ಬೆಂಗಳೂರು:ನಾನು ಯಾವುದೇ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಬಗ್ಗೆ ಹೇಳಿಕೆ ಕೊಟ್ಟಿಲ್ಲ, ಚುನಾವಣೆ ನಂತರ ಒಗ್ಗಟ್ಟಾಗಿ ಮುನ್ನಡೆಯೋಣ ಎಂದಷ್ಟೇ ಹೇಳಿದ್ದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.
ಪ್ರತ್ಯೇಕ ಧರ್ಮದ ಸಂಬಂಧ ತಮ್ಮ ಹೇಳಿಕೆ ವಿವಾದದ ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಚುನಾವಣೆ ನಂತರ ಲಿಂಗಾಯತ-ವೀರಶೈವ ಸಮುದಾಯದ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯುತ್ತೇವೆ ಎಂದಿದ್ದೆ. ಹೋರಾಟ, ಕೂಗು, ಪ್ರತ್ಯೇಕತೆಯ ಭಾಷೆಯನ್ನು ಬಳಸಲೇ ಇಲ್ಲ. ಆದರೆ ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ಉಪ ಪಂಗಡವನ್ನು ಸೇರಿಸಿ ಧರ್ಮದ ಬೇಡಿಕೆ ಇಟ್ಟಿದ್ದೆವು. ಅಲ್ಲದೇ ಈ ಹಿಂದೆ ವೀರಶೈವ ಲಿಂಗಾಯತ ಬೇರೆ ಬೇರೆ ಮಾಡುವುದಾಗಿ ಅಪಪ್ರಚಾರ ಮಾಡಲಾಗಿತ್ತು. ಮಾಧ್ಯಮಗಳಲ್ಲೂ ತಪ್ಪಾಗಿ ಅರ್ಥೈಸಲಾಗಿದೆ. ನಮ್ಮ ಗುರುಗಳು, ಸ್ವಾಮಿಗಳು ಎಲ್ಲರೂ ಕೂಡಿ ಚರ್ಚೆ ಮಾಡಿ ಸಮಾಜಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಮುನ್ನಡೆಯುತ್ತೇವೆ. ಆದರೆ ನಾವೆಲ್ಲರೂ ಕೂಡುತ್ತೇವೆ ಎಂಬ ನನ್ನ ಹೇಳಿಕೆ ಯಾಕೆ ಸಮಸ್ಯೆ ಸೃಷ್ಟಿಸಿದೆ ಎಂಬುದು ಗೊತ್ತಿಲ್ಲ. ಯಾವುದೇ ಪ್ರತ್ಯೇಕ ಧರ್ಮದ ಕೂಗು ಇಲ್ಲ, ಹೋರಾಟದ ಬಗ್ಗೆ ಯಾವುದೇ ಹೇಳಿಕೆ ಕೊಟ್ಟಿಲ್ಲ ಎಂದು ಎಂ.ಬಿ.ಪಾಟೀಲ್ ಇದೇ ವೇಳೆ, ಸ್ಪಷ್ಟಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಬಣ್ಣ :
ಚುನಾವಣೆ ನಂತರ ಎಲ್ಲರೂ ಸೇರಿ ಮುಕ್ತ ಮನಸ್ಸಿನಿಂದ, ಎಲ್ಲರ ಜೊತೆ ಚರ್ಚೆ ಮಾಡಿ ಸಮಾಜಕ್ಕೆ ಒಳ್ಳೆಯದಾಗುವ ನಿರ್ಧಾರ ಕೈಗೊಳ್ಳುತ್ತೇವೆ. ಈ ನಿಟ್ಟಿನಲ್ಲಿ ತಪ್ಪು ಸಂದೇಶ ಹೋಗಿದೆ. ಲಿಂಗಾಯತ ವೀರಶೈವ ಎಲ್ಲರನ್ನೂ ಸೇರಿಸಿ ನಾವು ಮಾನ್ಯತೆ ಕೇಳುತ್ತಿದ್ದೇವೆ. ಆವತ್ತು ಗಡಿಬಿಡಿಯಿಂದ ಹೋರಾಟ ಮಾಡಿದ್ದೆವು, ಎಲ್ಲವನ್ನೂ ತರಾತುರಿಯಲ್ಲಿ ಮಾಡಲಾಗಿತ್ತು. ಚುನಾವಣೆ ಸಂದರ್ಭ ಅದಕ್ಕೆ ರಾಜಕೀಯ ಬಣ್ಣ ಬಳಿಯಲಾಗಿತ್ತು ಎಂದರು.
ನಮಗೆ ಮಾನ್ಯತೆ ಸಿಗಬೇಕು:
ಎಲ್ಲರೂ ಕೂಡಿ, ಸಮಗ್ರ ಚರ್ಚೆ ನಡೆಸಿ ಎಲ್ಲರ ಒಗ್ಗಟ್ಟಿನ ಅಭಿಪ್ರಾಯದೊಂದಿಗೆ ಮುನ್ನಡೆಯುತ್ತೇವೆ. ಪಕ್ಷಾತೀತವಾಗಿ, ರಾಜಕೀಯ ದುರೀಣರನ್ನು ಕೂರಿಸಿ ಸಮಾಲೋಚನೆ ಮೂಲಕ ನಮ್ಮಲ್ಲಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ. ಶಿಕ್ಷಣ, ಉದ್ಯೋಗ ಹಾಗೂ ಮಠಗಳಿಗೆ ನೆರವು ಸಿಗುವ ನಿಟ್ಟಿನಲ್ಲಿ ಮಾನ್ಯತೆ ಸಿಗಬೇಕು. ಈಗ ನಾವು ಒಂದಾಗಲು ಮುಂದಾಗಿದ್ದೇವೆ. ಅದರಿಂದ ಯಾರಿಗಾದರೂ ಸಮಸ್ಯೆಯಾಗುತ್ತಾ? ನಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಎಲ್ಲ 99 ಉಪಪಂಗಡದ ಸಮುದಾಯಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಚರ್ಚೆ ಮಾಡಲಾಗುವುದು ಎಂದು ಅವರು ತಿಳಿಸಿದರು.