ಕರ್ನಾಟಕ

karnataka

By

Published : Aug 22, 2022, 5:27 PM IST

ETV Bharat / state

ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾದ ಎಂಡಿ ಲಕ್ಷ್ಮೀ ನಾರಾಯಣ

ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಕಾಂಗ್ರೆಸ್​ ಮುಖಂಡ ಎಂಡಿ ಲಕ್ಷ್ಮೀ ನಾರಾಯಣ ಮುಂದಾಗಿದ್ದಾರೆ. ಈ ಸಂಬಂಧ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜೊತೆ ಸಭೆ ನಡೆಸಿದ್ದಾರೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾದ ಎಂಡಿ ಲಕ್ಷ್ಮೀ ನಾರಾಯಣ
ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾದ ಎಂಡಿ ಲಕ್ಷ್ಮೀ ನಾರಾಯಣ

ಬೆಂಗಳೂರು: ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಲು ತೀರ್ಮಾನಿಸಿರುವ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಎಂ ಡಿ ಲಕ್ಷ್ಮೀ ನಾರಾಯಣ ಇಂದು ತಮ್ಮ ಅಭಿಮಾನಿಗಳ ಜೊತೆ ಸಭೆ ನಡೆಸಿದರು.

ಬೆಂಗಳೂರಿನ ಶಾಸಕರ ಭವನದಲ್ಲಿ ಅಭಿಮಾನಿಗಳ ಜೊತೆ ಸಭೆ ನಡೆಸಿದ ಎಂ.ಡಿ.ಲಕ್ಷ್ಮೀ ನಾರಾಯಣ, ಇಂದು ಅಧಿಕೃತ ಕಾಂಗ್ರೆಸ್ ತೊರೆಯುವ ನಿರ್ಧಾರ ಮಾಡಿದ್ದಾರೆ. ಶೀಘ್ರದಲ್ಲೇ ಬಿಜೆಪಿಗೆ ಸೇರಲು ತೀರ್ಮಾನ ಮಾಡಿದ್ದು, ಒಂದೊಮ್ಮೆ ಬಿಜೆಪಿಯಲ್ಲಿ ತೀವ್ರ ವಿರೋಧ ಎದುರಾದರೆ ಆಮ್ ಆದ್ಮಿ ಪಕ್ಷವನ್ನು ಸೇರುವ ಆಯ್ಕೆಯನ್ನು ಅವರು ಸಹ ಇಟ್ಟುಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿರುವ ಲಕ್ಷ್ಮೀನಾರಾಯಣ ಅವರಿಗೆ ಯಡಿಯೂರಪ್ಪ ಹಸಿರು ನಿಶಾನೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಆಪ್ ನಿಂದಲೂ ಎಂಡಿಎಲ್ ಸೆಳೆಯುವ ಪ್ರಯತ್ನ ನಡೆದಿದ್ದು, ಒಂದೆರಡು ಸುತ್ತು ಮಾತುಕತೆ ಸಹ ನಡೆಸಿದ್ದಾರೆ. ಆದರೆ, ಬಹುತೇಕ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಕಾಂಗ್ರೆಸ್ ಪಕ್ಷದ ಓಬಿಸಿ ವಿಭಾಗದ ಅಧ್ಯಕ್ಷರೂ ಆಗಿರುವ ಎಂ ಡಿ ಲಕ್ಷ್ಮಿ ನಾರಾಯಣ ವಿಧಾನ ಪರಿಷತ್​​ಗೆ ತಮ್ಮನ್ನು ಪರಿಗಣಿಸದೆ ಇರುವುದರಿಂದ ಸಾಕಷ್ಟು ಬೇಸರಗೊಂಡು ಪಕ್ಷದ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು. ಬಹಿರಂಗವಾಗಿ ನಾಯಕರ ವಿರುದ್ಧ ಆಕ್ರೋಶ ಸಹ ವ್ಯಕ್ತಪಡಿಸಿದ್ದರು. ಕಳೆದ ವಾರ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಹುಟ್ಟುಹಬ್ಬ ಸಮಾರಂಭದ ಸಿದ್ಧತೆಗೆ ತಮ್ಮನ್ನು ಪರಿಗಣಿಸಿಲ್ಲ ಎಂದು ಬೇಸರಗೊಂಡಿದ್ದರು. ಈ ಸಂಬಂಧ ಪಕ್ಷದ ನಾಯಕರಿಗೆ ಪತ್ರ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕುರಿತು ಲಕ್ಷ್ಮೀ ನಾರಾಯಣ ಮಾತನಾಡಿ, ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಮೂರು ಬಾರಿ ನನಗೆ ಮಾತು ಕೊಟ್ಟು ದ್ರೋಹ ಮಾಡಿದ್ದರು. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ನನಗೆ ಮೋಸ ಮಾಡಿದ್ದಾರೆ. ಹೀಗಾಗಿ ನಮ್ಮ ಅಭಿಮಾನಿಗಳ ಜೊತೆ ಸಭೆ ಮಾಡಿ, ಈ ತೀರ್ಮಾನ ಕೈಗೊಂಡಿದ್ದೇನೆ. ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತೇನೆ. ಬಿಜೆಪಿಯವರು ನನಗೆ ಆಹ್ವಾನ ಕೊಟ್ಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಟಿಪ್ಪುಗೆ ಹೆದರದ ಕೊಡವರು ಸಿದ್ದು ಸುಲ್ತಾನ್​ಗೆ ಹೆದರುತ್ತಾರಾ: ಸಂಸದ ಪ್ರತಾಪ್​ ಸಿಂಹ

ABOUT THE AUTHOR

...view details