ಕರ್ನಾಟಕ

karnataka

By

Published : May 8, 2020, 3:29 PM IST

ETV Bharat / state

ಮುಂಗಾರು ಬಿತ್ತನೆಗೆ ಭರ್ಜರಿ ತಯಾರಿ.. ಕೇಂದ್ರ ಸಚಿವ ಡಿ ವಿ ಸದಾನಂದಗೌಡ

ದೇಶದ ಜನ ಸಂಭ್ರಮಿಸುವ ವಿಚಾರವೊಂದಿದೆ. ಬಂಪರ್ ಮುಂಗಾರು ಬೆಳೆಯ ಮುನ್ಸೂಚನೆ ಸಿಕ್ಕಿದ್ದು, ರೈತರು ಮುಂಗಾರು ಬಿತ್ತನೆಗೆ ಭರ್ಜರಿ ತಯಾರಿ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಪತ್ರಿಕಾ ‌ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Minister D. V Sadanandagowda gives good news amid corona pandemic
ಮುಂಗಾರು ಬಿತ್ತನೆಗೆ ಭರ್ಜರಿ ತಯಾರಿ: ಡಿ.ವಿ ಸದಾನಂದಗೌಡ...!

ಬೆಂಗಳೂರು/ನವದೆಹಲಿ :ಕೊರೊನಾ ಸೋಂಕಿನ ಋಣಾತ್ಮಕ ಸುದ್ದಿ ಕೇಳಿ ಕೇಳಿ ಬೇಸತ್ತಿರುವ ದೇಶದ ಜನ ಸಂಭ್ರಮಿಸುವ ವಿಚಾರವೊಂದಿದೆ. ಈ ಸಾರಿ ಮುಂಗಾರು ಬೆಳೆ ಬಂಪರ್ಎಂಬ ಮುನ್ಸೂಚನೆ ಸಿಕ್ಕಿದೆ. ರೈತರು ಮುಂಗಾರು ಬಿತ್ತನೆಗೆ ಭರ್ಜರಿ ತಯಾರಿ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಪತ್ರಿಕಾ‌ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕಳೆದ ಏಪ್ರಿಲ್‌ ತಿಂಗಳಲ್ಲಿ ರೈತರು ಖರೀದಿಸಿದ ರಸಗೊಬ್ಬರ ಪ್ರಮಾಣಲ್ಲಿ 2019ರ ಏಪ್ರಿಲ್‌ ತಿಂಗಳಿಗೆ ಹೋಲಿಸಿದರೆ ಶೇ.49ರಷ್ಟು ಭಾರೀ ಏರಿಕೆ ಕಂಡು ಬಂದಿರುವುದೇ ಇದಕ್ಕೆ ಸಾಕ್ಷಿ. ರೈತರು 2019ರ ಏಪ್ರಿಲ್‌ ತಿಂಗಳಲ್ಲಿ 11.93 ಲಕ್ಷ ಟನ್‌ ರಸಗೊಬ್ಬರ (ಯೂರಿಯಾ, ಡಿಎಪಿ ಹಾಗೂ ಕಾಂಪ್ಲೆಕ್ಸ್‌ ಸೇರಿ) ಖರೀದಿಸಿದ್ದರು. ಅದೇ ರೈತರು ಮೊನ್ನೆ ಮುಗಿದ ಏಪ್ರಿಲ್‌ನಲ್ಲಿ 17.82 ಲಕ್ಷ ಟನ್‌ ರಸಗೊಬ್ಬರ ಖರೀದಿಸಿದ್ದಾರೆ. ಉತ್ಪಾದಕರು (ಕಾರ್ಖಾನೆಗಳು) ಸಗಟು ಡೀಲರುಗಳಿಗೆ ಪೂರೈಸಿದ ರಸಗೊಬ್ಬರ ಪ್ರಮಾಣದಲ್ಲಿಯೂ ಶೇ.47ರಷ್ಟು ಹೆಚ್ಚಳವಾಗಿದೆ. ಕಾರ್ಖಾನೆಗಳು 2019ರ ಏಪ್ರಿಲ್‌ನಲ್ಲಿ ಡೀಲರುಗಳಿಗೆ 22.43 ಲಕ್ಷ ಟನ್‌ ರಸಗೊಬ್ಬರ ಪೂರೈಸಿದ್ದವು. ಅದು ಈ ಸಲ (2020 ಏಪ್ರಿಲ್) 32.9 ಲಕ್ಷ ಟನ್‌ ತಲುಪಿದೆ ಎಂದು ಸಚಿವ ಡಿವಿಎಸ್ ಮಾಹಿತಿ ನೀಡಿದ್ದಾರೆ‌

