ಕರ್ನಾಟಕ

karnataka

ರಾಜ್ಯಗಳ ಪುನರ್‌ವಿಂಗಡಣೆ ಕಾಯ್ದೆ ಒಪ್ಪಿಕೊಂಡ ಮೇಲೆ ಪಾಲನೆ ಎಲ್ಲರ ಕರ್ತವ್ಯ: ಕಾರಜೋಳ

By

Published : Dec 14, 2022, 8:27 PM IST

Updated : Dec 14, 2022, 10:37 PM IST

1976ರಲ್ಲಿ ಕರ್ನಾಟಕ ಮಹಾರಾಷ್ಟ್ರ ಪುನರ್ ವಿಂಗಡಣೆಯಾಗಿ ಸಂಸತ್ತಿನಲ್ಲಿ ವಿಧೇಯಕ ಅಂಗೀಕಾರವಾಗಿದೆ. ಎರಡೂ ರಾಜ್ಯಗಳಿಗೆ ಈಗ ಅದನ್ನು ಪಾಲಿಸುವ ಜವಾಬ್ದಾರಿ ಇದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

minister-govinda-karajola-reaction-on-maharashtra-karnataka-border-dispute
ರಾಜ್ಯಗಳ ಪುನರ್ ವಿಂಗಡಣೆ ಕಾಯ್ದೆ ಒಪ್ಪಿಕೊಂಡ ಮೇಲೆ ಪಾಲಿಸುವುದು ಎಲ್ಲರ ಕರ್ತವ್ಯ :ಕಾರಜೋಳ

ಬೆಂಗಳೂರು:ರಾಜ್ಯಗಳ ಪುನರ್ ವಿಂಗಡಣೆ ಕಾಯ್ದೆಯನ್ನು ಒಪ್ಪಿಕೊಂಡ ಮೇಲೆ ಅದನ್ನು ಪಾಲಿಸುವುದು ಎಲ್ಲ ರಾಜ್ಯಗಳ ಕರ್ತವ್ಯ. ಬೆಳಗಾವಿ ಜನರು ಎಂದಿಗೂ ಮಹಾರಾಷ್ಟ್ರಕ್ಕೆ ಸೇರುತ್ತೇವೆ ಎಂದಿಲ್ಲ. ಮಹಾರಾಷ್ಟ್ರದಲ್ಲಿ ಕುಳಿತ ಕೆಲ ಪುಂಡರು ಮಾಡುತ್ತಿರುವ ಕೆಲಸ ಇದು. ಬೆಳಗಾವಿ ಎಂದಿಗೂ ಕನ್ನಡಿಗರದ್ದೇ. ಕರ್ನಾಟಕಕ್ಕೇ ಸೇರಿರಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿಚಾರದ ಬಗ್ಗೆ ಪ್ರಸ್ತಾಪಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಾರಾಷ್ಟ್ರ ಪ್ರಯತ್ನ ಮಾಡುತ್ತಿದೆ. ಆದರೆ 1976ರಲ್ಲಿ ಕರ್ನಾಟಕ ಮಹಾರಾಷ್ಟ್ರ ಪುನರ್ ವಿಂಗಡಣೆಯಾಗಿ ಸಂಸತ್ತಿನಲ್ಲಿ ವಿಧೇಯಕ ಅಂಗೀಕಾರವಾಗಿದೆ. ಎರಡೂ ರಾಜ್ಯಗಳಿಗೆ ಈಗ ಅದನ್ನು ಪಾಲಿಸುವ ಜವಾಬ್ದಾರಿ ಇದೆ. 1956 ರ ನವೆಂಬರ್ 1 ರಂದು ನಮ್ಮ ರಾಜ್ಯ ಪುನರ್ ವಿಂಗಡಣೆಯಾಗಿ ಮೈಸೂರು ರಾಜ್ಯವಾಯಿತು. 1960 ರಲ್ಲಿ ಮಹಾರಾಷ್ಟ್ರ ಉದಯವಾಗಿದೆ. ನಮ್ಮ ರಾಜ್ಯ ಆಗಿ 4 ವರ್ಷ ಆದ ನಂತರ ಮಹಾರಾಷ್ಟ್ರ ಉದಯ ಆಗಿದೆ. ಅದಾಗಿ ಇಲ್ಲಿಯವರೆಗೂ ಬೆಳಗಾವಿ ಕರ್ನಾಟಕದ್ದು ಎನ್ನುವ ವಾದ ಇದೆ. ಅಲ್ಲಿ ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದು ಹೇಳಿದರು.

ಬೆಳಗಾವಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ:1912 ರಿಂದ ಒಟ್ಟು 13 ಆಯೋಗಗಳನ್ನು ಗಡಿ ವಿವಾದ ವಿಷಯದ ಕುರಿತು ರಚನೆ ಮಾಡಲಾಗಿದೆ. ಅದರಲ್ಲಿ ಸೀಮಾ ಆಯೋಗಕ್ಕೆ ಅಂದಿನ ಪ್ರಧಾನಿ ನೆಹರೂ ಅಧ್ಯಕ್ಷರಾಗಿದ್ದು, ಆ ಸಮಿತಿಯಲ್ಲಿಯೂ ಕೂಡ ಬೆಳಗಾವಿ ಕರ್ನಾಟಕದ್ದೇ ಎಂದು ವರದಿ ನೀಡಿತ್ತು. 13 ಆಯೋಗಗಳಲ್ಲಿ ಒಟ್ಟು 12 ವರದಿ ಬೆಳಗಾವಿ ಕನ್ನಡ ನಾಡಿನದ್ದೇ ಎಂದು ವರದಿ ಕೊಟ್ಟು ವೈಜ್ಫಾನಿಕವಾಗಿ ಕರ್ನಾಟಕಕ್ಕೆ ಸೇರಿದೆ ಎಂದಿದ್ದಾರೆ. ಆದರೂ ಪದೇ ಪದೇ ಕ್ಯಾತೆ ತೆಗೆದು ಮಹಾರಾಷ್ಟ್ರದವರು ಗಲಾಟೆ ಮಾಡುತ್ತಿದ್ದಾರೆ. ಇದನ್ನು ಯಾರೂ ಒಪ್ಪಲ್ಲ. ನಾವು ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ. ದೇಶದ ಕಾನೂನನ್ನು ಗೌರವಿಸಬೇಕಿದೆ ಎಂದರು.

ಮಹಾರಾಷ್ಟ್ರದ ಮನಸ್ಥಿತಿ ಸರಿಯಿಲ್ಲ: ರಾಜ್ಯ ಪುನರ್ ವಿಂಗಡಣೆ ಕಾಯ್ದೆಯನ್ನು ಒಪ್ಪಿಕೊಂಡ ನಂತರ ಸೌಹಾರ್ದಯುತವಾಗಿರಬೇಕಾಗಿರುವುದು ಎಲ್ಲರ ಜವಾಬ್ದಾರಿ ಮತ್ತು ಕರ್ತವ್ಯ. ಇದರ ನಡುವೆ ಮಹಾರಾಷ್ಟ್ರ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದೆ. ಮಹಾರಾಷ್ಟ್ರದ ಮನಸ್ಥಿತಿ ಸರಿಯಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಾಟಕ ಮಾಡುತ್ತಿದೆ. ಸಂಸತ್ತಿನಲ್ಲಿ ಕಾಯ್ದೆ ಪಾಸ್ ಆದ ಮೇಲೆ ಎಲ್ಲ ರಾಜ್ಯಕ್ಕೂ ಇದು ಅನ್ವಯವಾಗಲಿದೆ. ಇದನ್ನು ಅರಿಯದೆ ವ್ಯವಹಾರ ಜ್ಞಾನವಿಲ್ಲದೆ ಹುಂಬುತನದಿಂದ ಮಹಾರಾಷ್ಟ್ರ ಸಚಿವ ಇಲ್ಲಿ ಬಂದು ಪ್ರಚೋದನೆ ಮಾಡುವ ಕೆಲಸ ಮಾಡಿದ್ದಾರೆ ಇದು ಸಂವಿಧಾನ ವಿರೋಧಿ ನೀತಿಯಾಗಲಿದೆ.

ಯಾವುದೇ ಕಾರಣಕ್ಕೂ ಬೆಳಗಾವಿ ಬಿಟ್ಟುಕೊಡಲು ಸಾಧ್ಯವಿಲ್ಲ. ಬೆಳಗಾವಿ ಕರ್ನಾಟಕದ್ದೇ, ಕನ್ನಡಿಗರೇ ವಾಸವಾಗಿರುವ ಜಾಗ, ಅಲ್ಲಿನ ಜನ ಎಂದಿಗೂ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಹೇಳಿಲ್ಲ. ಮುಂಬೈನಲ್ಲಿ ಕುಳಿತ ಕೆಲವು ಪುಂಡರು ಈ ಕೆಲಸ ಮಾಡುತ್ತಿದ್ದಾರೆ ಎಂದು ಮಹಾರಾಷ್ಟ್ರ ವಿರುದ್ಧ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಪಕ್ಷದ ಸರ್ವೋಚ್ಚ ನಾಯಕರು: ರಾಜ್ಯ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ಪಕ್ಷದ ಸರ್ವೋಚ್ಚ ನಾಯಕರು,ಬಿಜೆಪಿಯಲ್ಲಿ ಅವರಿಗೆ ಇರುವ ಸ್ಥಾನಮಾನವನ್ನು ಯಾರೂ ಪ್ರಶ್ನೆ ಮಾಡುವಂತದ್ದಲ್ಲ. ಅನುಮಾನ ಮಾಡುವಂಥದ್ದಲ್ಲ. ಅವರು ನಮ್ಮ ಸರ್ವಶ್ರೇಷ್ಟ ನಾಯಕರು ಎಂದು ಹೇಳಿದರು.

ಇದನ್ನೂ ಓದಿ:ಒಳಮೀಸಲಾತಿ: ಕಾಂಗ್ರೆಸ್‌ನಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ- ಸಚಿವ​ ಅಶೋಕ್​

Last Updated : Dec 14, 2022, 10:37 PM IST

ABOUT THE AUTHOR

...view details