ ಎಸ್ ಈಶ್ವರಪ್ಪ

ಮನೆ ಮನೆಗೆ ಗಂಗೆ ಯೋಜನೆಯಡಿ ಗಾಂಧಿ ಜಯಂತಿಯಂದು ಮೊದಲ ಹಂತದಲ್ಲಿ ಮನೆ ಮನೆಗೆ ಕೊಳಾಯಿ ಮುಖಾಂತರ ನೀರು ಹರಿಸಲಾಗುತ್ತದೆ. ಮುಂದಿನ ಮೂರು ವರ್ಷದಲ್ಲಿ ಗ್ರಾಮೀಣ ಪ್ರದೇಶದ 65 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

Minister Iswarappa Press meet on Drinking Water Project
ಸಚಿವ ಕೆ.ಎಸ್.ಈಶ್ವರಪ್ಪ

ಬೆಂಗಳೂರು :ಕೇಂದ್ರ ಸರ್ಕಾರದ ಸಹಭಾಗಿತ್ವದ24 ಸಾವಿರ ಕೋಟಿ ರೂ.‌ ವೆಚ್ಚದ ಮನೆ ಮನೆಗೆ ಗಂಗೆ ಯೋಜನೆಗೆ ಅಗಸ್ಟ್​ನಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಮಾತನಾಡಿದ ಅವರು, ಗಾಂಧಿ ಜಯಂತಿಯಂದು ಮೊದಲ ಹಂತದಲ್ಲಿ ಮನೆ ಮನೆಗೆ ಕೊಳಾಯಿ ಮುಖಾಂತರ ನೀರು ಹರಿಸಲಾಗುತ್ತದೆ. ಮುಂದಿನ ಮೂರು ವರ್ಷದಲ್ಲಿ ಗ್ರಾಮೀಣ ಪ್ರದೇಶದ 65 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ. ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ಕುಡಿಯುವ ನೀರಿನ ನಲ್ಲಿ ಹಾಕುವ ವಿಶೇಷ ಯೋಜನೆ ಜಾರಿಗೆ ತರಲಾಗಿದೆ.

ನಾಲ್ಕು ವರ್ಷದ ಗುರಿ ಇದ್ದರೂ ನಮ್ಮ ರಾಜ್ಯ ಮೂರು ವರ್ಷಕ್ಕೆ ಮುಗಿಸುವ ಅಪೇಕ್ಷೆಯಲ್ಲಿದೆ. ಪ್ರತಿ ವರ್ಷ ನಾಲ್ಕು ಸಾವಿರ ಕೋಟಿ ರೂ. ಕೇಂದ್ರ ಕೊಡಲಿದೆ. ರಾಜ್ಯ ಕೂಡ ಅಷ್ಟೇ ಹಣ ಹಾಕಲಿದೆ. ಪ್ರತಿ ವರ್ಷ ಎಂಟು ಸಾವಿರ ಕೋಟಿ ವಿನಿಯೋಗ ಮಾಡಲಾಗುತ್ತದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ ಎಸ್ ಈಶ್ವರಪ್ಪ..

ಎಲ್ಲಾ ಅಧಿಕಾರಿಗಳ ವಿಶೇಷ ಸಮಾವೇಶ ಮಾಡುತ್ತಿದ್ದೇವೆ. ಅಗಸ್ಟ್​​ನಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಬೇಕು. ಎಷ್ಟು ಹಳ್ಳಿ, ಮನೆಗಳಿಗೆ ನಲ್ಲಿ ಸಂಪರ್ಕ ಕೊಡಲು ಸಾಧ್ಯ ಎಂದು ವರದಿ ನೀಡಿ ಕಾಮಗಾರಿಗೆ ಚಾಲನೆ ನೀಡಬೇಕು. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಎಷ್ಡು ಸಾಧ್ಯವೋ ಅಷ್ಟು ಮನೆಗೆ ನಲ್ಲಿ ಮೂಲಕ ನೀರು ಕೊಡಬೇಕು ಎಂದರು.