“ಮುಂಗಾರು ಬಿತ್ತನೆಗೆ ತಯಾರಿ ನಡೆದಿತ್ತು. ಸ್ವಲ್ಪವೇ ಮೈಮರೆತರೂ ಆಹಾಕಾರ ಏಳುತ್ತಿತ್ತು. ಪ್ರತಿನಿತ್ಯ 1 ಲಕ್ಷ ಟನ್‌ (10 ಲಕ್ಷ ಕ್ವಿಂಟಲ್) ಮೇಲ್ಪಟ್ಟು ರಸಗೊಬ್ಬರವನ್ನು ಕಾರ್ಖಾನೆಗಳಿಂದ, ಬಂದರುಗಳಿಂದ ಬೇರೆಬೇರೆ ರಾಜ್ಯಗಳಲ್ಲಿನ ಗೋದಾಮುಗಳಿಗೆ, ಗೂಡ್ಸ್‌ಶೆಡ್ಡುಗಳಿಗೆ ಸಾಗಣೆ ಮಾಡಬೇಕಿತ್ತು. ಸುಮಾರು ಅಷ್ಟೇ ಪ್ರಮಾಣದಲ್ಲಿ ಕಾರ್ಖಾನೆಗಳಿಗೆ ಕಚ್ಚಾವಸ್ತುಗಳ ಪೂರೈಕೆ ನಿರಂತರವಾಗಿ ನಡೆಯುತ್ತಿರುವಂತೆ ವ್ಯವಸ್ಥೆ ಮಾಡಬೇಕು. ಈ ಸರಕುಗಳ ಲೋಡಿಂಗ್‌, ಅನ್‌ಲೋಡಿಂಗ್‌ ಆಗಬೇಕು. ರೇಲ್ವೆ ಸಚಿವಾಲಯದ ಸಹಯೋಗದಿಂದ ಅಗತ್ಯವಿರುವಷ್ಟು ರೇಕ್‌ಗಳನ್ನು (ಗೂಡ್ಸ್‌ ಟ್ರೇನುಗಳು) ದೊರೆಕಿಸಿಕೊಂಡಿದ್ದಾಯಿತು. ಆದರೆ, ಕೂಲಿಗಳನ್ನು ಹೊಂದಿಸುವುದು ದೊಡ್ಡ ಸವಾಲಾಯಿತು. ಉನ್ನತಾಧಿಕಾರಿಗಳ ಕಾರ್ಯದಳವೊಂದನ್ನು ರಚಿಸಿ ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು ಹಾಗೂ ಭದ್ರತಾ ಅಧಿಕಾರಿಗಳ ಜೊತೆ ನಿರಂತರವಾಗಿ ಚರ್ಚಿಸಿ ಬಹುತೇಕ ಅಡಚಣೆಗಳನ್ನೆಲ್ಲ ನಿವಾರಿಸಲಾಯಿತು.

ಆರಂಭದ ದಿನಗಳಲ್ಲಿ ರಸಗೊಬ್ಬರ ಹೊತ್ತ ಟ್ರೇನುಗಳು ಗೂಡ್ಸ್‌ಶೆಡ್‌ಗಳಲ್ಲಿ ಕೂಲಿಗಳ ಕೊರತೆಯಿಂದ ಅನ್‌ಲೋಡ್‌ ಮಾಡಲಾಗದೆ ಮೂರ್ನಾಲ್ಕು ದಿನಗಳ ಕಾಲ ಕಾಯುವ ದುಃಸ್ಥಿತಿ ಇತ್ತು. ಆದರೆ, ಬರಬರುತ್ತ ಪರಿಸ್ಥಿತಿ ಸುಧಾರಿಸುತ್ತ ಬಂತು. ಮಾರ್ಚ್‌ 22ರಿಂದ ಏಪ್ರಿಲ್‌ 30ರವರೆಗೆ 40 ದಿನಗಳ ಅವಧಿಯಲ್ಲಿ 1251 ರೇಕ್‌ಗಳಷ್ಟು ರಸಗೊಬ್ಬರ (ಅಂದಾಜು 40 ಲಕ್ಷ ಟನ್) ದೇಶದ ಬೇರೆಬೇರೆ ಭಾಗಗಳಿಗೆ ಸಾಗಣೆಯಾಗಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಖರೀದಿಸುತ್ತಿದ್ದಾರೆ. ಇಂದು ಎಲ್ಲ ರಾಜ್ಯಗಳಲ್ಲಿಯೂ ತಿಂಗಳ ಸರಾಸರಿ ಬೇಡಿಕೆಗಿಂತ 2ರಿಂದ 3 ಪಟ್ಟು ಜಾಸ್ತಿ ರಸಗೊಬ್ಬರ ದಾಸ್ತಾನಿದೆ ಎಂದು ವಿವರ ನೀಡಿದ್ದಾರೆ.

