ಬೆಂಗಳೂರು: ನಗರದಲ್ಲಿ ಬೀಡುಬಿಟ್ಟಿದ್ದ ಜಿಹಾದಿ ಗ್ಯಾಂಗ್ನ ಪ್ರಮುಖ ಆರೋಪಿ ಮೆಹಬೂಬ್ ಪಾಷನನ್ನ ಸಿಸಿಬಿ ಅಧಿಕಾರಿಗಳು ಖೆಡ್ಡಾಕ್ಕೆ ಕೆಡವಿದ್ದಾರೆ. ಈತ ತನಿಖೆ ವೇಳೆ ಕೆಲ ಭಯಾನಕ ಮಾಹಿತಿಗಳನ್ನು ಬಾಯಿಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈತ ರಾಜ್ಯದಲ್ಲಿ ಹಾಗೂ ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ರೆಡಿಯಾಗಿದ್ದನಂತೆ. ಇನ್ನು ಆರು ತಿಂಗಳಲ್ಲಿ ವಿಧ್ವಂಸಕ ಕೃತ್ಯವೆಸಗಲು ಎಲ್ಲಾ ರೀತಿಯ ವಸ್ತುಗಳನ್ನು ತಯಾರಿ ಮಾಡಿಕೊಂಡಿರುವ ವಿಚಾರ ಬಾಯಿಬಿಟ್ಟಿದ್ದಾನೆ.
ಅಲ್ಪಸಂಖ್ಯಾತ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಎಕ್ಸ್ಪರ್ಟ್ಗಳನ್ನು ಗುರುತಿಸಿದ ನಂತರ ಜಿಹಾದಿ ಗ್ಯಾಂಗ್ಗೆ ಸೇರಿಸಿದ್ದನಂತೆ. ಇನ್ನು ಸಿಲಿಕಾನ್ ಸಿಟಿಯನ್ನ ಯಾವ ರೀತಿ ಉಡೀಸ್ ಮಾಡಬೇಕೆಂದು ತರಬೇತಿ ನೀಡುತ್ತಿದ್ದನಂತೆ.
ಹಿನ್ನೆಲೆ:
ಬೆಂಗಳೂರಿನ ಸದ್ದುಗುಂಟೆಪಾಳ್ಯದಲ್ಲಿ ವಾಸವಾಗಿದ್ದ ಮೆಹಾಬೂಬ್ ಪಾಷ, ಬೆಂಗಳೂರು ಜಿಹಾದಿ ಗ್ಯಾಂಗ್ನ ಕಮಾಂಡರ್ ಆಗಿದ್ದ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಜಿಹಾದಿ ಗ್ಯಾಂಗ್ ಸೃಷ್ಟಿ ಮಾಡಲು ಸದಸ್ಯರ ನೇಮಕ, ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸಿ ಬೆಂಗಳೂರು ಹೊರವಲಯ, ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ತರಬೇತಿ ನೀಡುತ್ತಿದ್ದನಂತೆ.
ಇಷ್ಟು ಮಾತ್ರವಲ್ಲದೆ, ಬನ್ನೇರುಘಟ್ಟ ರಸ್ತೆಯಲ್ಲಿ ಅಲ್ ಹಿಂದ್ ಟ್ರಸ್ಟ್ ಸ್ಥಾಪಿಸಿ ಜಿಹಾದಿ ಸಂಘಟನೆಗೆ ಮುಂದಾಗಿದ್ದ. ಸದ್ಯ ಸಿಸಿಬಿ ವಶದಲ್ಲಿದ್ದು, ಬಹಳಷ್ಟು ಪ್ರಮುಖ ಮಾಹಿತಿಯನ್ನ ತನಿಖಾಧಿಕಾರಿಗಳ ಎದುರು ಬಾಯಿಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.