ರಾಜ್ಯದ ಗ್ರಾಮೀಣ ಭಾಗದಲ್ಲಿ 90 ಲಕ್ಷ ಮನೆ ಇವೆ. ಅದರಲ್ಲಿ 25 ಲಕ್ಷ ಮನೆಗೆ ಮಾತ್ರ ನಲ್ಲಿ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. ಬಾಕಿ 65 ಲಕ್ಷ ಮನೆಗಳಿಗೆ‌ ಮುಂದಿನ ಮೂರು ವರ್ಷದಲ್ಲಿ ಹಂತ ಹಂತವಾಗಿ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಗುರಿ ಹಾಕಿಕೊಂಡಿದೆ. ಅದಕ್ಕೆ ರಾಜ್ಯದ ಪಾಲಿನ ಹಣ ಹೊಂದಿಸಲಾಗುತ್ತದೆ ಎಂದರು.

ಕೋವಿಡ್​ಗೂ ಕೇಂದ್ರದ ಈ ಯೋಜನೆಗೂ ಸಂಬಂಧವಿಲ್ಲ. ಕುಡಿಯುವ ನೀರು, ನೈರ್ಮಲ್ಯಕ್ಕೆ ಕೇಂದ್ರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕೇಂದ್ರ ಅರ್ಧದಷ್ಟು ಹಣ ನೀಡಿದಾಗಲೂ ನಮ್ಮ ಬಳಿ ಹಣ ಇಲ್ಲ ಅಂದರೆ ಅದು ನಾವು ನಮ್ಮ ರಾಜ್ಯದ ಜನರಿಗೆ ಮಾಡುವ ದ್ರೋಹವಾಗುತ್ತದೆ. ಈಗಾಗಲೇ ಸಿಎಂ ಯೋಜನೆಗೆ ಒಪ್ಪಿಕೊಂಡಿದ್ದಾರೆ. ‌ಹಣಕಾಸು ಇಲಾಖೆ ಕೂಡ ಒಪ್ಪಿಗೆ ನೀಡಿದೆ. ಕೇಂದ್ರದಷ್ಟೇ ಪ್ರಮಾಣದ ಹಣ ನಾವು ಬಿಡುಗಡೆ ಮಾಡಲಿದ್ದೇವೆ ಎಂದರು.

ನಮ್ಮ ಇಲಾಖೆ‌ಯ ಕೆಲಸ ಆಮೆಗತಿ ವೇಗದಲ್ಲಿ ನಡೆಯುತ್ತದೆ ಎನ್ನುವುದು ನಿರಾಧಾರ. ಇತಿಹಾಸದಲ್ಲಿ ಮೊದಲ ಬಾರಿಗೆ ಎಲ್ಲಾ ಜಿಲ್ಲೆಗಳಲ್ಲೂ ಅಂತರ್ಜಲ ಮಟ್ಟದ ಜಾಸ್ತಿಗೆ ಪ್ರಯತ್ನ ನಡೆದಿದೆ. ಎಲ್ಲರಿಗೂ ಜಾಬ್ ಕಾರ್ಡ್ ಕೊಡಲಾಗಿದೆ. ವೇಗದಲ್ಲಿ ನರೇಗಾ ಕಾಮಗಾರಿ ನಡೆಯುತ್ತಿವೆ. ನೆರೆಹಾನಿ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ 1,500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ, ಕಾಮಗಾರಿ ನಡೆಯುತ್ತಿದೆ. ನಮ್ಮ ಇಲಾಖೆ ಬಹಳ ವೇಗವಾಗಿ ಮತ್ತು ಅತಿ ಹೆಚ್ಚು ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ನರೇಗಾ ಅವ್ಯವಹಾರ ಆರೋಪ ಕೇಳಿ ಬಂದ ಬಗ್ಗೆ ತನಿಖೆಗೆ ಆದೇಶಿಸುವ ಪ್ರಶ್ನೆಯೇ ಇಲ್ಲ. ಕೆಲಸ ‌ಮಾಡಿದವರ ಖಾತೆಗೆ ಕೇಂದ್ರದಿಂದ‌ ನೇರ ಹಣ ವರ್ಗಾವಣೆ ಅಗಲಿದೆ. ಹಾಗಾಗಿ ಅವ್ಯವಹಾರ ಸಾಧ್ಯವಿಲ್ಲ, ಒಂದು ವೇಳೆ ಅಂತಹ ದೂರು ಬಂದರೆ ಕ್ರಮಕೈಗೊಳ್ಳಲಾಗುತ್ತದೆ. ನರೇಗಾ ಯೋಜನೆಯಡಿ ಪ್ರತಿ ದಿನ 275 ರೂ.ಕೂಲಿ ನೀಡಲಾಗುತ್ತಿದೆ. ಹಾಗಾಗಿ ಜನರು ಸಂತೋಷದಿಂದ‌ ಬಂದು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಹಿಂದಿನ ಮೈತ್ರಿ ಸರ್ಕಾರದ ಯೋಜನೆಗಳಿಗೆ ಹಣ ನೀಡುತ್ತಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ವಿಷಯ. ಎಲ್ಲೆಲ್ಲಿ ಕಾಮಗಾರಿ ಆಗಬೇಕೋ ಅಲ್ಲಿ ಮಾಡಲಾಗುತ್ತದೆ. ಯಾವ ಕಾಮಗಾರಿಯೂ ಕುಂಠಿತ ಆಗುತ್ತಿಲ್ಲ. ಎಲ್ಲ ವೇಗವಾಗಿ ನಡಯುತ್ತಿದೆ ಎಂದರು.