ಸರಕು-ಸಾಗಣೆ ವ್ಯವಸ್ಥೆಯನ್ನು ತ್ವರಿತವಾಗಿ ಮರುಸ್ಥಾಪನೆ ಮಾಡಿ ಅಗತ್ಯ ಕಾರ್ಮಿಕ ವೃಂದವನ್ನು ಹೊಂದಿಸಲಾಗಿದೆ. ಇದಕ್ಕೆ ಎಲ್ಲಾ ಇಲಾಖೆಗಳು ವಿಶೇಷವಾಗಿ ರೇಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರಗಳು ಪೂರ್ಣ ಸಹಕಾರ ನೀಡಿವೆ. ಇನ್ನೊಂದು ಪ್ರಮುಖ ಕಾರಣ ನಮ್ಮ ಇಲಾಖೆಯು ಮುಂಗಾರು ಹಂಗಾಮಿನ ಸಬ್ಸಿಡಿ ಹಣವನ್ನು ಪೂರ್ತಿಯಾಗಿ ಹಣಕಾಸು ವರ್ಷದ ಆರಂಭದಲ್ಲಿಯೇ ವರ್ಗಾವಣೆ ಮಾಡಲಾಗಿದೆ. ಕಳೆದ ತಿಂಗಳು ಒಟ್ಟು 21,115.48 ಕೋಟಿ ರೂ. ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇದೊಂದು ದಾಖಲೆ. ಯಾಕೆಂದರೆ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಏಪ್ರಿಲ್‌ ತಿಂಗಳಲ್ಲಿ ಇಷ್ಟೊಂದು ಬೃಹತ್‌ ಮೊತ್ತದ ಸಬ್ಸಿಡಿ ಬಿಡುಗಡೆ ಮಾಡಲಾಯಿತು.

ಇದರಿಂದ ಸಹಜವಾಗಿಯೇ ಉತ್ಪಾದನೆ ಮತ್ತು ಸರಬರಾಜು ಸೇರಿದಂತೆ ಈ ವಲಯದ ಒಟ್ಟಾರೆ ಆರ್ಥಿಕ ಚಟುವಟಿಕೆಗೆ ಉತ್ತೇಜನ ದೊರೆಯಿತು. ಉದಾಹರಣೆಗೆ ನಮ್ಮದೇ ಇಲಾಖೆಯಡಿ ಕೆಲಸ ಮಾಡುವ ರಾಷ್ಟ್ರೀಯ ರಸಗೊಬ್ಬರ ಕಾರ್ಖಾನೆಯನ್ನು (ಎನ್. ಎಫ್. ಎಲ್.) ತೆಗೆದುಕೊಳ್ಳಿ. ಅದಕ್ಕೆ ವಾರ್ಷಿಕವಾಗಿ 37.43 ಲಕ್ಷ ಟನ್‌ ಯೂರಿಯಾ ಉತ್ಪಾದನೆಯ ಗುರಿ ನೀಡಲಾಗಿದೆ. ಅಂದರೆ ತಿಂಗಳಿಗೆ ಸರಾಸರಿ 3.12 ಲಕ್ಷ ಟನ್‌ ಉತ್ಪಾದನೆ ಮಾಡಬೇಕು. ಆದರೆ ಸಕಾಲದಲ್ಲಿ ಹಣ ಲಭ್ಯವಾದ್ದರಿಂದ ಎನ್. ಎಫ್. ಎಲ್. ಕಳೆದ ಏಪ್ರಿಲ್‌ ತಿಂಗಳಲ್ಲಿ 3.22 ಲಕ್ಷ ಟನ್‌ ಯೂರಿಯಾ ಉತ್ಪಾದನೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.

