ಕರ್ನಾಟಕ

karnataka

By

Published : Mar 27, 2020, 9:49 AM IST

ETV Bharat / state

ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳ ಜೊತೆ ಲಿಂಬಾವಳಿ ಸಭೆ

ಕೊರೊನಾ ಕೆಂಗಣ್ಣು ಎಲ್ಲೆಡೆ ಬಿದ್ದಿದ್ದು ಅಗತ್ಯ ಮುಂಜಾಗ್ರತಾ ಕ್ರಮಗಳು ಹಾಗೂ ಕ್ಷೇತ್ರದಲ್ಲಿರುವ ಪರಿಸ್ಥಿತಿಗಳ ಕುರಿತು ಮಾರತಹಳ್ಳಿ ಕಛೇರಿಯಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಆರಕ್ಷಕರೊಂದಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಸಭೆ ನಡೆಸಿದರು.

Meeting on precautionary measures by Aravinda limbavali
ಕೊರೊನಾ ಹರಡುವಿಕೆ: ಮುಂಜಾಗ್ರತಾ ಕ್ರಮಗಳ ಕುರಿತು ಸಭೆ ನಡೆಸಿದ ಮಾಜಿ ಸಚಿವ ಲಿಂಬಾವಳಿ

ಬೆಂಗಳೂರು: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮಗಳು ಹಾಗೂ ಕ್ಷೇತ್ರದಲ್ಲಿರುವ ಪರಿಸ್ಥಿತಿಗಳ ಕುರಿತು ಮಾರತಹಳ್ಳಿ ಕಛೇರಿಯಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಆರಕ್ಷಕರೊಂದಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಸಭೆ ನಡೆಸಿದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ

ಸಭೆಯಲ್ಲಿ ಚರ್ಚಿಸಿದ ವಿಷಯಗಳು:

1. 11,000 ಕಡುಬಡ ಕುಟುಂಬಗಳಿಗೆ ಆಹಾರ ದಿನಸಿ ಸಾಮಾಗ್ರಿಗಳಾದ 5 ಕೆ.ಜಿ ಅಕ್ಕಿ, 1 ಕೆ.ಜಿ ಎಣ್ಣೆ, 1 ಕೆ.ಜಿ ಬೇಳೆ, 1 ಕೆ.ಜಿ. ಈರುಳ್ಳಿ, ಮಸಾಲೆ ಸಾಮಗ್ರಿಗಳು ಹಾಗೂ ಇನ್ನಿತರ ದಿನಸಿ ವಸ್ತುಗಳನ್ನು ಒಂದು ಕುಟುಂಬಕ್ಕೆ ಒಂದು ವಾರದಲ್ಲಿ ಒಂದು ಬಾರಿಯಂತೆ 3 ವಾರ ವಿತರಿಸಲಾಗುವುದು. ಈ ಕಾರ್ಯಕ್ಕೆ ಮಾಜಿ ಸಚಿವ ಲಿಂಬಾವಳಿ 25 ಲಕ್ಷ ರೂ. ದೇಣಿಗೆ ನೀಡಿದ್ದು, ಉಳಿದ ಹಣವನ್ನು ಕ್ಷೇತ್ರದ ಮುಖಂಡರು ಹಾಗೂ ದಾನಿಗಳೊಂದಿಗೆ ಸಂಗ್ರಹಿಸಿ ವಿತರಿಸಲಾಗುವುದು. ದಾನ ಮಾಡಲು ಇಚ್ಛಿಸುವವರು ಶಾಸಕರ ಕಚೇರಿ ಮಾರತಹಳ್ಳಿಗೆ ಸಂಪರ್ಕಿಸಬಹುದು.

