ಕರ್ನಾಟಕ

karnataka

ಮಾಧ್ಯಮಗಳು ಸಮಾಜದ ತಪ್ಪುಗಳನ್ನು ಪ್ರತಿಬಿಂಬಿಸಲು ಧೈರ್ಯ ಮಾಡಬೇಕು: ನ್ಯಾಯಮೂರ್ತಿ ಶ್ರೀಕೃಷ್ಣ

By

Published : Apr 8, 2023, 8:41 PM IST

ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ಅವರು ಹಿರಿಯ ಪತ್ರಕರ್ತೆ ನಾಗಮಣಿ ಎಸ್​.ರಾವ್​ ಸ್ಥಾಪಿಸಿರುವ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

media-should-dare-to-reflect-society-wrongs-justice-srikrishna
ಮಾಧ್ಯಮಗಳು ಸಮಾಜದ ತಪ್ಪುಗಳನ್ನು ಪ್ರತಿಬಿಂಬಿಸಲು ಧೈರ್ಯ ಮಾಡಬೇಕು: ನ್ಯಾಯಮೂರ್ತಿ ಶ್ರೀಕೃಷ್ಣ

ಬೆಂಗಳೂರು:ಮಾಧ್ಯಮಗಳು ಸರ್ಕಾರಗಳ ತಪ್ಪುಗಳನ್ನು ತೋರಿಸಲು ಹಿಂಜರಿದಲ್ಲಿ ನಿರಂಕುಶಾಧಿಕಾರಕ್ಕೆ ಕಾರಣವಾಗಲಿದ್ದು, ಸಮಾಜದ ಪ್ರಗತಿಗೆ ಹಾನಿಯಾಗಲಿದೆ ಎಂದು ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಪತ್ರಕರ್ತೆಯರ ಸಂಘ ಶನಿವಾರ ನಗರದ ಪ್ರೆಸ್​ಕ್ಲಬ್​ನಲ್ಲಿ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತೆ ನಾಗಮಣಿ ಎಸ್​.ರಾವ್​ ಸ್ಥಾಪಿಸಿರುವ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಸರ್ಕಾರ ಮತ್ತು ಸಮಾಜದ ತಪ್ಪುಗಳನ್ನು ಪ್ರತಿಬಿಂಬಿಸಲು ಧೈರ್ಯಶಾಲಿಯಾದಲ್ಲಿ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.

ಅಲ್ಲದೆ, ಮಾಧ್ಯಮಗಳ ಒಲವು ಸದಾ ದೇಶದ ಪ್ರಜೆಗಳ ಕುರಿತಾಗಿರಬೇಕು. ಅದಕ್ಕೆ ಬದಲಾಗಿ ತಾತ್ಕಾಲಿಕವಾಗಿ ಅಧಿಕಾರದಲ್ಲಿರುವವರ ಕುರಿತಲ್ಲ. ಈ ಕರ್ತವ್ಯ ಪ್ರಜ್ಞೆ ಅಳವಡಿಸಿಕೊಂಡಲ್ಲಿ ಮಾತ್ರ ಜನ ಸಾಮಾನ್ಯರ ಮನ್ನಣೆಗೆ ಪಾತ್ರವಾಗಲಿವೆ. ಮಾಧ್ಯಮಗಳು ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಪ್ರಚಾರ ಮಾಡದೆ, ಸಮಾಜದಲ್ಲಿರುವ ಕುಂದುಕೊರತೆಗಳತ್ತ ಗಮನ ಹರಿಸಬೇಕು. ಅಲ್ಲದೆ, ದಿಟ್ಟತನದಿಂದ ಸತ್ಯ ಪರಿಸ್ಥಿತಿಯನ್ನು ತೋರಿಸುವಂತಾಗಬೇಕು ಎಂದು ಅವರು ವಿವರಿಸಿದರು.

