ಕರ್ನಾಟಕ

karnataka

ETV Bharat / state

ಹಾರ-ತುರಾಯಿ ತರಬೇಡಿ: ಸಿದ್ದರಾಮಯ್ಯ, ಪರಮೇಶ್ವರ್ ನಡೆ ಅನುಸರಿಸಿದ ಸಚಿವ ಖಂಡ್ರೆ - ಈಶ್ವರ ಖಂಡ್ರೆ ಮನವಿ

ಮತದಾರರು ಮತ್ತು ಜನತೆಯ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿರುವ ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ, ತಮ್ಮ ಫ್ಲೆಕ್ಸ್ ಹಾಕುವುದಾಗಲಿ, ಸನ್ಮಾನ ಮಾಡುವುದಾಗಲಿ ಮಾಡಬೇಡಿ ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.

ಅರಣ್ಯ ಸಚಿವ ಈಶ್ವರ್​ ಖಂಡ್ರೆ
ಅರಣ್ಯ ಸಚಿವ ಈಶ್ವರ್​ ಖಂಡ್ರೆ

By

Published : Jun 6, 2023, 5:03 PM IST

Updated : Jun 6, 2023, 5:18 PM IST

ಬೆಂಗಳೂರು: ನಾನು ಹಾರ-ತುರಾಯಿ ಸ್ವೀಕರಿಸುವುದಿಲ್ಲ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ ಹೇಳಿದ್ದಾರೆ. ಸಚಿವರಾದ ದಿನದಿಂದಲೂ ನಿತ್ಯ ಬೀದರ್ ಜಿಲ್ಲೆಯ ಅದರಲ್ಲೂ ಭಾಲ್ಕಿ ಕ್ಷೇತ್ರದಿಂದ ಬೆಂಗಳೂರಿನವರೆಗೆ ಸಾವಿರಾರು ಜನರು ಆಗಮಿಸಿ ಹಾರ, ತುರಾಯಿ ನೀಡಿ ಶಾಲು ಹೊದಿಸಿ ಸನ್ಮಾನ ಮಾಡುತ್ತಿದ್ದಾರೆ. ಮತದಾರರು ಮತ್ತು ಜನತೆಯ ಅಭಿಮಾನಕ್ಕೆ ಕೃತಜ್ಞತೆಗಳನ್ನು ತಿಳಿಸಿ, ವಿಶೇಷ ಮನವಿ ಮಾಡಿದ್ದಾರೆ.

ಸುಮಾರು 700 ಕಿಲೋ ಮೀಟರ್ ದೂರದಿಂದ 4-5 ಸಾವಿರ ರೂಪಾಯಿ ವೆಚ್ಚ ಮಾಡಿಕೊಂಡು ಬೆಂಗಳೂರಿಗೆ ಸಾವಿರಾರು ಜನರು ಬರುತ್ತಿದ್ದಾರೆ. ಹೀಗೆ ಬರುವವರನ್ನು ಸಚಿವ ಸಂಪುಟ ಸಭೆ, ಅಧಿಕಾರಿಗಳ ಸಭೆ-ಸಮಾರಂಭಗಳಲ್ಲಿದ್ದಾಗ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಇದು ನೋವು ತಂದಿದೆ. ಈ ಹಿನ್ನೆಲೆಯಲ್ಲಿ ಯಾರೂ ಕೂಡಾ ಬೀದರ್, ಭಾಲ್ಕಿಯಿಂದ ಬೆಂಗಳೂರಿಗೆ ಆಗಮಿಸಿ ಸನ್ಮಾನ ಮಾಡುವುದು ಬೇಡ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಜನತೆ ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಆಭಾರಿ ಎಂದಿರುವ ಸಚಿವರು, ಬೆಂಗಳೂರಿನವರೆಗೆ ಆಗಮಿಸಿ, ಶ್ರಮಪಡಬೇಡಿ. ನಾನೇ ಎರಡು ಮೂರು ದಿನದಲ್ಲಿ ಬೀದರ್ ಜಿಲ್ಲೆಗೆ ಆಗಮಿಸುತ್ತೇನೆ. ಹಂತ ಹಂತವಾಗಿ ತಾಲೂಕು, ಹೋಬಳಿ, ಪಂಚಾಯ್ತಿ ಮತ್ತು ಗ್ರಾಮ ಮಟ್ಟದಲ್ಲಿ ಪ್ರವಾಸ ಮಾಡಿ ಜನರ ಅಹವಾಲು ಆಲಿಸುತ್ತೇನೆ. ಅದಕ್ಕೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಸಿದ್ದರಾಮಯ್ಯ, ಪರಮೇಶ್ವರ್ ನಡೆ ಅನುಕರಿಸಿದ ಸಚಿವ: ರಾಜ್ಯ ಕಾಂಗ್ರೆಸ್‌ ಸರ್ಕಾರದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಜೀರೋ ಟ್ರಾಫಿಕ್ ಬೇಡ, ಅಭಿಮಾನಿಗಳು ಭೇಟಿಗೆ ಬರುವಾಗ ಹಾರ, ತುರಾಯಿಗಳನ್ನೆಲ್ಲ ಹಿಡಿದು ಬರಬೇಡಿ ಎಂದು ಹೇಳಿದ್ದರು. ಆದರೆ, ಶಿಷ್ಟಾಚಾರ ಪ್ರಕಾರ ಜೀರೊ ಟ್ರಾಫಿಕ್ ತೆಗೆಯಲು ಸಾಧ್ಯವಿಲ್ಲ ಎಂದು ಪೊಲೀಸ್​ ಇಲಾಖೆ ಹೇಳಿದ್ದು, ಅದನ್ನು ಮುಂದುವರಿಸಿದೆ. ಆದರೆ, ಹಾರ-ತುರಾಯಿ ಸ್ವೀಕರಿಸುವ ಬದಲು ತಮ್ಮ ಭೇಟಿಗೆ ಬರುವವರಿಂದ ಸಿದ್ದರಾಮಯ್ಯ ಪುಸ್ತಕ ಸ್ವೀಕರಿಸುತ್ತಿದ್ದಾರೆ.

ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸದೇ ಇರಲು ಸಿಎಂ ನಿರ್ಧರಿಸಿದ್ದೇನೆ. ಇದು ನನ್ನ ಮನೆ-ಕಚೇರಿ ಮತ್ತು ಸಾರ್ವಜನಿಕ ಸಮಾರಂಭಗಳಿಗೂ ಅನ್ವಯವಾಗಲಿದೆ. ಪ್ರೀತಿ-ಗೌರವವನ್ನು ಕಾಣಿಕೆಗಳ ಮೂಲಕವೇ ಸಲ್ಲಿಸಬೇಕೆನ್ನುವವರು ಪುಸ್ತಕಗಳನ್ನು ನೀಡಬಹುದು. ನಿಮ್ಮೆಲ್ಲರ ಪ್ರೀತಿ-ಅಭಿಮಾನ ಸದಾ ನನ್ನ ಮೇಲಿರಲಿ ಎಂದು ಮನವಿ ಮಾಡಿದ್ದ ಸಿದ್ದರಾಮಯ್ಯರ ಹಾದಿಯಲ್ಲಿ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಹ ಸಾಗಿದ್ದರು.

ಗೃಹ ಸಚಿವ ಜಿ.ಪರಮೇಶ್ವರ್ ಮನವಿ:ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭೇಟಿಗೆ ಬರುವವರು ಆಡಂಬರ ಮಾಡುವುದು ಬೇಡ ಎಂದು ಹೇಳಿದ್ದರು. ಅವರ ಹಾದಿಯನ್ನೇ ನಾನೂ ಅನುಸರಿಸುತ್ತೇನೆ. ಭೇಟಿ, ಅಭಿನಂದನೆ ಸನ್ಮಾನ ರೂಪದಲ್ಲಿ ಹಾರ, ಶಾಲು, ಪುಷ್ಪಗುಚ್ಛ, ಶಲ್ಯಗಳನ್ನು ತರಬೇಡಿ ಎಂದು ಜಿ.ಪರಮೇಶ್ವರ್ ಸಹ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಒಟ್ಟಾರೆ ರಾಜ್ಯ ಸರ್ಕಾರದ ಸಚಿವರು ಹಾರ-ತುರಾಯಿಗಳಿಂದ ದೂರವಿರುವ ನಿರ್ಧಾರಕ್ಕೆ ಬಂದಿದ್ದು, ಒಬ್ಬೊಬ್ಬರೇ ಈ ಸಾಲಿಗೆ ಸೇರ್ಪಡೆ ಆಗುತ್ತಿದ್ದಾರೆ.

ಇದನ್ನೂ ಓದಿ:ಮಂಗಳೂರಿನಲ್ಲಿ ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯೂನಲ್‌ ವಿಂಗ್ : ಗೃಹ ಸಚಿವ ಪರಮೇಶ್ವರ್ ಘೋಷಣೆ

Last Updated : Jun 6, 2023, 5:18 PM IST

ABOUT THE AUTHOR

...view details