“ಲಾಕ್‌ಡೌನ್ ಅಡಚಣೆಯ ಮಧ್ಯೆಯೇ ನಾವು ಔಷಧ ಉತ್ಪಾದನೆಯಲ್ಲೂ ಗುರುತರ ಸಾಧನೆ ಮಾಡಿದ್ದೇವೆ. ಜಗತ್ತಿನ ಎಲ್ಲ ದೇಶಗಳಿಂದ ಬೇಡಿಕೆಯಲ್ಲಿರುವ ಹೈಡ್ರಾಕ್ಸಿಕ್ಲೊರೊಕ್ವಿನ್‌ ಮಾತ್ರೆ ಉತ್ಪಾದನೆ ದ್ವಿಗುಣಗೊಳಿಸಲಾಗಿದೆ. ಕಳೆದ ಏಪ್ರಿಲ್‌ ತಿಂಗಳಲ್ಲಿ 30 ಕೋಟಿ ಮಾತ್ರೆಗಳನ್ನು ಉತ್ಪಾದಿಸಿದ್ದೇವೆ. ಇದು ಮಾಮೂಲಿ ಉತ್ಪಾದನೆಗಿಂತ ಎರಡುಪಟ್ಟು ಜಾಸ್ತಿ. 15 ಕೋಟಿ ಮಾತ್ರೆಗಳನ್ನು ದೇಶದ ಆಂತರಿಕ ಉಪಯೋಗಕ್ಕೆ ಇಟ್ಟುಕೊಂಡು ಉಳಿದದ್ದನ್ನು (15 ಕೋಟಿ) ರಫ್ತು ಮಾಡಲು ಅವಕಾಶ ನೀಡಲಾಗಿದೆ. ಪೆರಾಸೆಟೊಮೊಲ್‌ ಮಾತ್ರೆ ಉತ್ಪಾದನೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ಅದೇ ರೀತಿ ಅಜಿತ್ರೋಮೈಸಿನ್‌ (Azithromycin) ಉತ್ಪಾದನೆಯನ್ನೂ ಹೆಚ್ಚಿಸಲಾಗಿದೆ. ಏಪ್ರಿಲ್‌ ತಿಂಗಳಲ್ಲಿ 500 mgಯ 15 ಕೋಟಿ ಅಜಿತ್ರೋಮೈಸಿನ್‌ ಮಾತ್ರೆ ಉತ್ಪಾದನೆಗೊಂಡಿದೆ ಎಂದಿದ್ದಾರೆ.”

“ಔಷಧ ಕೊರತೆ, ಹೆಚ್ಚುವರಿ ದರ ವಸೂಲಿ ಇವೇ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಏನಾದರೂ ದೂರುಗಳಿದ್ದರೆ ಅದನ್ನು ಬಗೆಹರಿಸಲು ದಿನದ 24 ತಾಸೂ ಕಾರ್ಯನಿರ್ವಹಿಸುವ ನಿಯಂತ್ರಣ ಕೇಂದ್ರ ಸ್ಥಾಪಿಸಿದ್ದೇವೆ. ಸಾರ್ವಜನಿಕರು, ಅಂಗಡಿಕಾರರು ದೂರವಾಣಿ ಸಂಖ್ಯೆ 1800111255 ಕ್ಕೆ ಉಚಿತ ಕರೆ ಮಾಡಬಹುದು. ಇನ್ನು, ಲಾಕ್‌ಡೌನ್ ಅಡಚಣೆಯಿಂದ ಅಸ್ತವ್ಯಸ್ತಗೊಂಡಿದ್ದ ಔಷಧ ಸರಬರಾಜು ವ್ಯವಸ್ಥೆಯನ್ನು ಬಹುತೇಕ ಮರುಸ್ಥಾಪಿಸಿದ್ದೇವೆ.”
“ಲಾಕ್‌ಡೌನ್ನಿನ ಆರಂಭದಲ್ಲಿ ಸರಕು ಸಾಗಣೆ ಹಾಗೂ ಕೊರಿಯರ್‌ ಸೇವೆಗಳು ಬಂದಾಗಿದ್ದರಿಂದ ನಮ್ಮ ಜನೌಷಧ ಕೇಂದ್ರಗಳಿಗೆ ವಿಶೇಷವಾಗಿ ಒಳನಾಡಿನ ಕೇಂದ್ರಗಳಿಗೆ ಔಷಧಗಳ ಸರಬರಾಜು ವ್ಯತ್ಯಯಗೊಂಡಿತ್ತು. ಆದರೆ ಎರಡನೇ ವಾರದ ವೇಳೆಗೆ ಬದಲಿ ವ್ಯವಸ್ಥೆಯ ಮೂಲಕ ಸರಬರಾಜನ್ನು ಬಹುತೇಕ ಸರಿಪಡಿಸಲಾಯಿತು. ಈಗ ಇಂಡಿಯಾ ಪೋಸ್ಟ್‌ ಜೊತೆಗೂ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಈಚಿನ ವಾರಗಳಲ್ಲಿ ಜನೌಷಧ ಕೇಂದ್ರಗಳಿಗೆ ಸುಮಾರು 1.8 ಕೋಟಿ ಹೈಡ್ರೊಕ್ಸಿಕ್ಲೋರೋಕ್ವಿನ್‌ ಮಾತ್ರೆಗಳನ್ನು ಸರಬರಾಜು ಮಾಡಲಾಗಿದೆ”ಎಂದಿದ್ದಾರೆ.