ಮಾಧ್ಯಮಗಳು ಸಂವೇದನಾಶೀಲರಾಗಿರಬೇಕು:ರಾಷ್ಟ್ರದ ಸಂರಕ್ಷಣೆ ಹಾಗು ಇತರೆ ರಾಷ್ಟ್ರಗಳೊಡನೆ ಹೊಂದಿರುವ ಸ್ನೇಹ ಸಂಬಂಧಗಳ ವಿಚಾರದಲ್ಲಿ ಮಾಧ್ಯಮಗಳು ಅತ್ಯಂತ ಸಂವೇದನಾಶೀಲರಾಗಿ ಕಾರ್ಯನಿರ್ವಹಿಸಬೇಕು. ಅತ್ಯುತ್ಸಾಹದಿಂದ ಅಂತಹ ವಿಚಾರಗಳನ್ನು ವಿಶ್ಲೇಷಣೆ ಮಾಡುವುದರಿಂದ ರಾಷ್ಟ್ರದ ಹಿತಕ್ಕೆ ಧಕ್ಕೆಯಾಗುವ ಸಂದರ್ಭಗಳು ಎದುರಾಗಲಿವೆ. ಪ್ರತಿಯೊಬ್ಬ ಪತ್ರಕರ್ತನು ತನಗಿರುವ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು. ಯಾವುದೇ ಸುದ್ದಿ ಪ್ರಕಟ ಮಾಡುವ ಸಂದರ್ಭದಲ್ಲಿ ಜನಸಾಮಾನ್ಯರ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಭೀರಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ:ಅಮುಲ್ ರಾಜ್ಯ ಪ್ರವೇಶ: ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಅಲೆ.. ಕೆಎಂಎಫ್​ ವ್ಯವಸ್ಥಾಪಕ ನಿರ್ದೇಶಕರು ಹೇಳುವುದೇನು?

ನ್ಯಾಯಾಂಗ ಮತ್ತು ಪತ್ರಿಕೋದ್ಯಮ ಮೂಲ ಉದ್ದೇಶ ಪ್ರಜಾಪ್ರಭುತ್ವದ ರಕ್ಷಣೆ: ನ್ಯಾಯಾಂಗ ಮತ್ತು ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಅಡಿಗಲ್ಲುಗಳಾಗಿವೆ. ಇವೆರಡರಲ್ಲಿ ಯಾವುದಾದರೂ ದುರ್ಬಲವಾದರೆ ಪ್ರಜಾಪ್ರಭುತ್ವವೂ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ಕ್ಷೀಣಿಸಲು ಕಾರಣವಾಗಲಿದೆ. ಇವೆರಡರ ಮೂಲ ಉದ್ದೇಶ ಪ್ರಜಾಪ್ರಭುತ್ವದ ರಕ್ಷಣೆ ಮಾಡುವುದಾಗಿದೆ. ಈ ಎರಡೂ ಸಂಸ್ಥೆಗಳ ನಡುವೆ ಕೆಲ ಸಂದರ್ಭಗಳಲ್ಲಿ ಪರಸ್ಪರ ಸಂಘರ್ಷಿಸಿದಂತೆ ಕಂಡರೂ ಅವುಗಳ ಮೂಲ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಸಾಮರಸ್ಯದಿಂದಿರಬೇಕಾಗುತ್ತದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ:ನಂದಿನಿ ಕನ್ನಡಿಗರ ಹೆಮ್ಮೆ, ಕೆಎಮ್ಎ​ಫ್ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ: ಡಾ. ಮಹೇಶ ಜೋಶಿ

ಕಾರ್ಯಕ್ರಮದಲ್ಲಿ ನಾಗಮಣಿ ಎಸ್. ರಾವ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕಾನಾಥ್, ಹಿರಿಯ ಪತ್ರಕರ್ತ ವಸಂತ್ ನಾಡಿಗೇರ್, ಜಿ.ಎನ್ ಮೋಹನ್, ಡಾ. ವಿಜಯಮ್ಮ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷರಾದ ಪದ್ಮಾ ಶಿವಮೊಗ್ಗ, ಕಾರ್ಯದರ್ಶಿ ಮಂಜುಶ್ರೀ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಜೆಡಿಎಸ್ ಸರ್ಕಾರ ಬಂದ್ರೆ 5 ಸಿಲಿಂಡರ್​ ಉಚಿತ, ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕಲ್ ಮೊಪೆಡ್ ಬೈಕ್​ : ಹೆಚ್​ಡಿಕೆ ಘೋಷಣೆ

ABOUT THE AUTHOR

...view details