ಕರ್ನಾಟಕ

karnataka

ETV Bharat / state

ರಸ್ತೆ ಗುಂಡಿ ತೇಪೆ ಕಾರ್ಯ ಪರಿಶೀಲಿಸಿದ ಮೇಯರ್​ ಗೌತಮ್ ಕುಮಾರ್ ಜೈನ್

ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಹಾಗೂ ಬಿಬಿಎಂಪಿ ಆಯುಕ್ತರು ಅಲಸೂರು ವಾರ್ಡ್ 2ನೇ ಅಡ್ಡ ರಸ್ತೆಯಲ್ಲಿ, ರಸ್ತೆ ಗುಂಡಿಗೆ ಜಲ್ಲಿಪುಡಿ ಹಾಕಿರುವುದನ್ನು ತಪಾಸಣೆ ನಡೆಸಿದರು.

By

Published : Nov 7, 2019, 4:52 AM IST

​ ಗೌತಮ್ ಕುಮಾರ್ ಜೈನ್

ಬೆಂಗಳೂರು:ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಹಾಗೂ ಬಿಬಿಎಂಪಿ ಆಯುಕ್ತರು ಬುಧವಾರ ಅಲಸೂರು ವಾರ್ಡ್ 2ನೇ ಅಡ್ಡ ರಸ್ತೆಯಲ್ಲಿ ರಸ್ತೆ ಗುಂಡಿಗಳಿಗೆ ತೇಪೆ ಹಾಕುತ್ತಿರುವುದನ್ನು ಪರಿಶೀಲನೆ ನಡೆಸಿದರು. ಇದೇ ವೇಳೆ ನಿರಾಶ್ರಿತ ಕೇಂದ್ರಗಳಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು.

ರಸ್ತೆ ಗುಂಡಿ ತೇಪೆ ಕಾರ್ಯ ಪರಿಶೀಲಿಸಿದ ಮೇಯರ್​ ಗೌತಮ್ ಕುಮಾರ್ ಜೈನ್

ಮೊದಲಿಗೆ ಅಲಸೂರು ವಾರ್ಡ್ 2ನೇ ಅಡ್ಡ ರಸ್ತೆಯಲ್ಲಿ ರಸ್ತೆ ಗುಂಡಿಗೆ ಜಲ್ಲಿಪುಡಿ ಹಾಕಿರುವುದನ್ನು ತಪಾಸಣೆ ಮಾಡಿದ ಮೇಯರ್, ವೈಜ್ಞಾನಿಕವಾಗಿ ರಸ್ತೆಗುಂಡಿ ಮುಚ್ಚಬೇಕು ಎಂದು ಮುಖ್ಯ ಅಭಿಯಂತರರಿಗೆ ಸೂಚನೆ ನೀಡಿದರು. ಇದಲ್ಲದೆ ಅಲಸೂರು ವಾರ್ಡ್ ವ್ಯಾಪ್ತಿಯ ಗುರುದ್ವಾರ ಜಂಕ್ಷನ್ ಬಳಿ ರಾಜ ಕಾಲುವೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದನ್ನು ಕಂಡು, ಸಂಬಂಧಪಟ್ಟ ಬೃಹತ್ ನೀರುಗಾಲುವೆ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚನ್ನಕೇಶವ್​ಗೆ ಶೋಕಾಸ್ ನೋಟೀಸ್ ಹಾಗೂ ಗುತ್ತಿಗೆದಾರರ ಮೇಲೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಲು ಆಯುಕ್ತರಿಗೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್, ಎಲ್ಲಾ ಕಡೆ ರಸ್ತೆಗುಂಡಿ ಸಮರ್ಪಕವಾಗಿ ಮುಚ್ಚುತ್ತಿದ್ದಾರೆ. ಮೇಯರ್ ಆದ ಬಳಿಕ ಪಶ್ಚಿಮ ವಾರ್ಡ್​ನಲ್ಲಿ ದಿಚಕ್ರ ವಾಹನದ ಮೂಲಕ ತಪಾಸಣೆ ನಡೆಸಲಾಗಿತ್ತು. ಈ ವೇಳೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ‌ ನೀಡಲಾಗಿತ್ತು. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಇನ್ನೂ ಗುಂಡಿಗಳನ್ನು ಮುಚ್ಚಿಲ್ಲ. ಈ ಸಂಬಂಧ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಆಯುಕ್ತರಿಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಬದ್ಧವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಂತರ ಗೂಡ್ ಶೆಡ್ ರಸ್ತೆಯಲ್ಲಿರುವ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿ ನಿರಾಶ್ರಿತರಿಗಾಗಿ 9 ಕೇಂದ್ರಗಳಿದ್ದು, ಹೊಸದಾಗಿ 22 ನಿರಾಶ್ರಿತ ಕೇಂದ್ರ ನಿರ್ಮಾಣ ಮಾಡಲು ಸ್ಥಳ ಹಾಗೂ ಕಟ್ಟಡಗಳನ್ನು ಗುರುತಿಸಲಾಗಿದೆ. ಈಗಾಗಲೇ ಕಳೆದ ಬಾರಿ ಸುಮಾರು 5,000 ನಿರಾಶ್ರಿತರನ್ನು ಗುರುತಿಸಲಾಗಿದ್ದು, ಇದೀಗ ಎಲ್ಲಾ ವಾರ್ಡ್​ವಾರು ಎನ್.ಜಿ.ಒಗಳ ಮೂಲಕ ಸಮೀಕ್ಷೆ ಪ್ರಾರಂಭಿಸಲಾಗಿದ್ದು, ಎಷ್ಟು ಮಂದಿ ನಿರಾಶ್ರಿತರಿದ್ದಾರೆ ಎಂಬುದನ್ನು ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಲಾಗುತ್ತಿದೆ. 15 ದಿನಕ್ಕೊಮ್ಮೆ ವೈದ್ಯರು ಬಂದು ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ ಎಂದು ಪಾಲಿಕೆ ಕಲ್ಯಾಣ ಅಧಿಕಾರಿ ನಾಗೆಂದ್ರ ನಾಯ್ಕ್ ತಿಳಿಸಿದರು.

ಮೇಯರ್ ಅನುದಾನದಲ್ಲಿ ನಿರಾಶ್ರಿತ ಕೇಂದ್ರ ನಿರ್ಮಾಣ ಮಾಡಲು ಅನುದಾನ ಮೀಸಲಿಡಲಾಗುವುದು. ಕೂಡಲೇ ಕೆಲಸ ಪ್ರಾರಂಭಿಸುವಂತೆ ಮೇಯರ್ ಅಧಿಕಾರಿಗೆ ಸೂಚನೆ ನೀಡಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್ ಉಪಸ್ಥಿತರಿದ್ದರು.

ABOUT THE AUTHOR

...view details