ಪ್ರಪಂಚದ ಎಲ್ಲಾ ರಾಷ್ಟ್ರದಲ್ಲೂ ಕೊರೊನಾ ಇದೆ. ನಿಯಂತ್ರಣದಲ್ಲಿ ಬಹಳ ರಾಷ್ಟ್ರಗಳು ವಿಫಲವಾಗಿವೆ. ಆದರೆ ಭಾರತ ಯಶಸ್ವಿಯಾಗಿದೆ. ಕರ್ನಾಟಕಲ್ಲಿಯೂ ಕೂಡ ನಿಯಂತ್ರಣ ಮಾಡಲಾಗುತ್ತಿದೆ. ಕೊರೊನಾ ಕಾರಣ ನಾವು ಬಹಳ ಎಚ್ಚರಿಕೆಯಿಂದ ಇರಬೇಕು. ಜನ ಜಾಗೃತಿ ಮಾಡಬೇಕು, ಆ ಕೆಲಸ ಮಾಡಲಾಗುತ್ತಿದೆ. ಕೊರೊನಾ ನಿಯಂತ್ರಣ ಯಶಸ್ವಿಯಾಗಿದೆ‌. ಕೆಲ ಭಾಗದಲ್ಲಿ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿವೆ. ಅಂತಹ ಕಡೆ ಲಾಕ್ ಡೌನ್ ಮಾಡಬೇಕು. ಸೀಮಿತವಾಗಿ ಮಾಡಲಾಗುತ್ತಿದೆ ಎಂದರು.

ಇಷ್ಟು ದಿನ ಇಲ್ಲದೆ ಈಗ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದಿದೆ ಎನ್ನುವ ಟೀಕೆ್ಗೆ ಉತ್ತರಿಸಿ, ಮೊದಲು ಸರ್ಕಾರವೇ ನೇರವಾಗಿ ಪರಿಸ್ಥಿತಿ ನಿಭಾಯಿಸಿದೆ. ಈಗ ಎಲ್ಲರ ಸಹಕಾರ ಬೇಕು ಎನ್ನುವ ಕಾರಣಕ್ಕೆ ಸಭೆ ಕರೆಯಲಾಗಿದೆ. ಇಲ್ಲಿಯೂ ರಾಜಕಾರಣ ಮಾಡಿದರೆ ಅದಕ್ಕೆ ಉತ್ತರ ಕೊಡಲು ನಾವೂ ತಯಾರಿದ್ದೇವೆ ಎಂದು ತಿರುಗೇಟು ನೀಡಿದರು.

For All Latest Updates

TAGGED:

ABOUT THE AUTHOR

...view details