“ಸದ್ಯ 745 ಮಾದರಿಯ ಔಷಧಗಳು ಹಾಗೂ 108 ನಮೂನೆಯ ಶಸ್ತ್ರಚಿಕಿತ್ಸಾ ಉಪಕರಣಗಳು ಜನೌಷಧಿ ಕೇಂದ್ರಗಳಲ್ಲಿ ಲಭ್ಯ ಇವೆ. ನಿಜ ಹೇಳಬೇಕೆಂದರೆ ನಮ್ಮ ಜನೌಷಧಿ ಕೇಂದ್ರಗಳು ಲಾಕ್‌ಡೌನ್‌ ಅವಧಿಯಲ್ಲಿ ದಾಖಲೆ ವಹಿವಾಟು ನಡೆಸಿವೆ. ಏಪ್ರಿಲ್‌ ತಿಂಗಳಲ್ಲಿ 52 ಕೋಟಿ ರೂಪಾಯಿ ಔಷಧ ಮಾರಾಟವಾಗಿದೆ. ಇದು ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಸುಮಾರು ಎರಡೂವರೆ ಪಟ್ಟು ಜಾಸ್ತಿ.ಒಟ್ಟಿನಲ್ಲಿ, ಇಲ್ಲಿತನಕ ಎಲ್ಲವೂ ಸುಸೂತ್ರವಾಗಿ ನಡೆದಿವೆ. ಕೊರೊನೋತ್ತರ ಅವಧಿಯಲ್ಲಿ ಆಗಬೇಕಾದ ಕೆಲಸಗಳ ಬಗ್ಗೆಯೂ ಯೋಚಿಸಿದ್ದೇವೆ. ಅದು ಯಾವುದೇ ಆಟವಿರಲಿ. ಆಟಗಾರರು ಉತ್ತಮವಾಗಿದ್ದರಷ್ಟೇ ಸಾಲದು. ಒಬ್ಬ ಉತ್ತಮ ನಾಯಕ ಬೇಕು. ನಮಗೆ ಅಂತಹ ನಾಯಕ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ನಾವೆಲ್ಲ ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಅವರ ನಾಯಕತ್ವದಲ್ಲಿ ದೇಶವು ಇದುವರೆಗೂ ಕೊರೊನಾ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಿದೆ ಎಂದು ಸರ್ಕಾರದ ಕಾರ್ಯವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಜೈವಿಕ ಯುದ್ಧ ಇನ್ನೂ ಮುಗಿದಿಲ್ಲ. ನಾವ್ಯಾರೂ ಮೈಮರೆಯುವುದು ಬೇಡ. ಇನ್ನಷ್ಟು ಕಾಲ ಖಡ್ಡಾಯವಾಗಿ ಮುಖಗವಸು ಧರಿಸೋಣ. ಸೋಂಕು ನಿವಾರಕ ದ್ರಾವಣ ಬಳಸೋಣ. ನಾಲ್ಕುಜನ ಸೇರುವ ಸ್ಥಳಗಳಲ್ಲಿ ಕನಿಷ್ಠ ನಾಲ್ಕು ಅಡಿ ಭೌತಿಕ ಅಂತರವನ್ನು ಕಾಪಾಡಿಕೊಳ್ಳುವ ಸಂಕಲ್ಪ ಮಾಡೋಣ. ಜವಾಬ್ಧಾರಿಯುತ ನಾಗರಿಕರಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಗಾಗ ನೀಡುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ದೇಶ ಈ ಯುದ್ಧವನ್ನು ಗೆಲ್ಲಬೇಕಾದರೆ ನಿಮ್ಮೆಲ್ಲರ ಸಂಪೂರ್ಣ ಸಹಕಾರ, ಸಹಭಾಗಿತ್ವ ಬೇಕು. ನಮಗೆ ಸಂಪೂರ್ಣ ವಿಶ್ವಾಸವಿದೆ. ಎಲ್ಲವೂ ಶುಭಾಂತ್ಯವಾಗಲಿದೆ ಎಂದು ಸಚಿವ ಸದಾನಂದ ಗೌಡ ಅವರು ಹೇಳಿದ್ದಾರೆ.

ABOUT THE AUTHOR

...view details