2. ಪಿ.ಜಿ.ಗಳಲ್ಲಿ ಉಳಿದುಕೊಂಡಿರುವವರಿಗೆ ಊಟ ವ್ಯವಸ್ಥೆ ಮಾಡಬೇಕೆಂದು ಪಿ.ಜಿ ಮಾಲೀಕರಿಗೆ ಮನವಿ ಮಾಡಲಾಗಿದೆ. ಹಾಗೂ ಖಾಲಿ ಇರುವ ರೂಮ್​ಗಳಿಗೆ ಒಂದು ರೂಮ್​ಗೆ ಒಬ್ಬರಂತೆ ಪ್ರತ್ಯೇಕವಾಗಿರಿಸುವಂತೆ ಕೋರಿಕೊಳ್ಳಲಾಗಿದೆ. ಸ್ಥಳೀಯ ಮುಖಂಡರು ಪಿ.ಜಿ ಮಾಲೀಕರಿಗೆ ಮನವಿ ಮಾಡಬೇಕಾಗಿ ಸೂಚಿಸಲಾಗಿದೆ.

3. ಬಿಗ್ ಬಾಸ್ಕೆಟ್, ಬಿಗ್ ಬಜಾರ್, ಅಮೇಜಾನ್​ನಂತಹ ಆನ್ ಲೈನ್ ಸೇವೆ ಒದಗಿಸುವ ಕಂಪನಿಗಳ ಡೆಲಿವರಿ ಬಾಯ್​ಗಳಿಗೆ ಪಾಸ್ ವಿತರಿಸಿ ಡೆಲಿವರಿ ಮಾಡಲು ಅನುವು ಮಾಡಿಕೊಡಲು ಡಿ.ಸಿ.ಪಿ ಅವರನ್ನು ಕೋರಿದ್ದು, ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.

4. ವಿದೇಶದಿಂದ ಬಂದು ಗೃಹಬಂಧನದಲ್ಲಿರುವ ವ್ಯಕ್ತಿಗಳ ತಪಾಸಣೆ ಮಾಡುವುದು ಹಾಗೂ 14 ದಿನ ಕಳೆದ ನಂತರವೂ ತಪಾಸಣೆ ಮಾಡಬೇಕು. ಸ್ಥಳೀಯರು ಕೂಡಾ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಆರೋಗ್ಯ ಅಧಿಕಾರಿಗಳ ಜೊತೆ ಸಂಪರ್ಕವನ್ನು ಸಾಧಿಸುವುದು .ಅಧಿಕಾರಿಗಳನ್ನು ಸಂಪರ್ಕಿಸಲು 4 ದೂರವಾಣಿ ಸಂಖ್ಯೆಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

5. ಕ್ಷೇತ್ರದ ಹಲವು ಭಾಗಗಳಲ್ಲಿ ತರಕಾರಿ ಮಾರಾಟಕ್ಕೆ ಸ್ಥಳ ಗುರುತಿಸಿ, ಮಾರಾಟಕ್ಕೆ ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿ ಖರೀದಿಸಲು ಹಾಗೂ ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಲು ಅವಕಾಶ ಕಲ್ಪಿಸಲಾಗುವುದು.

6. ಸ್ವಯಂ ಸೇವಕರಾಗಿರುವವರು ಪ್ರತಿನಿತ್ಯ ತಪಾಸಣೆಗೊಳಪಡಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಜರ್ ಹೊಂದಿರಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಸಭೆಯಲ್ಲಿ ಮಹಾನಗರ ಪಾಲಿಕೆಯ ಎಲ್ಲಾ ಸದಸ್ಯರು, ಡಿಸಿಪಿ ಅನುಚೇತ್, ಮಹದೇವಪುರ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ, ತಾಲೂಕು ಆರೋಗ್ಯಾಧಿಕಾರಿಗಳು, ಬಿಬಿಎಂಪಿಯ ಆರೋಗ್ಯ ಅಧಿಕಾರಿಗಳು, ಎಸಿಪಿಗಳಾದ ಶಿವಕುಮಾರ್, ಪಂಪಾಪತಿ, ಮನೋಜ್, ತಾಲೂಕು ಪಂಚಾಯತ್​ನ ಇಇಒ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details