ಕರ್ನಾಟಕ

karnataka

ಪ್ರಾಣ ಪ್ರತಿಷ್ಠಾಪನಾ ದಿನ ರಾಜ್ಯದಲ್ಲಿ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಲು ಸೂಚನೆ: ಸಚಿವ ಪರಮೇಶ್ವರ್

By ETV Bharat Karnataka Team

Published : Jan 19, 2024, 4:56 PM IST

Updated : Jan 19, 2024, 5:22 PM IST

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ದಿನ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

Etv Bharat
Etv Bharat

ಡಾ.ಜಿ.ಪರಮೇಶ್ವರ್

ಬೆಂಗಳೂರು: ಅಯೋಧ್ಯೆ ರಾಮಮಂದಿರದಲ್ಲಿ ಜ.22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ದಿನದಂದು ರಾಜ್ಯದಲ್ಲಿ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಎಲ್ಲ ಜಿಲ್ಲೆಗಳ ಎಸ್ಪಿಗಳಿಗೂ ಕಟ್ಟೆಚ್ಚರದಲ್ಲಿರುವಂತೆ ಹೇಳಿದ್ದೇವೆ. ಸೂಕ್ಷ್ಮ ವಿಚಾರವಾಗಿದ್ದು, ಎಚ್ಚರದಿಂದಿರಲು ಸೂಚಿಸಿದ್ದೇವೆ. ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಅಂದು ಪೂಜೆ ಪುರಸ್ಕಾರಗಳು ನಡೆಯಲಿವೆ. ಪೂಜೆಗೆ ಅಡ್ಡಿ ಇಲ್ಲ. ಆದರೆ ಕಾನೂನು ವಿರೋಧಿ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಹೇಳಿದ್ದೇವೆ ಎಂದರು.

ಒಳಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈ ಹಿಂದೆ ಚಿತ್ರದುರ್ಗದಲ್ಲಿ ಒಳಮೀಸಲಾತಿ ಕೊಡುವ ನಿರ್ಣಯ ಮಾಡಿದ್ದೆವು. ಸದಾಶಿವ ಆಯೋಗದ ವರದಿಯನ್ನು ಮೊದಲ ಅಧಿವೇಶನದಲ್ಲಿಡೋದಾಗಿ ಹೇಳಿದ್ದೆವು. ಬಿಜೆಪಿ ಸರ್ಕಾರ, ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ‌ ರಚಿಸಿತ್ತು. ಅದರ ಪ್ರಕಾರ ಎಸ್ಸಿ ಸಮುದಾಯದ 101 ಜಾತಿಗಳನ್ನು ನಾಲ್ಕು ಭಾಗ ಮಾಡಿ ಒಳಮೀಸಲು ವರ್ಗೀಕರಣ ಮಾಡಿದ್ರು. ಅವರು ಹಂಚಿಕೆ ಮಾಡಿದ್ದ ಒಳಮೀಸಲಾತಿ ಅವೈಜ್ಞಾನಿಕ ಅಂತ ಅವರಿಗೂ ಗೊತ್ತು. ನಾವು ಕಾನೂನು ಅಭಿಪ್ರಾಯ ಪಡೆದು ಕೇಂದ್ರಕ್ಕೆ ಸಂವಿಧಾನ ತಿದ್ದುಪಡಿ ಮಾಡಿ ಅಂತ ಕೇಂದ್ರಕ್ಕೆ ಶಿಫಾರಸು ಮಾಡಲು ತೀರ್ಮಾನ ಮಾಡಲಾಗಿದೆ. ನಾವು ಜವಾಬ್ದಾರಿಯಿಂದ ನುಣುಚಿಕೊಂಡಿಲ್ಲ. ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿದ್ರೆ ಒಳ‌ಮೀಸಲಾತಿ ಕೊಡಬಹುದು ಎಂದು ತಿಳಿಸಿದರು.

ಹಾನಗಲ್ ಗ್ಯಾಂಗ್ ರೇಪ್ ಆರೋಪ ಪ್ರಕರಣ ಖಂಡಿಸಿ ಹಾವೇರಿ ಎಸ್‌ಪಿ‌ ಕಚೇರಿ ಎದುರು ಶನಿವಾರ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವ್ರು ಪ್ರತಿಭಟನೆ ಮಾಡಲಿ, ಅದು ಅವರ ಹಕ್ಕು. ಪ್ರಕರಣದಲ್ಲಿ ನಾವು ಕ್ರಮ ವಹಿಸುತ್ತಿದ್ದೇವೆ. ಆರೋಪಿಗಳ‌ ಬಂಧನ ಮಾಡಿದ್ದೇವೆ. ಹಾವೇರಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದರು.

ಬೆಂಗಳೂರಿಗೆ ಮೋದಿ ಆಗಮನ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೋದಿಯವರಿಗೆ ಸ್ವಾಗತ ಮಾಡ್ತೇನೆ. ನಮ್ಮ ರಾಜ್ಯಕ್ಕೆ ಕೊಡುವ ಹಣ ಕೊಟ್ರೆ ಇನ್ನೂ ಹೊಗಳಬಹುದು. ನಮ್ಮ ರಾಜ್ಯಕ್ಕೆ ಜಿಎಸ್ಟಿ ಪರಿಹಾರದ ಹಣ ಬಂದಿಲ್ಲ. ಬರ ಪರಿಹಾರ ಕೊಟ್ಟಿಲ್ಲ, ವಿಶೇಷ ಅನುದಾನ ಕೊಟ್ಟಿಲ್ಲ. 36 ಸಾವಿರ ಕೋಟಿ‌ ಬರದಿಂದ ನಷ್ಟ ಆಗಿದೆ. 17 ಸಾವಿರ ಕೋಟಿ ಬರ ಪರಿಹಾರ ಕೇಳಿದ್ದೇವೆ. ಡಿಸೆಂಬರ್ 17 ಕ್ಕೆ ಸಭೆ ಮಾಡಿ ತಿಳಿಸ್ತೇವೆ ಅಂತ ಸಿಎಂಗೆ ಮೋದಿ ಹೇಳಿದ್ರು. ಇನ್ನೂ ಅವರು ಸಭೆ ಮಾಡಿಲ್ಲ. ಜಿಎಸ್​​ಟಿ ತೆರಿಗೆ ಪಾವತಿಯಲ್ಲಿ ರಾಜ್ಯ ಮುಂದಿದೆ. ನಮಗೆ ಬರ ಬಂದಿದೆ ಪರಿಹಾರ ಕೊಡಿ ಅಂದ್ರೆ ಕೊಡ್ತಿಲ್ಲ. ಹೀಗಾದ್ರೆ ಹೇಗೆ?. ಬಿಜೆಪಿಯವರು ಏನೇ ವಿಶ್ಲೇಷಣೆ ಮಾಡಬಹುದು. ಆದ್ರೆ ನಮ್ಮ ಕ್ರಮ ಸರಿಯಾಗಿದೆ. ಮೀಸಲಾತಿ, ಒಳಮೀಸಲಾತಿ ಎಲ್ಲವೂ ಸಂವಿಧಾನದ ಚೌಕಟ್ಟಿನಲ್ಲೇ ಆಗಬೇಕು ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಅಯೋಧ್ಯಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ: ಶ್ರೀ ಸಿದ್ದಲಿಂಗ ಸ್ವಾಮೀಜಿ

Last Updated : Jan 19, 2024, 5:22 PM IST

ABOUT THE AUTHOR

...view details