ಕರ್ನಾಟಕ

karnataka

By

Published : Mar 2, 2022, 4:39 PM IST

ETV Bharat / state

'ನವೀನ್‌ ಸಾವಿನ ನೆಪದಲ್ಲಿ ಜಾತಿ, ಮೀಸಲಾತಿ ವ್ಯವಸ್ಥೆ ಬಗ್ಗೆ ಮಾತನಾಡುವುದು ಅನುಚಿತ'

ನವೀನ್ ಅಕಾಲಿಕ ನಿಧನ ನೋವಿನ ಸಂಗತಿ. ಈ ದುಃಖದ ಸಮಯದಲ್ಲಿ ಸರ್ಕಾರವು ಅವರ ಕುಟುಂಬದೊಂದಿಗೆ ನಿಲ್ಲಲಿದೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ

ಬೆಂಗಳೂರು: ಉಕ್ರೇನ್​​ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಹಾವೇರಿಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿರುವುದು ತುಂಬಾ ನೋವಿನ ಸಂಗತಿ. ಈ ದುಃಖದ ಸಮಯದಲ್ಲಿ ಇದನ್ನೇ ನೆಪವಾಗಿಟ್ಟುಕೊಂಡು ಜಾತಿ ವ್ಯವಸ್ಥೆ ಮತ್ತು ಮೀಸಲಾತಿ ಬಗ್ಗೆ ಮಾತನಾಡುವುದು ಅನುಚಿತವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.


ನಗರದಲ್ಲಿ ಮಾತನಾಡಿದ ಅವರು, ನವೀನ್ ಸಾವಿನ ನೆಪವಾಗಿಟ್ಟುಕೊಂಡು ಜಾತಿ ವ್ಯವಸ್ಥೆ ಮತ್ತು ಮೀಸಲಾತಿ ಬಗ್ಗೆ ಮಾತನಾಡುವುದು ಅನುಚಿತವಾಗುತ್ತದೆ. ಸರ್ಕಾರವು ಕಡುಬಡವರು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವವರ ಬಗ್ಗೆಯೂ ಚಿಂತಿಸಬೇಕಾಗುತ್ತದೆ. ಒಂದು ಪ್ರಕರಣವನ್ನು ಇಟ್ಟುಕೊಂಡು ವ್ಯವಸ್ಥೆಯ ಬಗ್ಗೆ ಷರಾ ಬರೆಯುವುದು ಸರಿಯಲ್ಲ ಎಂದರು.

ಇಡೀ ದೇಶದಲ್ಲೇ ನಮ್ಮ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವೈದ್ಯಕೀಯ ಕಾಲೇಜುಗಳಲ್ಲಿ ಪರಿಶಿಷ್ಟರಿಗೆ ಉಚಿತವಾಗಿ ಸೀಟು ‌ನೀಡಲಾಗುತ್ತಿದೆ. ಶೇ.40ರಷ್ಟು ಸೀಟುಗಳನ್ನು ಪ್ರತಿಭಾವಂತ ಬಡವರಿಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ. ಇದನ್ನು ದೇಶಾದ್ಯಂತ ಶೇ. 60ಕ್ಕೆ ಏರಿಸಬೇಕೆನ್ನುವುದು ಪ್ರಧಾನಿ ಮೋದಿಯವರ ಹಂಬಲ. ಇದು ಮುಂಬರುವ ವರ್ಷಗಳಲ್ಲಿ ಸಾಧ್ಯವಾಗಬಹುದು ಎಂದು ಹೇಳಿದರು.

'ನೀಟ್ ಮೂಲಕ ವೈದ್ಯಕೀಯ ಶಿಕ್ಷಣ ಸುಧಾರಣೆ':ನೀಟ್ ಪರೀಕ್ಷೆಯ ಮೂಲಕ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಇದರಿಂದ ಬಡ ಕುಟುಂಬದ ಮಕ್ಕಳೂ ವೈದ್ಯರಾಗಬಹುದು. ಇದನ್ನು ವಿರೋಧಿಸುವವರು ಧನದಾಹಿಗಳು ಮತ್ತು ದ್ರೋಹಿಗಳು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

'2 ಸಾವಿರ ಮಂದಿಯನ್ನು ಕರೆತರಲಾಗಿದೆ':ಉಕ್ರೇನ್​​ನಲ್ಲಿದ್ದ 20 ಸಾವಿರ ಭಾರತೀಯರ ಪೈಕಿ ಈಗಾಗಲೇ 2 ಸಾವಿರ ಮಂದಿಯನ್ನು ಕರೆತರಲಾಗಿದೆ. ಉಳಿದವರನ್ನು ಕೂಡ ಸದ್ಯದಲ್ಲೇ ಕರೆದುಕೊಂಡು ಬರಲಾಗುವುದು. ಈ ಸಂಬಂಧ ಉಕ್ರೇನ್, ರಷ್ಯಾ, ಪೋಲೆಂಡ್, ರುಮೇನಿಯಾ ಮುಂತಾದ ದೇಶಗಳೊಂದಿಗೆ ಕೇಂದ್ರ ಸರಕಾರವು ಈಗಾಗಲೇ ಮಾತುಕತೆ ನಡೆಸುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ಇವು ಎಲ್ಲ ಕಾಲದಲ್ಲೂ ಇರುತ್ತವೆ ಎಂದು ಅಶ್ವತ್ಥನಾರಾಯಣ ತಿರುಗೇಟು ಕೊಟ್ಟರು.

For All Latest Updates

TAGGED:

ABOUT THE AUTHOR

...view details